ನಟ ದರ್ಶನ್ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್; ದಾಸ ಈಗ ಸ್ವತಂತ್ರ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಮೀನು ಷರತ್ತುಗಳನ್ನು ಕರ್ನಾಟಕ ಹೈಕೋರ್ಟ್ ಸಡಿಲಿಸಿದೆ. ಮೊದಲು ಕೋರ್ಟ್ನ ಅನುಮತಿಯಿಲ್ಲದೆ ಬೆಂಗಳೂರು ತೊರೆಯಲು ಅವರಿಗೆ ಅವಕಾಶವಿರಲಿಲ್ಲ. ಆದರೆ, ಈಗ ಹೊಸ ಷರತ್ತುಗಳಿಂದ ಅವರು ದೇಶದ ಒಳಗೆ ಎಲ್ಲಿ ಬೇಕಾದರೂ ತೆರಳಬಹುದು. ‘ಡೆವಿಲ್’ ಸಿನಿಮಾ ಶೂಟಿಂಗ್ಗಾಗಿ ಈ ಆದೇಶ ಅವರಿಗೆ ಸಹಾಯಕವಾಗಲಿದೆ.

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾದರು. ಆ ಬಳಿಕ ಅವರಿಗೆ ಎದುರಾದ ಸಮಸ್ಯೆಗಳು ಒಂದೆರಡಲ್ಲ. ಅವರಿಗೆ ಕೆಲ ತಿಂಗಳ ಹಿಂದೆ ಜಾಮೀನು ಸಿಕ್ಕಿದೆ. ಆ ಬಳಿಕ ಅವರು ಬೆಂಗಳೂರು ಬಿಟ್ಟು ಎಲ್ಲೇ ತೆರಳಬೇಕೂ ಎಂದರೂ ಕೋರ್ಟ್ನಿಂದ ಅನುಮತಿ ಪಡೆಯಬೇಕಿತ್ತು. ಆದರೆ, ಈಗ ಕರ್ನಾಟಕ ಹೈಕೋರ್ಟ್ ನಿಯಮಗಳನ್ನು ಸಡಿಲಿಸಿದೆ. ಇದರಿಂದ ದರ್ಶನ್ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು. ಇದರಿಂದ ದರ್ಶನ್ ಅವರು ಎಲ್ಲೇ ತೆರಳಬೇಕಾದರೂ ಕೋರ್ಟ್ನ ಅನುಮತಿ ಪಡೆದೇ ಹೋಗಬೇಕಿತ್ತು. ಹೀಗಾಗಿ, ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್ಗೆ ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು.
‘ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ’ ಎಂದು ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಆದಾಗ್ಯೂ, ಹೈಕೋರ್ಟ್ ದರ್ಶನ್ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ‘ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ’ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಅವರು ರಿಲೀಫ್ ಆಗಿದ್ದಾರೆ.
ದರ್ಶನ್ ಅವರು ‘ಡೆವಿಲ್’ ಸಿನಿಮಾದ ಶೂಟ್ನಲ್ಲಿ ಬ್ಯುಸಿ ಆಗಬೇಕಿದೆ. ಇದಕ್ಕೆ ಅವರು ನಾನಾ ಕಡೆಗಳಿಗೆ ತೆರಳಬೇಕಾಗುತ್ತದೆ. ಆಗ ಪ್ರತಿ ಬಾರಿ ಅವರು ಕೋರ್ಟ್ನ ಮೊರೆ ಹೋಗೋಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ದರ್ಶನ್ ಅವರು ಷರತ್ತುಗಳ ಸಡಿಲಿಕೆ ಮಾಡುವಂತೆ ಕೋರಿದ್ದರು.
ಇದನ್ನೂ ಓದಿ: ದರ್ಶನ್ ಕಾಲಿಗೆ ಬಿದ್ದ ಅಭಿಮಾನಿ; ಡಿ ಬಾಸ್ ಪ್ರತಿಕ್ರಿಯೆ ಏನು?
ವದಂತಿ
ದರ್ಶನ್ ಅವರು ಇಂದಿನಿಂದ (ಫೆಬ್ರವರಿ 28) ‘ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ, ಈ ಸುದ್ದಿಯಲ್ಲಿ ಸತ್ಯವಿಲ್ಲ. ದರ್ಶನ್ ಅವರಿಗೆ ಬೆನ್ನು ನೋವು ಬಹುವಾಗಿ ಕಾಡುತ್ತಿದೆ. ಹೀಗಾಗಿ, ಇದಕ್ಕೆ ಅವರು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ನೋವು ಪೂರ್ಣ ಗುಣಮುಖವಾದ ಬಳಿಕವಷ್ಟೆ ಅವರು ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎಂದು ಅವರ ಆಪ್ತ ಬಳಗದವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:37 am, Fri, 28 February 25