‘ವಿ ಕಾಂಟ್ ಈವನ್ ಸ್ಲೀಪ್’; ಕಂಬಳಿ ಕೊಡಲು ಜಡ್ಜ್ ಎದುರು ದರ್ಶನ್ ಅಳಲು

Darshan Case: ನಟ ದರ್ಶನ್ ಜೈಲಿನಲ್ಲಿ ಚಳಿಯಿಂದಾಗಿ ಕಷ್ಟಪಡುತ್ತಿದ್ದು, ಕಂಬಳಿ ನೀಡುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. "ನಿದ್ರಿಸಲು ಸಹ ಆಗುತ್ತಿಲ್ಲ" ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಡ್ಜ್, ಜೈಲು ಅಧಿಕಾರಿಗಳಿಗೆ ಕಂಬಳಿ ನೀಡಲು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಗಿದೆ.

‘ವಿ ಕಾಂಟ್ ಈವನ್ ಸ್ಲೀಪ್’; ಕಂಬಳಿ ಕೊಡಲು ಜಡ್ಜ್ ಎದುರು ದರ್ಶನ್ ಅಳಲು
ದರ್ಶನ್

Updated on: Nov 19, 2025 | 12:32 PM

ನಟ ದರ್ಶನ್ (Darshan) ಅವರು ಐಷಾರಾಮಿ ಜೀವನ ನಡೆಸಿ ಬಂದವರು. ಮನೆಯಲ್ಲಿ ಎಸಿ ಹಾಕಿಕೊಂಡು, ಬೇಕಾದ ಟೆಂಪ್ರೇಚರ್ ಇಟ್ಟುಕೊಂಡು, ದಪ್ಪನೆಯ ಬೆಡ್​ಶೀಟ್ ಹೊದ್ದು ಮಲಗುತ್ತಿದ್ದರು. ಆದರೆ, ಈಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಅವರಿಗೆ ಕಳೆದ ಬಾರಿಯಂತೆ ಈ ಬಾರಿ ಯಾವುದೇ ಸವಲತ್ತು ನೀಡುತ್ತಿಲ್ಲ. ಇದರಿಂದ ದರ್ಶನ್ ಜೈಲುವಾಸ ಕಷ್ಟಕರವಾಗಿದೆ. ಈ ಬಗ್ಗೆ ದರ್ಶನ್ ಅವರು ಕೋರ್ಟ್​ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಇಂದು (ನವೆಂಬರ್ 19) ದರ್ಶನ್ ಪ್ರಕರಣದ ವಿಚಾರಣೆ ಇತ್ತು. ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಿ ಹಾಕಿದ್ದಾರೆ. ಈ ವೇಳೆ ನೀಲಿ ಬಣ್ಣದ ಟಿ ಶರ್ಟ್, ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ಮೊದಲು ಆರೋಪಿಗಳ ಹಾಜರಾತಿ ಪಡೆಯಲಾಯಿತು. ಸಿಆರ್​​ಪಿಸಿ 294 ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆರೋಪಿಗಳ ಪರ ವಕೀಲರಿಂದ ಕಾಲಾವಕಾಶ ಕೋರಿಕೆ ಸಲ್ಲಿಕೆ ಆಗಿದೆ.

ಆರೋಪಿ ನಾಗರಾಜ್ ಕೋರ್ಟ್​್ಗೆ ಮನವಿ ಒಂದನ್ನು ಮಾಡಿದರು. ‘ಮನೆಯಿಂದ ತಂದುಕೊಟ್ಟ ಕಂಬಳಿ ನೀಡುತ್ತಿಲ್ಲ. ಜಾಸ್ತಿ ಚಳಿ ಇದ್ದರೂ ಹೆಚ್ಚುವರಿ ಕಂಬಳಿ ನೀಡುತ್ತಿಲ್ಲ’ ಎಂದು ಕೋರ್ಟ್ ಎದುರು ಹೇಳಿದ್ದಾರೆ. ಅತ್ತ ‘ವಿ ಕಾಂಟ್ ಈವನ್ ಸ್ಲೀಪ್’ ಎಂದು ದರ್ಶನ್ ಇಂಗ್ಲಿಷ್​ನಲ್ಲಿ ಮಾತು ಆರಂಭಿಸಿದರು.

‘ತುಂಬಾನೇ ಚಳಿ ಇದೆ. ನಾವ್ಯಾರೂ ರಾತ್ರಿ ಮಲಗುತ್ತಿಲ್ಲ. ಹೆಚ್ಚುವರಿ ಕಂಬಳಿ ಕೊಡಿಸಿ’ ಎಂದು ಕೋರ್ಟ್​ಗೆ ದರ್ಶನ್ ಮನವಿ ಮಾಡಿದರು. ಈ ಮನವಿ ಬಳಿಕ ಜಡ್ಜ್​, ‘ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ? ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ’ ಎಂದು ಪ್ರಶ್ನೆ ಮಾಡಿದರು. ದರ್ಶನ್​ಗೆ ಕಂಬಳಿಕೊಡಲು ಜೈಲು ಅಧಿಕಾರಿಗಳಿಗೆ ಜಡ್ಜ್ ಸೂಚನೆ ನೀಡಿದರು.

ಇದನ್ನೂ ಓದಿ: ಶಿವರಾಜ್ ಕುಮಾರ್ ಭೇಟಿಯಾದ ದರ್ಶನ್ ಪುತ್ರ ವಿನೀಶ್: ವಿಡಿಯೋ ನೋಡಿ

ವಿಚಾರಣೆ ಮುಂದಕ್ಕೆ

ಸದ್ಯ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ವಿಚಾರಣೆ ಡಿ.3ಕ್ಕೆ ಮುಂದೂಡಿದೆ. ಅಲ್ಲದೆ, ಆರೋಪಿ 14 ಪ್ರದೋಷ್ ಮಧ್ಯಂತರ ಜಾಮೀನನ್ನು ನ.22ರವರೆಗೆ ವಿಸ್ತರಣೆ ಮಾಡಲಾಗಿದೆ.  ದರ್ಶನ್ ತಮ್ಮ ಮೇಲೆ ಬಂದ ಆರೋಪ ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಇದರಿಂದ ಅವರು ವಿಚಾರಣೆ ಎದುರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us