‘ಜಸ್ಟ್ ಮ್ಯಾರೀಡ್’ ಎಂದ ಅಂಕಿತಾ ಅಮರ್​-ಶೈನ್​ ಶೆಟ್ಟಿಗೆ ಸಿಕ್ತು ಹಿರಿಯರ ಆಶೀರ್ವಾದ

|

Updated on: Oct 09, 2024 | 9:08 PM

ಅಂಕಿತಾ ಅಮರ್​ ಮತ್ತು ಶೈನ್​ ಶೆಟ್ಟಿ ಅವರು ‘ಜಸ್ಟ್​ ಮ್ಯಾರೀಡ್​’ ಸಿನಿಮಾದಲ್ಲಿ ನಟಿಸಿದ್ದು, ಟೀಸರ್​ ಬಿಡುಗಡೆ ಆಗಿದೆ. ಟೀಸರ್​ ನೋಡಿ ಉಪೇಂದ್ರ ಮೆಚ್ಚಿದ್ದಾರೆ. ‘ಟೀಸರ್ ಬಹಳ ಚೆನ್ನಾಗಿದೆ. ಕಲಾವಿದರ ಅಭಿನಯ ಮತ್ತು ತಂತ್ರಜ್ಞರ ಕೆಲಸ ಕೂಡ ಅಷ್ಟೇ ಚೆನ್ನಾಗಿದೆ’ ಎಂದಿದ್ದಾರೆ ಉಪೇಂದ್ರ. ಸಿ.ಆರ್​. ಬಾಬಿ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

‘ಜಸ್ಟ್ ಮ್ಯಾರೀಡ್’ ಎಂದ ಅಂಕಿತಾ ಅಮರ್​-ಶೈನ್​ ಶೆಟ್ಟಿಗೆ ಸಿಕ್ತು ಹಿರಿಯರ ಆಶೀರ್ವಾದ
ಅಂಕಿತಾ ಅಮರ್​, ಶೈನ್​ ಶೆಟ್ಟಿ, ಅಜನೀಶ್​ ಲೋಕನಾಥ್​, ಸಿ.ಆರ್​. ಬಾಬಿ
Follow us on

ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ‘ಜಸ್ಟ್​ ಮ್ಯಾರೀಡ್​’ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ‘abbs studios’ ಮೂಲಕ ಅಜನೀಶ್ ಲೋಕನಾಥ್ ಮತ್ತು ಸಿ.ಆರ್. ಬಾಬಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿ.ಆರ್. ಬಾಬಿ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಅವರು ಜೋಡಿಯಾಗಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕರಾದ ಉಪೇಂದ್ರ, ನಿಥಿಲನ್ ಮತ್ತು ಅಜಯ್ ಭೂಪತಿ ಅವರು ಒಟ್ಟಾಗಿ ಬಂದು ‘ಜಸ್ಟ್ ಮ್ಯಾರೀಡ್’ ಸಿನಿಮಾದ ಟೀಸರ್​ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಶೀರ್ಷಿಕೆಗೆ ತಕ್ಕಂತೆಯೇ ನವ ವಿವಾಹಿತ ಜೋಡಿಗೆ ಅಜನೀಶ್ ಲೋಕನಾಥ್ ಅವರ ಪೋಷಕರು ಸನ್ಮಾನಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಉಪೇಂದ್ರ ಮಾತನಾಡಿದರು. ‘ಸಿ.ಆರ್ ಬಾಬಿ ಅವರ ಕೆಲಸವನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರ ಕಾರ್ಯವೈಖರಿ ಅದ್ಭುತ. ಅಜನೀಶ್ ಕುರಿತು ಹೇಳುವ ಹಾಗಿಲ್ಲ. ನನ್ನ ಸಿನಿಮಾಗೂ ಅವರೇ ಮ್ಯೂಸಿಕ್​ ಡೈರೆಕ್ಟರ್​. ಸಖತ್​ ಬೇಡಿಕೆ ಇದ್ದರೂ ಕೂಡ ಸ್ವಲ್ಪವೂ ಅಹಂ ಅವರಲ್ಲಿ ಇಲ್ಲ’ ಎಂದು ಉಪೇಂದ್ರ ಹೇಳಿದ್ದಾರೆ.

ನಿಥಿಲನ್ ಮತ್ತು ಅಜಯ್ ಭೂಪತಿ ಕೂಡ ಸಿ.ಆರ್. ಬಾಬಿ ಹಾಗೂ ಅಜನೀಶ್ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು. ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಈ ವೇಳೆ ಬಾಬಿ ಮಾತನಾಡಿದರು. ‘ಸಿನಿಮಾಗೆ ನಿರ್ದೇಶನ ಮಾಡಬೇಕು ಎಂಬುದು ನನ್ನ ಬಹು ವರ್ಷಗಳ ಕನಸು. ಇದು ನನ್ನ ಮೊದಲ ಡೈರೆಕ್ಷನ್​ ಸಿನಿಮಾ. ಟೀಸರ್ ಚೆನ್ನಾಗಿ ಮೂಡಿಬಂದಿದ್ದರೆ ಅದಕ್ಕೆ ಇಡೀ ತಂಡದ ಸಹಕಾರವೇ ಕಾರಣ’ ಎಂದು ಅವರು ಹೇಳಿದ್ದಾರೆ.

‘ಜಸ್ಟ್​ ಮ್ಯಾರೀಡ್​’ ಸಿನಿಮಾ ಟೀಸರ್:

ಅಜನೀಶ್ ಲೋಕನಾಥ್ ಮಾತನಾಡಿ, ‘ಬಾಬಿ ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಅವರೇ ನಿರ್ದೇಶನವನ್ನೂ ಮಾಡಿದ್ದಾರೆ. ಈಗ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ಹಂತವನ್ನು ತಲುಪಿದೆ‌’ ಎಂದರು. ನಾಯಕ ನಟ ಶೈನ್​ ಶೆಟ್ಟಿ ಮಾತನಾಡಿ, ‘ಅಂಕಿತಾ ಅಮರ್ ಅವರು ಉತ್ತಮ ಕಲಾವಿದೆ. ಅವರ ಕ‌ನ್ನಡ ಮತ್ತು ಅಭಿನಯ ಎರಡೂ ಚೆಂದ’ ಎಂದರು.

ಇದನ್ನೂ ಓದಿ: ಹಾಫ್​ ಸೆಂಚುರಿ ಬಾರಿಸಿದ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​; 50 ಸಿನಿಮಾಗಳ ಮೈಲಿಗಲ್ಲು

‘ಬಾಬಿ ಅವರು ನಿರ್ದೇಶಕಿಯಾಗಿ ಮೊದಲ ಸಿನಿಮಾವನ್ನು ಎಲ್ಲರೂ ಮೆಚ್ಚುವ ರೀತಿ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದಿದ್ದಾರೆ ಅಂಕಿತಾ ಅಮರ್.‌ ಶ್ರುತಿ‌, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ, ಶ್ರೀಮಾನ್, ಸಾಕ್ಷಿ ಅಗರವಾಲ್, ದೇವರಾಜ್, ಅನೂಪ್ ಭಂಡಾರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.