ಮೊದಲ ಬಾರಿಗೆ ಸಿನಿಮಾ ಹಾಡಿಗೆ ಧ್ವನಿ ನೀಡಿದ ಶಿಲ್ಪಾ ಗಣೇಶ್; ಜುಲೈ 24ಕ್ಕೆ ‘ಪಿಚ್ಚರ್’ ಬಿಡುಗಡೆ

ನಿರ್ಮಾಪಕಿಯಾಗಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿರುವ ಶಿಲ್ಪಾ ಗಣೇಶ್ ಅವರು ಈಗ ಗಾಯಕಿಯೂ ಆಗಿದ್ದಾರೆ. ತುಳು ಮತ್ತು ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ‘ಪಿಚ್ಚರ್’ ಸಿನಿಮಾವನ್ನು ಶಿಲ್ಪಾ ಅವರೇ ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಈ ಚಿತ್ರದ ಹಾಡಿಗೆ ಧ್ವನಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಮೊದಲ ಬಾರಿಗೆ ಸಿನಿಮಾ ಹಾಡಿಗೆ ಧ್ವನಿ ನೀಡಿದ ಶಿಲ್ಪಾ ಗಣೇಶ್; ಜುಲೈ 24ಕ್ಕೆ ‘ಪಿಚ್ಚರ್’ ಬಿಡುಗಡೆ
Shilpa Ganesh

Updated on: May 18, 2026 | 4:20 PM

ಸಾಮಾನ್ಯವಾಗಿ ಪ್ರಚಾರದಿಂದ ದೂರವಿರುವ ಶಿಲ್ಪಾ ಗಣೇಶ್ (Shilpa Ganesh) ಅವರು ಈಗ ಸುದ್ದಿಯಲ್ಲಿದ್ದಾರೆ. ತುಳು ಮನೆಮಾತು ಆಗಿರುವ ಶಿಲ್ಪಾ ಅವರಿಗೆ, ತಮ್ಮ ಮಾತೃಭಾಷೆಯಲ್ಲಿ ಸಿನಿಮಾ ನಿರ್ಮಿಸಬೇಕು ಎನ್ನುವ ಹಂಬಲ ಈಗ ಈಡೇರುತ್ತಿದೆ. ಕನ್ನಡದಲ್ಲಿ ನಿರ್ಮಾಪಕಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಲ್ಪಾ ಅದ್ದೂರಿಯಾಗಿ ನಿರ್ಮಿಸಿರುವ ತುಳು ಸಿನಿಮಾ ‘ಪಿಚ್ಚರ್’ (Picture Movie) ಜುಲೈ 24ರಂದು ತೆರೆಗೆ ಬರಲಿದೆ. ತುಳು (Tulu) ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಿದೆ. ತುಳು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಮಾತ್ರವಲ್ಲದೆ, ಈ ಸಿನಿಮಾದ ಮೂಲಕ ಶಿಲ್ಪಾ ಗಣೇಶ್ ಅವರು ಗಾಯಕಿಯಾಗಿ ಪರಿಚಯವಾಗುತ್ತಿದ್ದಾರೆ ಎಂಬುದು ವಿಶೇಷ.

ಈಗಾಗಲೇ ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಿರುವ ‘ಗೋಕುಲದ ರಾಧೆ’ ಹಾಡಿಗೆ ಶಿಲ್ಪಾ ಗಣೇಶ್ ಅವರು ಧ್ವನಿ ನೀಡಿದ್ದಾರೆ. ಸ್ಯಾಮುವೆಲ್ ಅಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಸ್ಕರಣ್ ಸಿಂಗ್ ಜೊತೆ ಶಿಲ್ಪಾ ಗಣೇಶ್ ಅವರು ಹಾಡಿದ್ದಾರೆ. ಮೊದಲಿಂದಲೂ ಹಾಡುವ ಹವ್ಯಾಸ ಇರುವ ಶಿಲ್ಪಾ ಅವರು ಸಿನಿಮಾಗಾಗಿ ಹಾಡಿರುವುದು ಇದೇ ಮೊದಲು. ಶಿಲ್ಪಾ ಅವರ ಕಂಠಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿಲ್ಪಾ ಗಣೇಶ್ ಅವರು ಕೇವಲ ನಿರ್ಮಾಣದ ಹಿಂದೆ ಇರುವ ವ್ಯಕ್ತಿಯಲ್ಲ. ಕಲೆಯ ವಿವಿಧ ಆಯಾಮಗಳತ್ತ ಆಸಕ್ತಿ ಹೊಂದಿರುವ ಸೃಜನಶೀಲ ವ್ಯಕ್ತಿ ಎಂದು ಚಿತ್ರತಂಡ ಹೇಳಿದೆ.

ತುಳು ಸಿನಿಮಾಗಳಿಗೆ ಸೀಮಿತ ಬಂಡವಾಳದ ಕಾರಣ ಈ ತನಕ ಕಾಶ್ಮೀರದಲ್ಲಿ ಚಿತ್ರೀಕರಣ ನಡೆದಿಲ್ಲ. ಇದೇ ಮೊದಲ ಬಾರಿಗೆ ಅಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ. ನಿತ್ಯಪ್ರಕಾಶ್, ಅಮೃತ ಸುದು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತುಳು ಚಿತ್ರರಂಗದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಗಣೇಶ್ ಅವರು ಕಾಣಿಸಿಕೊಂಡಿದ್ದಾರೆ.

‘ಗೋಕುಲದ ರಾಧೆ’ ಹಾಡು:

ತುಳು ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳನ್ನು ನೀಡಬೇಕು ಎಂಬ ಆಶಯ ಶಿಲ್ಪಾ ಗಣೇಶ್ ಅವರದ್ದು. ಸಾಕಷ್ಟು ತುಳು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಂದೀಪ್ ಬೆದ್ರ ರಚನೆ ಮತ್ತು ನಿರ್ದೇಶನದಲ್ಲಿ ‘ಪಿಚ್ಚರ್’ ಸಿನಿಮಾ ಮೂಡಿಬರುತ್ತಿದೆ. ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ ಅವರು ನಟಿಸಿದ್ದಾರೆ. ಹೆಸರಾಂತ ಛಾಯಾಗ್ರಾಹಕರಾದ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ

ಗಣೇಶ್ ನಟನೆಯ ‘ಮಳೆಯಲಿ ಜೊತೆಯಲಿ’, ‘ಕೂಲ್’, ‘ಮುಗುಳುನಗೆ’ ಮತ್ತು ‘ಗೀತಾ’ ಚಿತ್ರಗಳನ್ನು ಶಿಲ್ಪಾ ಅವರು ನಿರ್ಮಿಸಿದ್ದಾರೆ. ನಿರ್ಮಾಪಕಿಯಾಗಿ ಅವರು ವ್ಯವಹಾರದ ಜೊತೆಗೆ ಭಾವನಾತ್ಮಕ ಮೌಲ್ಯ ಇರುವ ಕಥೆಗಳತ್ತ ಒಲವು ತೋರಿಸುತ್ತಾರೆ. ಈ ಕಾರಣದಿಂದ ‘ಪಿಚ್ಚರ್’ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ಕನ್ನಡ ಸಿನಿಮಾಗಳ ಜೊತೆಗೆ ವರ್ಷಕ್ಕೆ ಒಂದಾದರೂ ತುಳು ಚಿತ್ರ ನಿರ್ಮಿಸುವ ಯೋಚನೆ ಶಿಲ್ಪಾ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us