ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; ಅದೇ ಖುಷಿಯಲ್ಲಿ ‘ಕೆಜಿಎಫ್ 3’ ಬಗ್ಗೆ ನಿರ್ಮಾಪಕರ ಮಾತು

|

Updated on: Oct 08, 2024 | 9:57 PM

‘ಕೆಜಿಎಫ್​: ಚಾಪ್ಟರ್​ 2’ ಮತ್ತು ‘ಕಾಂತಾರ’ ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಹಿರಿಮೆ ಬಂದಿದೆ. ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಈ ಸಿನಿಮಾಗಳಿಗೆ ನ್ಯಾಷನಲ್​ ಅವಾರ್ಡ್​ ಸಿಕ್ಕಿದೆ. ಈ ಚಿತ್ರಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; ಅದೇ ಖುಷಿಯಲ್ಲಿ ‘ಕೆಜಿಎಫ್ 3’ ಬಗ್ಗೆ ನಿರ್ಮಾಪಕರ ಮಾತು
ಪ್ರಶಸ್ತಿ ಸ್ವೀಕರಿಸಿದ ವಿಜಯ್​ ಕಿರಗಂದೂರು
Follow us on

ದೆಹಲಿಯಲ್ಲಿ ಇಂದು (ಅಕ್ಟೋಬರ್​ 8) 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕನ್ನಡ ಸಿನಿಮಾಗಳು ಕೂಡ ಈ ಬಾರಿ ಅಬ್ಬರಿಸಿವೆ. ಅದರಲ್ಲೂ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಒಟ್ಟು 4 ಪ್ರಶಸ್ತಿಗಳು ಸಿಕ್ಕಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಷಯ. ‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ‘ಕೆಜಿಎಫ್​ 3’ ಕುರಿತು ಕೂಡ ಮಾತನಾಡಿದ್ದಾರೆ.

‘ಕೆಜಿಎಫ್​ 2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಬಂದಿರುವುದಕ್ಕೆ ತುಂಬ ಸಂತಸ ಆಗುತ್ತಿದೆ. ಅದೇ ಸಿನಿಮಾಗೆ ಕೆಲಸ ಮಾಡಿದ ಸಾಹಸ ನಿರ್ದೇಶಕರಿಗೂ ಪ್ರಶಸ್ತಿ ಬಂದಿದೆ. ಅದೇ ರೀತಿ ‘ಕಾಂತಾರ’ ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಪ್ರಶಸ್ತಿ ಪಡೆದಿದೆ. ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ರಿಷಬ್​ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಹೀಗೆ ಒಂದೇ ವರ್ಷದಲ್ಲಿ ನಮ್ಮ ಎರಡು ಸಿನಿಮಾಗಳಿಂದ 4 ಅವಾರ್ಡ್​ ಸಿಕ್ಕಿದ್ದಕ್ಕೆ ಬಹಳ ಸಂತೋಷ ಆಗುತ್ತಿದೆ’ ಎಂದಿದ್ದಾರೆ ವಿಜಯ್​ ಕಿರಗಂದೂರು.

‘ಕಾಂತಾರ ಮತ್ತು ಕೆಜಿಎಫ್​ 2 ಚಿತ್ರತಂಡದ ಎಲ್ಲರಿಗೂ ಇಲ್ಲಿಂದಲೇ ನಾನು ಸಂತಸ ಹಂಚಲು ಇಷ್ಟಪಡುತ್ತೇನೆ. ಈ ಸಿನಿಮಾಗಳನ್ನು ಪ್ರೋತ್ಸಾಹಿಸಿದ ಕನ್ನಡಿಗರು ಮತ್ತು ಇಡೀ ಭಾರತದ ಪ್ರೇಕ್ಷಕರಿಗೆ ನಾನು ಕೃತಜ್ಞತೆ ಸಲ್ಲಿಸಿತ್ತೇನೆ. ರಾಷ್ಟ್ರ ಪಶಸ್ತಿ ಪಡೆದ ಎಲ್ಲ ಕನ್ನಡಿಗರಿಗೂ ಅಭಿನಂದನೆಗಳು’ ಎಂದು ವಿಜಯ್​ ಕಿರಗಂದೂರು ಅವರು ಹೇಳಿದ್ದಾರೆ. ರಿಷಬ್​ ಶೆಟ್ಟಿ ಅವರು ದೆಹಲಿಯಲ್ಲಿ ಅತ್ಯುತ್ತಮ ನಟ ನ್ಯಾಷನಲ್​ ಅವಾರ್ಡ್​ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಪಂಚೆ ಧರಿಸಿ ವೇದಿಕೆಗೆ ಬಂದು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್​ ಶೆಟ್ಟಿ

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ಈಗ ‘ಕಾಂತಾರ: ಚಾಪ್ಟರ್​ 2’, ‘ಕೆಜಿಎಫ್​ 3’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಆ ಬಗ್ಗೆಯೂ ವಿಜಯ್ ಕಿರಗಂದೂರು ಅವರು ಮಾತನಾಡಿದ್ದಾರೆ. ‘ಇನ್ನೇನು 4-5 ತಿಂಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 3’ ಚಿತ್ರದ ಬಗ್ಗೆ ಅಪ್​ಡೇಟ್​ ನೀಡುತ್ತೇವೆ. ‘ಕಾಂತಾರ 2’ ಸಿನಿಮಾಗೆ ತುಂಬ ಚೆನ್ನಾಗಿ ಶೂಟಿಂಗ್​ ಆಗುತ್ತಿದೆ. ರಿಷಬ್​ ಅವರು ನಟನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಇಡೀ ತಂಡ ಕುಂದಾಪುರದಲ್ಲಿ ಕಷ್ಟಪಡುತ್ತಿದೆ. ಮುಂದಿನ ಆಗಸ್ಟ್​ನಲ್ಲಿ ನೀವು ಕಾಂತಾರ ಸಿನಿಮಾವನ್ನು ನಿರೀಕ್ಷಿಸಬಹುದು’ ಎಂದು ವಿಜಯ್​ ಕಿರಗಂದೂರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.