ಸಂಚಾರಿ ವಿಜಯ್​ಗೆ ಅಪಘಾತವಾದ ದಿನ ನಿಜಕ್ಕೂ ನಡೆದಿದ್ದೇನು? ಪೊಲೀಸರಿಗೆ ಹೇಳಿಕೆ ನೀಡಿದ ಸ್ನೇಹಿತ ನವೀನ್​

| Updated By: ಮದನ್​ ಕುಮಾರ್​

Updated on: Jul 02, 2021 | 11:48 AM

Sanchari Vijay Accident Case: ಜೂ.12ರಂದು ಭೀಕರ ರಸ್ತೆ ಅಪಘಾತ ಸಂಭವಿಸಿದಾಗ ನವೀನ್​ ಬೈಕ್​ ಓಡಿಸುತ್ತಿದ್ದರು. ಹಿಂದೆ ಕುಳಿತಿದ್ದ ಸಂಚಾರಿ ವಿಜಯ್​ಗೆ ಮಾರಣಾಂತಿಕವಾಗಿ ಪೆಟ್ಟಾಗಿತ್ತು.

ಸಂಚಾರಿ ವಿಜಯ್​ಗೆ ಅಪಘಾತವಾದ ದಿನ ನಿಜಕ್ಕೂ ನಡೆದಿದ್ದೇನು? ಪೊಲೀಸರಿಗೆ ಹೇಳಿಕೆ ನೀಡಿದ ಸ್ನೇಹಿತ ನವೀನ್​
ಸಂಚಾರಿ ವಿಜಯ್​
Follow us on

ಖ್ಯಾತ ನಟ ಸಂಚಾರಿ ವಿಜಯ್​ ಅವರು ರಸ್ತೆ ಅಪಘಾತಕ್ಕೆ ಒಳಗಾಗಿ ನಿಧನರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸ್ನೇಹಿತ ನವೀನ್​ ಅವರು ಪೊಲೀಸರ ಎದುರು ತಮ್ಮ ಹೇಳಿಕೆ ನೀಡಿದ್ದಾರೆ. ಜೂ.12ರಂದು ಭೀಕರ ರಸ್ತೆ ಅಪಘಾತ ಸಂಭವಿಸಿದಾಗ ನವೀನ್​ ಬೈಕ್​ ಓಡಿಸುತ್ತಿದ್ದರು. ಹಿಂದೆ ಕುಳಿತಿದ್ದ ಸಂಚಾರಿ ವಿಜಯ್​ಗೆ ಮಾರಣಾಂತಿಕವಾಗಿ ಪೆಟ್ಟಾಗಿತ್ತು. ಅದು ಅವರ ಪ್ರಾಣಕ್ಕೆ ಕುತ್ತು ತಂದಿತು. ಆ ಬಗ್ಗೆ ಪೊಲೀಸರಿಗೆ ನವೀನ್​ ಮಾಹಿತಿ ನೀಡಿದ್ದಾರೆ.

‘ಜೂನ್ 12ರಂದು ಸ್ನೇಹಿತರ ಮನೆಯಲ್ಲಿ ಸಭೆ ಸೇರಿದ್ದೆವು. ಸಭೆಯಲ್ಲಿ ನಟ ಸಂಚಾರಿ ವಿಜಯ್ ಮತ್ತು ಇತರೆ ಸ್ನೇಹಿತರು ಇದ್ದೆವು. ಕೊರೊನಾ ಕಿಟ್ ಹಂಚಿಕೆ ಸಂಬಂಧ ಚರ್ಚಿಸಲಾಗಿತ್ತು. ಚರ್ಚೆಯ ವೇಳೆ ನನಗೆ ಮನೆಯಿಂದ ಫೋನ್ ಬಂದಿತ್ತು. ಪತ್ನಿಗೆ ಮಾತ್ರೆಯನ್ನು ತರುವುದಕ್ಕೆ ನಾನು ಹೋಗಬೇಕಾಯಿತು. ಬೈಕ್‌ನಲ್ಲಿ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗ್ತಿದ್ದೆ. ಈ ವೇಳೆ ಸಂಚಾರಿ ವಿಜಯ್ ಸಹ ನನ್ನ ಜತೆ ಬಂದರು’ ಎಂದು ನವೀನ್​ ಹೇಳಿಕೆ ನೀಡಿದ್ದಾರೆ.

‘ಮನೆ ಹತ್ತಿರವೇ ಶಾಪ್ ಇದ್ದ ಕಾರಣ ಹೆಲ್ಮೆಟ್ ಹಾಕಲಿಲ್ಲ. ಮಾತ್ರೆ ಖರೀದಿಸಿ ವಾಪಸ್ ಬರಬೇಕಾದರೆ ಅಪಘಾತ ಆಯಿತು. ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿತ್ತು’ ಎಂದು ಆಕ್ಸಿಡೆಂಟ್​ಗೆ ಕಾರಣವನ್ನು ನೀಡಿದ್ದಾರೆ ನವೀನ್​. ಅಪಘಾತದಲ್ಲಿ ನವೀನ್​ಗೂ ಗಾಯಗಳಾಗಿದ್ದವು. ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಈಗ ಡಿಸ್ಚಾರ್ಜ್​ ಆಗಿದ್ದಾರೆ. ಡಿಸ್ಚಾರ್ಜ್​ ಆದ ಬಳಿಕ ಜಯನಗರ ಸಂಚಾರಿ ಪೊಲೀಸ್​ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಠಾಣಾ ಜಾಮೀನಿನ ಮೇಲೆ ಹೇಳಿಕೆ ಪಡೆದು ಅವರನ್ನು ಬಿಡುಗಡೆ ಮಾಡಲಾಗಿದೆ.

ಅಪಘಾತದ ತೀವ್ರತೆಗೆ ಸಂಚಾರಿ ವಿಜಯ್​ ಅವರ ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದ ಸುದ್ದಿ ಇಡೀ ಕರುನಾಡಿಗೆ ಆಘಾತ ಉಂಟು ಮಾಡಿತ್ತು.

ಇದನ್ನೂ ಓದಿ:

ಅಮೆರಿಕದಲ್ಲಿ ಸಂಚಾರಿ ವಿಜಯ್​ಗೆ ಗೌರವ; ಪ್ರತಿಷ್ಠಿತ ಫ್ರಾಂಕ್ಲಿನ್​ ಥಿಯೇಟರ್​ನಿಂದ ನಮನ

ಸಂಚಾರಿ ವಿಜಯ್​ ಬಳಿಕ ಮತ್ತೋರ್ವ ನಟನಿಗೆ ರಸ್ತೆ ಅಪಘಾತ; ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ