ಸೂಲಗಿತ್ತಿ ಜೀವನದ ಕುರಿತು ‘ತಾಯವ್ವ’ ಸಿನಿಮಾ; ಗೀತಪ್ರಿಯಾ ಚಿತ್ರಕ್ಕೆ ಶ್ರೀನಾಥ್ ಬೆಂಬಲ

ಗೀತಪ್ರಿಯಾ ಅವರು ‘ತಾಯವ್ವ’ ಸಿನಿಮಾದಲ್ಲಿ ಸೂಲಗಿತ್ತಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಶ್ರೀನಾಥ್ ಹಾರೈಸಿದ್ದಾರೆ. ಅನಂತ ಆರ್ಯನ್‌ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜನಪದ ಗೀತೆಗಳ ಗುಚ್ಚ ಈ ಸಿನಿಮಾದಲ್ಲಿ ಇರಲಿದೆ. ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ.

ಸೂಲಗಿತ್ತಿ ಜೀವನದ ಕುರಿತು ‘ತಾಯವ್ವ’ ಸಿನಿಮಾ; ಗೀತಪ್ರಿಯಾ ಚಿತ್ರಕ್ಕೆ ಶ್ರೀನಾಥ್ ಬೆಂಬಲ
Thayavva Movie Team

Updated on: May 11, 2025 | 1:09 PM

ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ (Srinath) ಅವರು ‘ತಾಯವ್ವ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಈ ಶೀರ್ಷಿಕೆ ಕೇಳಿದ ತಕ್ಷಣ ಸುದೀಪ್ ನಟನೆಯ ಸಿನಿಮಾ ನೆನಪಾಗುತ್ತದೆ. ಆದರೆ ಈಗ ಬರುತ್ತಿರುವ ಹೊಸ ‘ತಾಯವ್ವ’ (Thayavva) ಸಿನಿಮಾದ ಕಥೆಯೇ ಬೇರೆ. ಈ ಸಿನಿಮಾದಲ್ಲಿ ಸೂಲಗಿತ್ತಿಯರ ಬದುಕಿನ ಬಗ್ಗೆ ತೋರಿಸಲಾಗುತ್ತಿದೆ. ಗೀತಪ್ರಿಯಾ ಅವರ ತಾಯವ್ವ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸಾತ್ವಿಕ್ ಪವನ್ ಅವರು ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ ಅವರು ಟ್ರೇಲರ್ (Thayavva Trailer) ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪದ್ಮಶ್ರೀ’ ಪುರಸ್ಕೃತ ವೈದ್ಯೆ ಡಾ. ಕಾಮಿನಿ ರಾವ್‌, ಲಹರಿ ವೇಲು, ಹಿರಿಯ ನಿರ್ಮಾಪಕ ಭಾ. ಮ. ಹರೀಶ್‌, ಲಕ್ಷ್ಮೀ ನಾರಾಯಣ, ಪದ್ಮಾವತಿ ಮುಂತಾದವರು ಭಾಗಿ ಆಗಿದ್ದರು. ಈಗಾಗಲೇ ‘ತಾಯವ್ವ’ ಸಿನಿಮಾದ ಬಹುತೇಕ ಕೆಲಸಗಳು ಮುಕ್ತಾಯ ಆಗಿವೆ. ಟ್ರೇಲರ್ ಬಿಡುಗಡೆ ಬಳಿಕ ನಟ ‘ಪ್ರಣಯರಾಜ’ ಶ್ರೀನಾಥ್ ಅವರು ಮಾತನಾಡಿದರು. ‘ಗೀತಪ್ರಿಯಾ ಎಂಬುದು ನನಗೆ ಇಷ್ಟದ ಹೆಸರು. ಹಿರಿಯ ಡೈರೆಕ್ಟರ್ ಗೀತಪ್ರಿಯ ಅವರನ್ನು ಈ ಹೆಸರು ನೆನಪಿಸುತ್ತದೆ. ‘ತಾಯವ್ವ’ ಸಿನಿಮಾದಲ್ಲಿ ತಾಯವ್ವನಾಗಿ ನಟಿಸಿರುವವರು ಸಹ ಗೀತಪ್ರಿಯಾ. ಈ ಸಿನಿಮಾದ ಕಥೆ ಹಾಗೂ ತುಣುಕುಗಳನ್ನು ನೋಡಿದರೆ ಇದು ಸಾಮಾಜಿಕ ಕಳಕಳಿ ಇರುವ ಸಿನಿಮಾ ಎಂಬುದು ತಿಳಿಯುತ್ತದೆ’ ಎಂದು ಅವರು ಹೇಳಿದರು.

‘ಸೂಲಗಿತ್ತಿಯ ಕಾರ್ಯ ಮತ್ತು ಹೆಣ್ಣಿನ ಮಹತ್ವ ಎರಡನ್ನೂ ‘ತಾಯವ್ವ’ ಸಿನಿಮಾ ಹೇಳುತ್ತದೆ. ಈ ಚಿತ್ರಲ್ಲಿ ಒಂದು ಸಂದೇಶವಿದೆ. ಇಂಥ ಸಿನಿಮಾಗಳು ಹೆಚ್ಚಾಗಿ ಬರಬೇಕು. ‘ತಾಯವ್ವ’ ಶೀರ್ಷಿಕೆಯಲ್ಲೇ ಭಾವನಾತ್ಮಕ ಸೆಳೆತ ಇದೆ. ಸಿನಿಮಾದಲ್ಲೂ ಅದೇ ರೀತಿಯ ಅಂಶಗಳಿರಬಹುದು ಎಂಬ ನಿರೀಕ್ಷೆ ನಮಗಿದೆ. ಈ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶ್ರೀನಾಥ್ ಅವರು ಶುಭ ಕೋರಿದರು.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಡಾ. ಕಾಮಿನಿ ರಾವ್ ಅವರು ಕೂಡ ಮಾತನಾಡಿದರು. ‘ಇದು ಸೂಲಗಿತ್ತಿಯ ಬಗ್ಗೆ ಇರುವ ಸಿನಿಮಾ ಅಂತ ತಿಳಿದು ಸಂತೋಷ ಆಯ್ತು. ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯರು ಮಹಿಳೆಯರ ಪಾಲಿಗೆ ದೇವರ ರೂಪದಲ್ಲಿದ್ದರು. ತಾವು ಮಾಡುವ ಕೆಲಸಕ್ಕೆ ಯಾವುದೇ ಲಾಭದ ನಿರೀಕ್ಷೆ ಇರಲಿಲ್ಲ. ಇದು ಸಮಾಜ ಸೇವೆ, ದೇವರ ಕೆಲಸ ಎಂಬಂತೆ ಸೂಲಗಿತ್ತಿಯರು ಕೆಲಸ ಮಾಡುತ್ತಿದ್ದರು. ಅಂಥವರನ್ನು ಸಿನಿಮಾದ ಮೂಲಕ ಸ್ಮರಿಸುತ್ತಿರುವುದು ಶ್ಲಾಘನೀಯ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ತಾಯವ್ವ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಹಾಡು ಬಿಡುಗಡೆ ಮಾಡಿದ ಸುದೀಪ್

ಗೀತಪ್ರಿಯಾ ಅವರು ‘ತಾಯವ್ಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಇದು ಗ್ರಾಮೀಣ ಸೊಗಡಿನ ಸಿನಿಮಾ. ಈ ಸಿನಿಮಾ ಮಾಡಲು ನರಸಮ್ಮ ಅವರಂಥ ನೂರಾರು ಸೂಲಗಿತ್ತಿಯರು ನಮಗೆ ಪ್ರೇರಣೆ ಆಗಿದ್ದಾರೆ. ಹೆಣ್ಣು ಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಈ ಸಿನಿಮಾ ಮೂಲಕ ಹೇಳುತ್ತಿದ್ದೇವೆ. ಎಲ್ಲರಿಗೂ ತಲುಪಬೇಕಾದ ವಿಷಯ ಈ ಚಿತ್ರದಲ್ಲಿದೆ’ ಎಂದು ಗೀತಪ್ರಿಯಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us