
ನಟ ದರ್ಶನ್ (Darshan) ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈಗಾಗಲೇ ಅದರ ವಿಚಾರಣೆ ನಡೆದಿದೆ. ದರ್ಶನ್ಗೆ ಜಾಮೀನು ನೀಡುವಾಗ ಹೈಕೋರ್ಟ್ ಅನುಸರಿಸಿದ್ದ ಕ್ರಮ ಸೂಕ್ತವಾಗಿಲ್ಲ ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯ ತಿಳಿಸಿತ್ತು. ಈ ಮೇಲ್ಮನವಿಯ ಆದೇಶವನ್ನು ಕಾಯ್ದಿರಿಸಲಾಗಿತ್ತು. ಗುರುವಾರ (ಆಗಸ್ಟ್ 14) ತೀರ್ಪು ಹೊರಬರಲಿದೆ. ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ದರ್ಶನ್, ಪವಿತ್ರಾ ಗೌಡ (Pavithra Gowda) ಮುಂತಾದವರ ಭವಿಷ್ಯ ನಿಂತಿದೆ.
ಆಗಸ್ಟ್ 14ರ ಕೇಸ್ ಪಟ್ಟಿಯಲ್ಲಿ ದರ್ಶನ್ ಕೇಸ್ ಕೂಡ ಲಿಸ್ಟ್ ಆಗಿದೆ. ಹೆಚ್ಚುವರಿ ಪಟ್ಟಿಯಲ್ಲಿ 3ನೇ ಪ್ರಕರಣವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ. ಒಂದು ವೇಳೆ ಜಾಮೀನು ರದ್ದಾದರೆ ದರ್ಶನ್ ಅವರು ಮತ್ತೆ ಜೈಲು ವಾಸ ಅನುಭವಿಸಬೇಕಾಗುತ್ತದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರು ಅರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ದಿನ ಕಳೆದು ಬಂದಿದ್ದಾರೆ. ಮೊದಲು ಅನಾರೋಗ್ಯದ ಕಾರಣಕ್ಕೆ ಅವರಿಗೆ ಜಾಮೀನು ಸಿಕ್ಕಿತ್ತು. ಬಳಿಕ ರೆಗ್ಯುಲರ್ ಬೇಲ್ ಸಿಕ್ಕಿತು. ಆದ್ದರಿಂದ ಅವರು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸಿನಿಮಾದ ಕೆಲಸಗಳು ಇನ್ನೂ ಬಾಕಿ ಇವೆ. ಜಾಮೀನು ರದ್ದಾದ್ದರೆ ಸಿನಿಮಾ ಕೆಲಸ ಮತ್ತೆ ವಿಳಂಬ ಆಗಲಿದೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ. ಆತನಿಗೆ ಬುದ್ದಿ ಕಲಿಸಲು ಡಿ ಗ್ಯಾಂಗ್ನವರು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದಿದ್ದರು. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು. ಆದ್ದರಿಂದ ಆತನ ಸಾವು ಸಂಭವಿಸಿತು. ಈ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಕೈಮೇಲೆ ಪವಿತ್ರಾ ಟ್ಯಾಟೂ ಹಾಕಿಸಿಕೊಂಡ ದರ್ಶನ್ ಅಭಿಮಾನಿ
ಮೊದಲಿಗೆ ಬೆನ್ನು ನೋವಿನ ಕಾರಣದಿಂದ ದರ್ಶನ್ ಜಾಮೀನು ಪಡೆದಿದ್ದರು. ಆದರೆ ನಂತರ ಅವರು ಶಸ್ತ್ರ ಚಿಕಿತ್ಸೆ ಮಾಡಿಸಲಿಲ್ಲ. ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಿನಿಮಾ ಚಿತ್ರೀಕರಣದಲ್ಲೂ ಪಾಲ್ಗೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.