
ಸಾಧು ಕೋಕಿಲ ಅವರು ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡರೆ ಥಿಯೇಟರ್ ರೂಫ್ ಕಿತ್ತು ಹೋಗುವ ರೀತಿಯಲ್ಲಿ ಸಿಳ್ಳೆ ಬೀಳುತ್ತದೆ. ಸ್ಟಾರ್ ಹೀರೋಗೆ ಇರುವಷ್ಟೇ ಕ್ರೇಜ್ ಅವರ ಮೇಲೂ ಇದೆ. ಈಗ ಸಾಧು ಕೋಕಿಲ ಅವರು ತಮ್ಮ ಗುರುವನ್ನು ನೆನೆದಿದ್ದಾರೆ. ಇಲ್ಲಿಯವರೆಗೆ ಬಂದು ನಿಲ್ಲಲು ಕಾರಣ ಆದ ಉಪೇಂದ್ರ ಅವರಿಗೆ ಧನ್ಯವಾದ ಹೇಳಿದ್ದಾರೆ.
ಜೀ ಕನ್ನಡ ವಾಹಿನಿ ‘ಜೀ ಎಂಟರ್ಟೇನರ್ಸ್ ಕಾಮಿಡಿ ಅವಾರ್ಡ್ಸ್ 2025’ ನಡೆಸುತ್ತಿದೆ. ಇದರ ಶೂಟಿಂಗ್ ಪೂರ್ಣಗೊಂಡಿದ್ದು, ಈ ವಾರಾಂತ್ಯದಲ್ಲಿ ಇದು ಪ್ರಸಾರ ಕಾಣಲಿದೆ. ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಈ ಪ್ರಶಸ್ತಿ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಅವಾರ್ಡ್ ಸ್ವೀಕರಿಸಿದ ಸಾಧು ಕೋಕಿಲ ಅವರು ಉಪೇಂದ್ರ ಅವರನ್ನು ನೆನಪಿಸಿಕೊಂಡರು.
‘ಜೀ ಎಂಟರ್ಟೇನರ್ಸ್ ಕಾಮಿಡಿ ಅವಾರ್ಡ್ಸ್ 2025’ನಲ್ಲಿ ‘ಹಾಸ್ಯ ಚಕ್ರವರ್ತಿ ನರಸಿಂಹರಾಜು ಪ್ರಶಸ್ತಿ’ ಸಾಧು ಕೋಕಿಲ ಅವರಿಗೆ ಸಿಕ್ಕಿದೆ. ಇದನ್ನು ಉಮೇಶ್ ಅವರು ಸಾಧು ಕೋಕಿಲಾಗೆ ನೀಡಿದರು. ಈ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಸಾಧು ಕೋಕಿಲ ಅವರು, ‘ನಾನಾಗಿರಬಹುದು, ಮನೋಹರ್ ಆಗಿರಬಹುದು, ಗುರು ಕಿರಣ್ ಆಗಿರಬಹುದು, ನಮ್ಮಲ್ಲಿದ್ದ ಟ್ಯಾಲೆಂಟ್ ತೆಗೆದಿದ್ದು ಅವರೇ’ ಎಂದು ಸಾಧು ಕೋಕಿಲ ಹೇಳಿದರು.
‘ಮ್ಯೂಸಿಕ್ ಡೈರೆಕ್ಟರ್ ಮಾಡಿದ್ದು ಅವರೇ, ಹಾಸ್ಯ ನಟನಾಗಿ ಮಾಡಿದ್ದೂ ಅವರೇ, ಡೈರೆಕ್ಷನ್ ಮಾಡ್ಸಿದ್ದೂ ಅವರೇ. ಉಪೇಂದ್ರ ಇಲ್ಲ ಅಂದ್ರೆ ನಾನು ಇಲ್ಲ’ ಎಂದು ಹೆಮ್ಮೆಯಿಂದ ಸಾಧು ಕೋಕಿಲ ಅವರು ಹೇಳಿಕೊಂಡರು.
ಇದನ್ನೂ ಓದಿ: ಗೌರವ ಡಾಕ್ಟರೇಟ್ ಪಡೆದ ಸಾಧು ಕೋಕಿಲ; ಸಾಧು ನಹೀ ಡಾಕ್ಟರ್ ಸಾಧು ಬೋಲೋ
ಸಾಧು ಕೋಕಿಲ ಅವರು ‘ಶ್’ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟರು. ಈ ವೇಳೆ ಅಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅಲ್ಲಿಂದ ಅವರ ನಟನಾ ವೃತ್ತಿ ಆರಂಭ ಆಯಿತು. ಆ ಬಳಿಕ ಅವರು ಹಾಸ್ಯನಟನಾಗಿ ಹೆಚ್ಚು ಗುರುತಿಸಿಕೊಂಡರು. ಅವರು ಕನ್ನಡ ಚಿತ್ರರಂಗದ ಬೇಡಿಕೆಯ ಕಾಮಿಡಿಯನ್. ಇತ್ತೀಚೆಗೆ ರಿಲೀಸ್ ಆದ ಉಪೇಂದ್ರ ನಟನೆಯ ‘ಯುಐ’ ಚಿತ್ರದಲ್ಲಿ ಸಾಧು ಕೋಕಿಲ ಅವರು ಬಣ್ಣ ಹಚ್ಚಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.