ಕನ್ನಡದ ‘ವೃಷಭ’ ಸಿನಿಮಾಗೆ ವಿಘ್ನವಾದ ಮಲಯಾಳಂ ‘ವೃಷಭ’

‘ವೃಷಭ’ ಎಂಬ ಶೀರ್ಷಿಕೆಯಲ್ಲಿ ಕನ್ನಡದಲ್ಲೊಂದು ಚಿತ್ರ, ಮಲಯಾಳಂನಲ್ಲಿ ಇನ್ನೊಂದು ಚಿತ್ರ ಬರುತ್ತಿದೆ. ಇದರಿಂದ ಕನ್ನಡದ ಸಿನಿಮಾಗೆ ತೊಂದರೆ ಆಗಿದೆ ಎಂದು ಚಿತ್ರತಂಡದವರು ಸಮಸ್ಯೆ ಹೇಳಿಕೊಂಡಿದ್ದಾರೆ. ಕನ್ನಡದ ಸಿನಿಮಾದಲ್ಲಿ ಉಮೇಶ್ ಹೆಬ್ಬಾಳ ನಟಿಸಿದ್ದಾರೆ. ಮಲಯಾಳಂ ಸಿನಿಮಾಗೆ ಮೋಹನ್​​ಲಾಲ್ ಹೀರೋ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕನ್ನಡದ ‘ವೃಷಭ’ ಸಿನಿಮಾಗೆ ವಿಘ್ನವಾದ ಮಲಯಾಳಂ ‘ವೃಷಭ’
Vrishabha Movie Team

Updated on: Oct 17, 2025 | 8:51 PM

ಟೈಟಲ್ ಸಮಸ್ಯೆ ಎಂಬುದು ಚಿತ್ರರಂಗದಲ್ಲಿ ಹೊಸದಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಮೇಲೆ ಶೀರ್ಷಿಕೆ ಕ್ಲ್ಯಾಶ್ ಆಗುವುದು ಹೆಚ್ಚಿದೆ. ಮೂಲ ಕನ್ನಡದಲ್ಲಿ ಮಾಡಿದ ಸಿನಿಮಾಗಳಿಗೆ ಸಮಸ್ಯೆ ಆಗುತ್ತಿದೆ. ಬೇರೆ ಭಾಷೆಯವರು ಬಿಡುಗಡೆ ಹಂತದಲ್ಲಿ ಡಬ್ಬಿಂಗ್ ವರ್ಷನ್ ಸಿನಿಮಾಗೆ ಟೈಟಲ್ ಇಟ್ಟು ಬಿಡುಗಡೆ ಮಾಡುತ್ತಾರೆ. ಯುವ ನಿರ್ದೇಶಕ ಉಮೇಶ್ ಹೆಬ್ಬಾಳ ಅವರು ಕಳೆದ ಎರಡು-ಮೂರು ವರ್ಷಗಳಿಂದ ಸಾಕಷ್ಟು ಶ್ರಮಹಾಕಿ ‘ವೃಷಭ’ ಸಿನಿಮಾ (Vrishabha Movie) ಮಾಡಿದ್ದಾರೆ. ಉಮೇಶ್ ಹೆಬ್ಬಾಳ ಅವರೇ ಹೀರೋ ಆಗಿ ನಟಿಸಿದ್ದಾರೆ. ಬಿಗ್ ಬಜೆಟ್ ಹಾಕಿ ಈ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ‘ವೃಷಭ’ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿ ನಡೆಯುತ್ತಿದೆ.

ಕನ್ನಡದ ‘ವೃಷಭ’ ಸಿನಿಮಾವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಚನೆಯಲ್ಲಿ ಇರುವಾಗಲೇ ಒಂದು ಸಮಸ್ಯೆ ಎದುರಾಗಿದೆ. ಮೋಹನ್​​ಲಾಲ್ ನಟನೆಯ, ನಂದಕಿಶೋರ್ ನಿರ್ದೇಶನದ ಮಲಯಾಳಂನ ಪ್ಯಾನ್ ಇಂಡಿಯಾ ಸಿನಿಮಾ ‘ವೃಷಭ’ ಕೂಡ ನವೆಂಬರ್ 6ಕ್ಕೆ ರಿಲೀಸ್ ಆಗಲಿದೆ. ಕನ್ನಡದಲ್ಲೂ ಸಹ ಅದೇ ಹೆಸರಲ್ಲಿ ಬಿಡುಗಡೆ ಆಗಲಿದೆ. ಈ ಶೀರ್ಷಿಕೆ ವಿವಾದದ ಬಗ್ಗೆ ತಿಳಿಸಲು ಉಮೇಶ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದರು.

‘ವೃಷಭ ಸಿನಿಮಾ ನನ್ನ ಬಹುದಿನಗಳ ಕನಸು. ವರ್ಷದ ಹಿಂದೆ ಏಕ್ತಾ ಕಪೂರ್ ಸಂಸ್ಥೆ ಪತ್ರ ಬರೆದಾಗ ಶೀರ್ಷಿಕೆ ಕೊಡುತೀರಾ ಎಂದು ಕೇಳಿದ್ದರು. ಆನಂತರ ನಮ್ಮ ಸಂಪರ್ಕಕ್ಕೆ ಬರಲಿಲ್ಲ. ನಾವು ಕೆ. ಮಂಜು ಅವರ ಮೂಲಕ ನಂದಕಿಶೋರ್ ಅವರನ್ನು ಸಂಪರ್ಕಿಸಿ ಕೇಳಿದಾಗ ಅವರು ಕನ್ನಡದಲ್ಲಿ ರಿಲೀಸ್ ಮಾಡುತ್ತಿಲ್ಲ ಎಂದಿದ್ದರು. ಹಾಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡು ಬಿಡುಗಡೆ ಸಮಯ ಬಂದಾಗ ಈ ಸಮಸ್ಯೆ ಎದುರಾಗಿದೆ’ ಎಂದು ಉಮೇಶ್ ಹೇಳಿದರು.

‘ಏಕ್ತಾ ಕಪೂರ್ ಅವರ ಸಂಸ್ಥೆ ನಮ್ಮ ಟೈಟಲ್ ಬಳಸಿಕೊಳ್ಳುತ್ತಿದೆ. ಅವರದ್ದು ಸ್ಟಾರ್ ಸಿನಿಮಾ. ನವೆಂಬರ್ 6ಕ್ಕೆ ಬಿಡುಗಡೆ ಆಗಲಿದೆ. ಆಮೇಲೆ ನಾವು ಬಂದರೆ ಜನರಿಗೆ ಗೊಂದಲ ಆಗುತ್ತದೆ. ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಣಿ ಮಾಡಿಸಿ, ರಿನೀವಲ್ ಕೂಡ ಮಾಡಿಸಿದ್ದೇವೆ. ಅವರು ಕನ್ನಡ ಶೀರ್ಷಿಕೆ ರಿಜಿಸ್ಟರ್ ಮಾಡಿಸದೇ ರಿಲೀಸ್ ಮಾಡಲು ಹೊರಟಿದ್ದಾರೆ. ವಾಣಿಜ್ಯ ಮಂಡಳಿ ಆ ಸಂಸ್ಥೆಯನ್ನು ಸಂಪರ್ಕಿಸಿ ಇತ್ಯರ್ಥ ಮಾಡುವ ಪ್ರಯತ್ನದಲ್ಲಿದೆ’ ಎಂದರು ಉಮೇಶ್.

ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

‘ವೃಷಭ’ ಸಿನಿಮಾಗೆ ರಾಯ ಬಡಿಗೇರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ‌. ಪ್ರಶಾಂತ್ ಸಾಗರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಣವ್ ಸಂಗೀತ ನೀಡಿದಾರೆ. ಮಂಡ್ಯ ಸುತ್ತಮುತ್ತ 38 ದಿನ ಹಾಗೂ ಬೆಂಗಳೂರಿನಲ್ಲಿ 8 ದಿನ ಚಿತ್ರೀಕರಣ ಮಾಡಲಾಗಿದೆ. ‘ಗೂಳಿ ರೀತಿ ವ್ಯಕ್ತಿತ್ವ ಇರುವ ರೈತನೊಬ್ಬನ ಕಥೆ ನಮ್ಮ ಸಿನಿಮಾದಲ್ಲಿದೆ. ಆತನನ್ನು ಕೆಣಕಿದರೆ ಸುಮ್ಮನಿರಲ್ಲ. ಆತನಿಗೂ ತಾಕತ್ತು ಇರುತ್ತದೆ ಎಂಬ ಕಥೆ ಈ ಸಿನಿಮಾದಲ್ಲಿದೆ’ ಎಂದು ಉಮೇಶ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.