
ರಾಜ್ಕುಮಾರ್ ಕಂಠದ ಬಗ್ಗೆ ಸಂಜಯ್ ನಾಗ್ ಹೆಸರಿನ ಯುವ ಗಾಯಕ ಟೀಕೆ ಮಾಡಿದ್ದರು. ರಾಜ್ಕುಮಾರ್ ಓರ್ವ ಹಾರಿಬಲ್ ಗಾಯಕ ಎಂದು ಅವರು ಹೇಳಿದ್ದರು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸಂಜಯ್ ಬಗ್ಗೆ ಟೀಕೆಗಳು ವ್ಯಕ್ತವಾದವು. ರಾಜ್ಕುಮಾರ್ ಓರ್ವ ಶ್ರೇಷ್ಠ ಗಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಸಾವಿರಾರು ಹಾಡುಗಳನ್ನು ಹಾಡಿ ಸಂಗೀತ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ ಎಸ್ಪಿ ಬಾಲಸುಬ್ರಮಣ್ಯಂ ಅವರೂ ರಾಜ್ಕುಮಾರ್ ಧ್ವನಿಗೆ ಮರುಳಾಗಿದ್ದರು.
‘ರಾಜ್ಕುಮಾರ್ ಒಳ್ಳೆಯ ಗಾಯಕರು. ಕ್ಲಾಸಿಕಲ್ ಮ್ಯೂಸಿಕ್ನ ಕಲಿತವರು. ಆದರೂ ಅವರು ಹಾಡಲಿಲ್ಲ. ತಾವು ಹಾಡದೇ ಇರುವುದರಿಂದ ಬೇರೆಯವರಿಗೆ ಅವಕಾಶ ಸಿಗುತ್ತಿದೆ. ಅದಕ್ಕೆ ಏಕೆ ಅಡ್ಡಿಯಾಗಬೇಕು ಎಂಬುದು ರಾಜ್ಕುಮಾರ್ ಆಲೋಚನೆ ಆಗಿತ್ತು’ ಎಂದು ಅಣ್ಣಾವ್ರ ವಿಶಾಲ ಆಲೋಚನೆಯ ಬಗ್ಗೆ ಬಾಲಸುಬ್ರಮಣ್ಯಂ ಅವರು ಹೇಳಿದ್ದರು.
‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡನ್ನು ರಾಜ್ಕುಮಾರ್ ಬಳಿ ಹಾಡಿಸಬೇಕು ಎಂದು ಸಂಗೀತ ಸಂಯೋಜಕ ಜಿಕೆ ವೆಂಕಟೇಶ್ ಒತ್ತಾಯಿಸಿದರು. ‘ಈ ಹಾಡು ಹಾಡಿದ ಬಳಿಕ ಎಲ್ಲರೂ ರಾಜ್ಕುಮಾರ್ ಅವರೇ ಹಾಡಬೇಕು ಎಂದು ಒತ್ತಡ ಹೇರೋಕೆ ಪ್ರಾರಂಭಿಸಿದರು. ಆ ಬಳಿಕ ಅವರು ಈ ಹಾಡುಗಳನ್ನು ಹಾಡಿದರು’ ಎಂದು ಎಸ್ಪಿಬಿ ಹೇಳಿದ್ದರು.
ಇದನ್ನೂ ಓದಿ: ರಾಜ್ಕುಮಾರ್ ಸಿನಿಮಾಗಳು ಎವರ್ಗ್ರೀನ್ ಆಗಲು ಅವರು ಬಳಸುತ್ತಿದ್ದುದು ಇದೇ ತಂತ್ರ
ರಾಜ್ಕುಮಾರ್ ಅವರು ಹಾಡಿದ ‘ಯಾರೇ ಕೂಗಾಡಲಿ..’ ಹಾಡು ಅಪಾರ ಮನ್ನಣೆ ಪಡೆಯಿತು. ರಾಜ್ಕುಮಾರ್ ಶ್ರೇಷ್ಠ ಗಾಯಕ ಎಂಬುದು ಈ ಹಾಡಿನ ಮೂಲಕ ಎಲ್ಲರಿಗೂ ಗೊತ್ತಾಯಿತು. ಆ ಬಳಿಕ ಅವರು ಅನೇಕ ಹಾಡುಗಳನ್ನು ಹಾಡಿದರು. ಇದಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿಗಳು ಕೂಡ ಬಂದವು.
‘ರಾಜ್ಕುಮಾರ್ ಓರ್ವ ಉತ್ತಮ ಕಲಾವಿದ. ಆದರೆ, ಅವರು ಓರ್ವ ಹಾರಿಬಲ್ ಸಿಂಗರ್’ ಎಂದು ಸಂಜಯ್ ನಾಗ್ ಟ್ವೀಟ್ ಮಾಡಿದ್ದರು. ಇದನ್ನು ಅನೇಕರು ಟೀಕಿಸಿದರು. ಅವರ ಬಗ್ಗೆ ಅದೆಷ್ಟು ಟೀಕೆಗಳು ವ್ಯಕ್ತವಾದವು ಎಂದರೆ ತಮ್ಮ ಟ್ವಿಟರ್ ಖಾತೆಯನ್ನೇ ಡಿ ಆ್ಯಕ್ಟೀವೇಟ್ ಮಾಡಬೇಕಾದ ಪರಿಸ್ಥಿತಿ ಅವರಿಗೆ ಬಂದೊದಗಿತು. ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.