ಜೈಲಿನಲ್ಲಿ ಇದೆಲ್ಲ ಮಾಮೂಲು: ಸಂಸದೆ ಸುಮಲತಾ

Sumalatha Amabreesh: ದರ್ಶನ್​​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ಜೈಲಿನಲ್ಲಿ ಕೈದಿಗಳಿಗೆ ಈ ರೀತಿಯ ಸವಲತ್ತುಗಳು ಸಿಗುತ್ತಿರುವುದು ಮೊದಲೇನಲ್ಲ, ಜೈಲಿನಲ್ಲಿ ಇದು ಮಾಮೂಲು ಎಂಬಂತಾಗಿದೆ ಎಂದಿದ್ದಾರೆ.

ಜೈಲಿನಲ್ಲಿ ಇದೆಲ್ಲ ಮಾಮೂಲು: ಸಂಸದೆ ಸುಮಲತಾ

Updated on: Aug 27, 2024 | 2:55 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿರುವ ಚಿತ್ರಗಳು ವೈರಲ್ ಆಗಿದ್ದು, ಸರ್ಕಾರ ಇದೀಗ ಈ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಏಳು ಮಂದಿ ಜೈಲು ಸಿಬ್ಬಂದಿಯ ಅಮಾನತ್ತು ಸಹ ಮಾಡಲಾಗಿದೆ. ಇಂದು (ಆಗಸ್ಟ್ 27) ಸಂಸದೆ, ದರ್ಶನ್ ಆಪ್ತೆ ಸುಮಲತಾ ಅವರ ಹುಟ್ಟುಹಬ್ಬ. ಇಂದು ಅಂಬರೀಶ್ ಸ್ಮಾರಕಕ್ಕೆ ನಮಿಸಿದ ಬಳಿಕ ದರ್ಶನ್ ರ ಜೈಲುವಾಸದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸುಮಲತಾ, ‘ಜೈಲಿನಲ್ಲಿ ಇದು ಸಾಮಾನ್ಯ’ ಎಂದಿದ್ದಾರೆ.

‘ದರ್ಶನ್ ನಮಗೆ ಆಪ್ತರು. ನಾನು ಮಾತನಾಡಿದರೆ ವಿವಾದ ಆಗುತ್ತೆ, ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ, ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ? ಈಗ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಮಾಧ್ಯಮಗಳು ಈ ಮುಂಚೆ ಏಕೆ ಕೇಳಲಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ಐಪಿಎಸ್ ಅಧಿಕಾರಿ ರೂಪಾ ಅವರು ಈ ಮೊದಲು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ಬಯಲು ಮಾಡಿದ್ದರು. ಆಗ ನೀವು ಸಹ ಪ್ರಶ್ನೆ ಮಾಡಿರಲಿಲ್ಲ ಏಕೆ?’ ಎಂದು ಮಾಧ್ಯಮಗಳನ್ನು ಸುಮಲತಾ ಪ್ರಶ್ನೆ ಮಾಡಿದರು.

ಇದನ್ನೂ ಓದಿ:ದರ್ಶನ್​ಗೆ ಎಣ್ಣೆ-ಬಾಡೂಟ, ನನ್ನ ಮಗನಿಗೆ ಜೈಲೂಟವಾದರೂ ಸರಿಯಾಗಿ ಸಿಗುತ್ತಿದೆಯಾ ಅಂತ ಗೊತ್ತಿಲ್ಲ: ಆರೋಪಿ ನಂದೀಶ್ ತಂದೆ

‘ಯಾರೇ ಜೈಲಿನಲ್ಲಿ ಬಂಧಿಗಳಿದ್ದರೂ ಸ್ವಲ್ಪ ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ, ಪರಪ್ಪನ ಅಗ್ರಹಾರ ಮಾತ್ರವಲ್ಲ, ಪ್ರತಿ ಜೈಲಿನಲ್ಲಿಯೂ ಇದು ನಡೆಯುತ್ತಿದೆ. ಇದು ಗುಟ್ಟೇನೂ ಅಲ್ಲ. ಅಮೆರಿಕ ಜೈಲಿನಲ್ಲಿ, ಮೊಬೈಲ್ ಫೋನ್, ಸಿಗರೇಟು, ಡ್ರಗ್ಸ್ ಸಹ ಸಿಗುತ್ತೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಈಗ ನಡೆದಿರುವುದು ಸರಿಯಲ್ಲ, ಆದರೆ ಇದು ಭ್ರಷ್ಟಾಚಾರ. ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವಿದು. ಆದರೆ ನೀವು (ಮಾಧ್ಯಮಗಳು) ಒಬ್ಬ ವ್ಯಕ್ತಿಯನ್ನು ಯಾಕೆ ಗುರಿ ಮಾಡಿಕೊಳ್ಳುತ್ತಿದ್ದೀರಿ? ಪ್ರಶ್ನೆ ಮಾಡಬೇಕಿರುವುದು, ಜೈಲಿನ ಅಧಿಕಾರಿಗಳನ್ನು, ಇಲಾಖೆಯನ್ನು, ಜೈಲು ವ್ಯವಸ್ಥೆಯನ್ನು ಸರಿಮಾಡಬೇಕಾದುದು ಸಚಿವಾಲಯ ಜವಾಬ್ದಾರಿ’ ಎಂದು ಸಹ ಸುಮಲತಾ ಹೇಳಿದ್ದಾರೆ.

ಜೈಲಿನಲ್ಲಿ ಕೆಲವು ರೌಡಿಶೀಟರ್​ಗಳ ಜೊತೆಗೆ ದರ್ಶನ್ ಒಡನಾಟ ಹೊಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸುಮಲತಾ, ಜೈಲಿನಲ್ಲಿ ಒಳ್ಳೆಯವರು ಇರಲು ಸಾಧ್ಯವಾ? ಇರೋರೆಲ್ಲ ಕೆಟ್ಟವರೇ ಅಲ್ಲವ? ಇನ್ಯಾರನ್ನು ಅವರು ಮಾತನಾಡಿಸಬೇಕು? ಹಾಗಿದ್ದರೆ, ನಿಮ್ಮ ಪ್ರಕಾರ ಯಾರನ್ನೂ ಮಾತನಾಡಿಸಬಾರದಾ?’ ಎಂದು ಸುಮಲತಾ ಕೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ