ಅಣ್ಣಾವ್ರು ಏನೂ ಮಾಡಿಲ್ಲ ಅಂತ ಹೇಳೋದು ತಪ್ಪು: ವಿನೋದ್ ರಾಜ್

Vinod Raj: ತಾಯಿ ಲೀಲಾವತಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾ, ಚಿತ್ರರಂಗದಿಂದ ದೂರಾಗಿ ನೆಲಮಂಗಲದ ಬಳಿ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ವಿನೋದ್ ರಾಜ್, ಅಣ್ಣಾವ್ರ ಬಗ್ಗೆ, ಅವರ ಸೇವೆಯ ಬಗ್ಗೆ ಮಾತನಾಡಿದ್ದಾರೆ.

ಅಣ್ಣಾವ್ರು ಏನೂ ಮಾಡಿಲ್ಲ ಅಂತ ಹೇಳೋದು ತಪ್ಪು: ವಿನೋದ್ ರಾಜ್
ವಿನೋದ್ ರಾಜ್

Updated on: Nov 30, 2023 | 8:14 PM

ಚಿತ್ರರಂಗದಿಂದ ದೂರಾದ ನೆಲಮಂಗಲದ ಬಳಿ ಸೋಲದೇವನಹಳ್ಳಿಯಲ್ಲಿ ಕೃಷಿ ಮಾಡುತ್ತಾ, ತಾಯಿ ಲೀಲಾವತಿ (Leelavathi) ಅವರ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ವಿನೋದ್ ರಾಜ್ (Vinod Raj). ಕೃಷಿ ಮಾಡುತ್ತಾ ಬಂದ ಹಣದಲ್ಲಿಯೇ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆಗಳನ್ನು ಕಟ್ಟಿಸಿ ಸಾರ್ವಜನಿಕ ಸೇವೆಗೆ ನೀಡಿದ್ದಾರೆ. ಆದರೆ ಇತ್ತೀಚೆಗೆ ಲೀಲಾವತಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ನಿತ್ರಾಣರಾಗಿ ಹಾಸಿಗೆ ಹಿಡಿದಿದ್ದಾರೆ. ಹಿರಿಯ ನಟಿಯನ್ನು ಕಾಣಲು ಚಿತ್ರರಂಗದ ಅನೇಕ ಗಣ್ಯರು ವಿನೋದ್ ರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ವಿನೋದ್ ಅವರು, ಟಿವಿ9 ಜೊತೆಗೆ ತಮ್ಮ ಬಗ್ಗೆ, ತಾಯಿಯವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ, ಅಣ್ಣಾವ್ರ ಬಗ್ಗೆಯೂ ಮಾತನಾಡಿದ್ದಾರೆ.

ತಾಯಿ ಲೀಲಾವತಿ ಅವರ ಸಿನಿಮಾ ಪಯಣದ ಬಗ್ಗೆ, ಅವರಲ್ಲಿದ್ದ ಅಭಿನಯ ಪ್ರತಿಭೆ ಬಗ್ಗೆ ಮಾತನಾಡುತ್ತಾ, ‘ಭಕ್ತ ಕುಂಬಾರ’ ಸಿನಿಮಾದ ಐಕಾನಿಕ್ ಸೀನ್ ಅನ್ನು ನೆನಪು ಮಾಡಿಕೊಂಡ ವಿನೋದ್ ರಾಜ್, ‘‘ಭಕ್ತ ಕುಂಬಾರ ಸಿನಿಮಾದಲ್ಲಿ ಆ ಮಗುವನ್ನು ತುಳಿಯುವ ದೃಶ್ಯದಲ್ಲಿ ಅಮ್ಮನ ನಟನೆ ಅದ್ಭುತ. ಕೆಸರಲ್ಲಿ ಕೆಸರಾಗುತ್ತಿರುವ ಮಗುವನ್ನು ಮೊದಲ ಬಾರಿ ನೋಡಿದ ರೀತಿ, ಅಣ್ಣಾವ್ರನ್ನು ತಳ್ಳಿದ ಜೋರು, ಮಗುವನ್ನು ಕೆಸರಲ್ಲಿ ಹುಡುಕುವಾಗ ತೋರಿದ ಅಭಿನಯ ಅದ್ಭುತ, ಅದು ನಿಜವಾದ ಅಭಿನಯ’’ ಎಂದರು ವಿನೋದ್ ರಾಜ್.

ಕಲಾವಿದರಿಗೆ ಭಯ ಇರಬೇಕು, ನಾನು ಮಾಡಿದ್ದು ಜನರಿಗೆ ಇಷ್ಟವಾಗದೇ ಹೋದರೆ ಏನು ಮಾಡುವುದು ಎಂಬ ಭಯ ಕಲಾವಿದರಿಗೆ ಇರಬೇಕು, ಅದು ಇದ್ದರೆ ಮಾತ್ರ ಕಲಾವಿದ ಅಚ್ಚಳಿಯದೆ ಉಳಿಯಲು ಸಾಧ್ಯ. ಆ ಭಯ ಅಮ್ಮನಿಗೆ ಇತ್ತು. ಅವರು ಪ್ರತಿದಿನ ಸಂಭಾಷಣೆಗಳನ್ನು ಉರು ಹೊಡೆದು ಸರಿಯಾಗಿ ತಯಾರಾಗಿ ಕ್ಯಾಮೆರಾ ಎದುರಿಸುತ್ತಿದ್ದರು. ನಾಯಕಿಯಾಗಿ, ಸಹೋದರಿಯಾಗಿ, ಅತ್ತಿಗೆಯಾಗಿ, ತಾಯಿಯಾಗಿ, ಅಜ್ಜಿಯ ಪಾತ್ರದಲ್ಲಿ ಹೀಗೆ ಪಾತ್ರಗಳನ್ನು ಬಂದಂತೆ ನಟಿಸುತ್ತಾ ಹೋದರು. ಅವರನ್ನು ಕಾಣಲು ಬರುತ್ತಿದ್ದ ವರ್ಗವೇ ಇತ್ತು ಎಂದು ತಾಯಿ ಲೀಲಾವತಿ ಅವರ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ ವಿನೋದ್ ರಾಜ್.

ಇದನ್ನೂ ಓದಿ:ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು

ಪಾಂಡುರಂಗನ ಮೂರ್ತಿಯನ್ನು ಎಸೆಯುವಾಗ, ಅಣ್ಣಾವ್ರು ಲಕ್ಷ್ಮಿ ಎಂದು ಕೂಗುವ ಮುಖಭಾವ ಅವೆಲ್ಲ ಅದ್ಭುತ ಆ ರೀತಿಯ ಕಲಾವಿದರು ಮತ್ತೆ ಹುಟ್ಟಿಬರಲು ಸಾಧ್ಯವಿಲ್ಲ. ಯಾರೇ ಶ್ರೇಷ್ಠರು ಎದುರಾದಾಗ ಅವರ ಶ್ರೇಷ್ಠತೆಯ ನಂತರವೇ ನಮ್ಮ ಶ್ರೇಷ್ಠತೆ ಎಂದು ಹೇಳಬೇಕು. ಅವರಿಗಿಂತಲೂ ಇವರು ಮೇಲು, ಇವರಿಗಿಂತ ಅವರು ಮೇಲು ಎಂಬ ಅರಿತೇಕದ ಅಭಿಮಾನ ಅದು ದುರಭಿಮಾನ ಅನ್ನಿಸಿಕೊಳ್ಳುತ್ತದೆ. ಅಣ್ಣಾವ್ರು ಏನೂ ಮಾಡಿಲ್ಲ ಎಂಬ ಮಾತನ್ನು ಯಾರೂ ಮಾತನಾಡಬಾರದು. ಅದು ತಪ್ಪಾಗುತ್ತೆ. ಅಣ್ಣಾವ್ರು ಏನೂ ಮಾಡಲಿಲ್ಲ ಎಂದಾಗಿದ್ದರೆ, ಅಣ್ಣಾವ್ರು ಏನೂ ಮಾತನಾಡಲಿಲ್ಲ ಅಂದಿದ್ದರೆ ಕನ್ನಡವೇ ಮುಪ್ಪಾಗಿ ಹೋಗಿರುತ್ತಿತ್ತು. ಮೊದಲು ಕನ್ನಡವನ್ನು ಸರಿಯಾಗಿ ಮಾತನಾಡಲು ಕಲಿತು ಬಳಿಕ ಅಣ್ಣಾವ್ರನ್ನು ಟೀಕಿಸಿದರೆ ಸರಿ’’ ಎಂದಿದ್ದಾರೆ ವಿನೋದ್ ರಾಜ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us