‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್​ ಸೀತಾರಾಮ್​ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್​ ಸಿನಿಮಾ

|

Updated on: Aug 02, 2023 | 12:59 PM

Kousalya Supraja Rama: ಶಶಾಂಕ್​ ನಿರ್ದೇಶನದಲ್ಲಿ ಮೂಡಿಬಂದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಗೆದ್ದು ಬೀಗಿದೆ. ಈ ಸಿನಿಮಾ ನೋಡಿದ ಟಿಎನ್​ ಸೀತಾರಾಮ್​, ಹಂದಲಗೆರೆ ಗಿರೀಶ್​ ಮುಂತಾದವರು ಮೆಚ್ಚುಗೆ ಸೂಚಿಸಿದ್ದಾರೆ.

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್​ ಸೀತಾರಾಮ್​ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್​ ಸಿನಿಮಾ
ಟಿ.ಎನ್​. ಸೀತಾರಾಮ್​, ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​
Follow us on

‘ಮೊಗ್ಗಿನ ಮನಸು’, ‘ಕೃಷ್ಣ ಲೀಲಾ’, ‘ಕೃಷ್ಣನ್​ ಲವ್​ಸ್ಟೋರಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಶಶಾಂಕ್ (Director Shashank) ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಕೌಟುಂಬಿಕ ಕಥಾಹಂದರ ಇರುವ ಈ ಸಿನಿಮಾವನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ವಿಮರ್ಶಕರಿಂದ ಕೌಸಲ್ಯ ಸುಪ್ರಜಾ ರಾಮ’ (Kousalya Supraja Rama) ಚಿತ್ರಕ್ಕೆ ಫುಲ್​ ಮಾರ್ಕ್ಸ್​ ಸಿಕ್ಕಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಭೇಷ್​ ಎಂದಿದ್ದಾರೆ. ಇದೆಲ್ಲದರ ಜೊತೆಗೆ ಕನ್ನಡದ ಕೆಲವು ಬರಹಗಾರರು ಸಹ ಈ ಸಿನಿಮಾವನ್ನು ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಟಿ.ಎನ್​. ಸೀತಾರಾಮ್​ (TN Seetharam) ಅವರಿಗೂ ಈ ಚಿತ್ರ ತುಂಬ ಇಷ್ಟವಾಗಿದೆ.

‘ಇದೊಂದು ಮನಪರಿವರ್ತನೆಯ ಸಿನಿಮಾ. ಅತ್ಯಂತ ಆಕರ್ಷಕವಾಗಿ ಇವತ್ತಿನ ಪ್ರೇಕ್ಷಕರ ಮನಸ್ಸು ತುಂಬುವ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಪುರುಷರ ಅಹಂಕಾರವನ್ನು ಮನಪರಿವರ್ತನೆ ಮಾಡುವಂತಹ ಸಿನಿಮಾ ಇದು’ ಎಂದು ಟಿ.ಎನ್​. ಸೀತಾರಾಮ್​ ಅವರು ಹೇಳಿದ್ದಾರೆ. ಸಿನಿಮಾ ನೋಡಿದ ಬಳಿಕ ಚುಟುಕಾಗಿ ಅವರು ತಮ್ಮ ವಿಮರ್ಶೆಯನ್ನು ತಿಳಿಸಿದ್ದಾರೆ. ‘ನಿರ್ದೇಶಕರು ನಮ್ಮ ಬದುಕಿನಿಂದಲೇ ಕಥೆಯನ್ನು ತೆಗೆದುಕೊಂಡಿದ್ದಾರೆ. ಬಹಳ ದಿನಗಳ ನಂತರ ಒಂದು ಒಳ್ಳೆಯ ಕನ್ನಡ ಸಿನಿಮಾ ನೋಡಿದ್ವಿ’ ಎಂದು ಹಂದಲಗೆರೆ ಗಿರೀಶ್​ ಹೇಳಿದ್ದಾರೆ.

ಜುಲೈ 28ರಂದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆ ಆಯಿತು. ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​, ಬೃಂದಾ ಆಚಾರ್ಯ, ರಂಗಾಯಣ ರಘು, ನಾಗಭೂಷಣ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ‘ಶಶಾಂಕ್​ ಸಿನಿಮಾಸ್​’ ಮತ್ತು ಬಿ.ಸಿ. ಪಾಟೀಲ್​ ಅವರ ‘ಕೌರವ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ಉತ್ತಮವಾಗಿ ಕಲೆಕ್ಷನ್​ ಆಗುತ್ತಿದ್ದು, ಅಕ್ಕ-ಪಕ್ಕದ ರಾಜ್ಯಗಳ ಪ್ರೇಕ್ಷಕರನ್ನೂ ಸೆಳೆದುಕೊಳ್ಳುತ್ತಿದೆ.

ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಸೂಪರ್​ ಹಿಟ್​; ಗೆದ್ದ ಖುಷಿಯಲ್ಲಿ ಏನ್​ ಹೇಳ್ತಾರೆ ಚಿತ್ರತಂಡದವರು?

ಕರ್ನಾಟಕದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆ ಬಗ್ಗೆ ಚಿತ್ರದ ಸಕ್ಸಸ್​ಮೀಟ್​ನಲ್ಲಿ ನಿರ್ಮಾಪಕ ಬಿ.ಸಿ. ಪಾಟೀಲ್​ ಅವರು ಮಾಹಿತಿ ಹಂಚಿಕೊಂಡರು. ಅರ್ಜುನ್​ ಜನ್ಯ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳು ಸೂಪರ್ ಹಿಟ್​ ಆಗಿವೆ. ಜನರಿಂದ ಬಾಯಿ ಮಾತಿನ ಪ್ರಚಾರ ಉತ್ತಮವಾಗಿ ಸಿಗುತ್ತಿದೆ. ಹಾಗಾಗಿ ಎರಡನೇ ವಾರ ಕೂಡ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.