ಅಡ್ಡಗಾಲು ಹಾಕುವ ಹಿತ ಶತ್ರುಗಳಿಗೆ ದುಬೈನಿಂದ ಸಂದೇಶ ಕೊಟ್ಟ ದರ್ಶನ್

|

Updated on: Jan 09, 2024 | 6:10 PM

Thoogudeepa Darshan: ‘ಕಾಟೇರ’ ಸಿನಿಮಾದ ಪ್ರಚಾರಕ್ಕೆ ದುಬೈಗೆ ತೆರಳಿರುವ ನಟ ದರ್ಶನ್, ‘ತಮ್ಮ ಏಳಿಗೆ ಸಹಿಸದ ಪ್ರೀತಿಯ ಆತ್ಮೀಯ’ರಿಗಾಗಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಅಡ್ಡಗಾಲು ಹಾಕುವ ಹಿತ ಶತ್ರುಗಳಿಗೆ ದುಬೈನಿಂದ ಸಂದೇಶ ಕೊಟ್ಟ ದರ್ಶನ್
ದರ್ಶನ್
Follow us on

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗಿದ್ದ ಸಿನಿಮಾ ಈಗ ಗಡಿಗಳನ್ನು ದಾಟಿ ಹೊರಟಿದೆ. ಸಿನಿಮಾದ ಪ್ರದರ್ಶನಕ್ಕೆ ಬೇಡಿಕೆ ಬಂದಿದ್ದರಿಂದ ಸಿನಿಮಾವನ್ನು ಹೊರ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ದುಬೈನಲ್ಲಿಯೂ ಸಿನಿಮಾದ ಬಿಡುಗಡೆ ಆಯ್ತು, ಸ್ವತಃ ದರ್ಶನ್ ದುಬೈಗೆ ತೆರಳಿ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡರು. ಇದೀಗ ದುಬೈನಲ್ಲಿರುವ ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಏಳ್ಗೆಯನ್ನು ಸಹಿಸದವರಿಗೆ ಮಾತೊಂದನ್ನು ಹೇಳಿದ್ದಾರೆ.

ದರ್ಶನ್ ದುಬೈನಲ್ಲಿರುವಾಗ, ಇಲ್ಲಿ ಬೆಂಗಳೂರಿನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದರ್ಶನ್​ ಅವರಿಗೆ ನೊಟೀಸ್ ಜಾರಿ ಆಗಿದೆ. ‘ಕಾಟೇರ’ ಸಿನಿಮಾ ಯಶಸ್ವಿಯಾದ ಸಂಭ್ರಮವನ್ನು ದರ್ಶನ್ ಹಾಗೂ ಇನ್ನೂ ಕೆಲವು ಗೆಳೆಯರು ಬೆಂಗಳೂರಿನ ಜೆಟ್​ಲ್ಯಾಗ್ ಪಬ್​ನಲ್ಲಿ ಆಚರಿಸಿದ್ದರು. ಆದರೆ ಸಮಯ ಮೀರಿ ಪಾರ್ಟಿ ಮಾಡಿದ ಕಾರಣ ಅವರಿಗೆ ನೊಟೀಸ್ ನೀಡಲಾಗಿದೆ. ದುಬೈನಿಂದ ಬಂದ ಬಳಿಕ ದರ್ಶನ್ ಪೊಲೀಸರೆದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಮಾಡಿದ ಪಾರ್ಟಿ ದಿನ ನಡೆದಿದ್ದೇನು? ಪೊಲೀಸರಿಂದ ಸಿಕ್ತು ಇಂಚಿಂಚು ಮಾಹಿತಿ

ಇದರ ಬೆನ್ನಲ್ಲೆ ನಟ ದರ್ಶನ್, ದುಬೈನಿಂದ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿಕರ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಕಾಟೇರ’ನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದಿದ್ದಾರೆ ದರ್ಶನ್.

ದರ್ಶನ್ ಯಾರಿಗಾಗಿ ಈ ಸಂದೇಶ ನೀಡಿದ್ದಾರೆಂದು ಅಭಿಮಾನಿಗಳು ತಲೆ ಕೆರೆದುಕೊಂಡಿದ್ದಾರೆ. ‘ಕಾಟೇರ’ ಸಿನಿಮಾದ ಯಶಸ್ಸನ್ನು ಸಹಿಸಿಕೊಳ್ಳಲಾಗದ ಕೆಲವರು ದರ್ಶನ್​ಗೆ ಅಡ್ಡಗಾಲು ಹಾಕಲು ಯತ್ನಿಸುತ್ತಿದ್ದಾರೆ ಎಂದು ಬಹುತೇಕ ಸ್ಪಷ್ಟವಾಗಿ ಅವರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಜೆಟ್ ಲ್ಯಾಗ್ ಪಬ್ ಪ್ರಕರಣದಲ್ಲಿ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರುಗಳಿಗೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ದುಬೈ ಇಂದ ಬಂದ ಬಳಿಕ ದರ್ಶನ್ ಪೊಲೀಸರೆದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ