ರಾತ್ರೋರಾತ್ರಿ ವಿಷ್ಣುವರ್ಧನ್ ಸ್ಮಾರಕ ನೆಲಸಮ; ಹಬ್ಬದ ದಿನವೇ ನೋವಿನ ಸುದ್ದಿ

ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ನಿರ್ದೇಶಕ ರವಿ ಶ್ರೀವತ್ಸ ಅವರು ಈ ನೋವಿನ ಸುದ್ದಿ ತಿಳಿಸಿದ್ದಾರೆ. ವಿಷ್ಣುವರ್ಧನ್ ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಪ್ರವೇಶ ಕೂಡ ನೀಡುತ್ತಿಲ್ಲ. ಆದ್ದರಿಂದ ರವಿ ಶ್ರೀವತ್ಸ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ರಾತ್ರೋರಾತ್ರಿ ವಿಷ್ಣುವರ್ಧನ್ ಸ್ಮಾರಕ ನೆಲಸಮ; ಹಬ್ಬದ ದಿನವೇ ನೋವಿನ ಸುದ್ದಿ
Vishnuvardhan Smaraka

Updated on: Aug 08, 2025 | 3:32 PM

ನಟ ವಿಷ್ಣುವರ್ಧನ್ ಅವರ ಸ್ಮಾರಕದ (Vishnuvardhan Smaraka) ವಿಚಾರವಾಗಿ ಮೊದಲಿನಿಂದಲೂ ಅಭಿಮಾನಿಗಳಿಗೆ ಬೇಸರ ಇತ್ತು. ಈಗ ಇನ್ನೊಂದು ನೋವಿನ ಘಟನೆ ನಡೆದಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕವನ್ನು ನೆಲಸಮ ಮಾಡಲಾಗಿದೆ. ರಾತ್ರೋರಾತ್ರಿ ಸಮಾಧಿಯನ್ನು ತೆರವುಗೊಳಿಸಲಾಗಿದೆ. ಈ ಸ್ಥಳಕ್ಕೆ ನಿರ್ದೇಶಕ ರವಿ ಶ್ರೀವತ್ಸ ಅವರು ಇಂದು (ಆಗಸ್ಟ್ 8) ಭೇಟಿ ನೀಡಿದ್ದಾರೆ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ್ದಕ್ಕಾಗಿ ರವಿ ಶ್ರೀವತ್ಸ (Ravi Srivatsa) ಅವರು ಕಣ್ಣೀರು ಹಾಕಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಅವರು ಅಭಿಮಾನಿಗಳಿಗೆ ತೀವ್ರ ನೋವಿನ ಸುದ್ದಿಯನ್ನು ತಿಳಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ಇರುವ ವಿಷ್ಣುವರ್ಧನ್ ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಪ್ರವೇಶ ಸಿಗುತ್ತಿಲ್ಲ. ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ. ಆದರೂ ಕೂಡ ಅಂತ್ಯಸಂಸ್ಕಾರ ನಡೆದ ಸ್ಥಳದ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಇತ್ತು. ಆದರೆ ಈಗ ಸಮಾಧಿ ಸ್ಥಳವನ್ನು ನೆಲಸಮ ಮಾಡಿರುವುದಕ್ಕೆ ರವಿ ಶ್ರೀವತ್ಸ ಅವರು ಅಳುತ್ತಾ ಫೇಸ್​ ಬುಕ್​ ಲೈವ್ ಬಂದಿದ್ದಾರೆ.

‘ನಮ್ಮ ದೇವರ ಗುಡಿಯನ್ನು ಇಂದು ನೆಲಸಮ ಮಾಡಿದ್ದಾರೆ. ಇದು ನನ್ನ ಯಜಮಾನರು ಮಲಗಿದ್ದಂತಹ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರ ಇತ್ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಪೊಲೀಸರು ಸರ್ಪಗಾವಲು ಹಾಕಿಕೊಂಡು ಕೂತ್ತಿದ್ದಾರೆ’ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

ಇದನ್ನೂ ಓದಿ
ತೆಲುಗಿನ ಈ ಸ್ಟಾರ್ ನಟನಿಗೂ ವಿಷ್ಣುವರ್ಧನ್​ಗೂ ಇರುವ ನಂಟು ಗೊತ್ತೆ?
ಪೂಜೆಗೆ ಸಿಗದ ಅವಕಾಶ: ವಿಷ್ಣು ಸಮಾಧಿ ಬಳಿ ಅಭಿಮಾನಿಗಳ ಗಲಾಟೆ
ವಿಷ್ಣುವರ್ಧನ್​ಗೆ ಆ ಒಂದು ವಿಚಾರದಲ್ಲಿ ಇತ್ತು ಕೊರಗು; ಕೊನೆಗೂ ಈಡೇರಲಿಲ್ಲ
ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಹಿರಿಯ ನಿರ್ದೇಶಕ ಹೇಳಿದ್ದೇನು?

ರವಿ ಶ್ರೀವತ್ಸ ಫೇಸ್​ಬುಕ್​ ಲೈವ್:

‘ವಿಷ್ಣುವರ್ಧನ್ ಅವರ ಸಮಾಧಿಯನ್ನು ಕೂಡ ಕಾಪಾಡಿಕೊಳ್ಳಲು ಆಗದ ಮಟ್ಟಕ್ಕೆ ನಾವು ಬಂದಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನನ ಜಾಗ ಈಗ ಬರೀ ಮಣ್ಣಾಗಿದೆ. ನನಗೆ ನೋವು ತಡೆಯಲು ಆಗುತ್ತಿಲ್ಲ. ಇವತ್ತು ನಾವು ನಿಜವಾಗಿಯೂ ನಮ್ಮ ಯಜಮಾನರನ್ನು ಕಳೆದುಕೊಂಡ್ವಿ. ಯಾರೂ ಇಲ್ಲದಂತೆ ಅನಾಥರನ್ನಾಗಿ ಮಾಡಿಬಿಟ್ಟರು’ ಎಂದು ರವಿ ಶ್ರೀವತ್ಸ ಅವರು ಗಳಗಳನೆ ಅತ್ತಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್​ಗೆ ‘ಕರ್ನಾಟಕ ರತ್ನ’ ನೀಡುವಂತೆ ಅನಿರುದ್ಧ್ ಜತ್ಕರ್ ಮನವಿ

‘ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ವಿಎಸ್​ಎಸ್​​ನವರು ಎಲ್ಲಿದ್ದೀರಿ? ದೊಡ್ಡ ದೊಡ್ಡ ನಿರ್ಮಾಪಕರು ಎಲ್ಲಿ ಇದ್ದೀರಿ? ನಿರ್ದೇಶಕರು ಎಲ್ಲಿದ್ದೀರಿ? ಬನ್ನಿ ಸ್ವಾಮಿ, ನೆಲಸಮ ಆಗಿರುವ ನಮ್ಮ ಯಜಮಾನರನ್ನು ನೋಡಿ’ ಎಂದು ರವಿ ಶ್ರೀವತ್ಸ ಅವರು ಫೇಸ್​ಬುಕ್​ ಲೈವ್ ಬಂದಾಗಲೇ ಅವರನ್ನು ಪೊಲೀಸರು ತಡೆದಿದ್ದಾರೆ. ‘ನನ್ನನ್ನು ಹಿಡಿದು ಎಳೆಯುತ್ತಿದ್ದಾರೆ. ಇದು ಪೊಲೀಸ್ ದೌರ್ಜನ್ಯ’ ಎಂದಿದ್ದಾರೆ ರವಿ ಶ್ರೀವತ್ಸ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:12 pm, Fri, 8 August 25