‘ಇಲ್ಲಿ ತಮಿಳು ಚಿತ್ರದಿಂದ 36 ಕೋಟಿ ರೂ. ಲಾಭ ಪಡೆದ ವಿತರಕರು ಕಾವೇರಿ ಹೋರಾಟದಲ್ಲಿ ಯಾಕಿಲ್ಲ?’: ದರ್ಶನ್​ ಪ್ರಶ್ನೆ

|

Updated on: Sep 25, 2023 | 3:41 PM

‘ಇತ್ತೀಚೆಗಷ್ಟೇ ಒಂದು ತಮಿಳು ಸಿನಿಮಾ ಬಿಡುಗಡೆ ಆಯಿತು. ಅದನ್ನು ಒಬ್ಬ ವಿತರಕ 6 ಕೋಟಿ ರೂಪಾಯಿಗೆ ತೆಗೆದುಕೊಂಡ. ಕರ್ನಾಟಕದಲ್ಲಿ 36ರಿಂದ 37 ಕೋಟಿ ರೂಪಾಯಿ ಲಾಭ ಮಾಡಿಕೊಂಡ. ಅದನ್ನು ಬರೀ ತಮಿಳರು ನೋಡಿದ್ರಾ? ಕಾವೇರಿ ಬಗ್ಗೆ ಆ ವಿತರಕನ ಬಳಿ ನೀವು ಯಾಕೆ ಕೇಳಲಿಲ್ಲ’ ಎಂದು ದರ್ಶನ್​ ಪ್ರಶ್ನಿಸಿದ್ದಾರೆ.

‘ಇಲ್ಲಿ ತಮಿಳು ಚಿತ್ರದಿಂದ 36 ಕೋಟಿ ರೂ. ಲಾಭ ಪಡೆದ ವಿತರಕರು ಕಾವೇರಿ ಹೋರಾಟದಲ್ಲಿ ಯಾಕಿಲ್ಲ?’: ದರ್ಶನ್​ ಪ್ರಶ್ನೆ
ದರ್ಶನ್​
Follow us on

ಕಾವೇರಿ ನದಿ ನೀರು (Cauvery Water) ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು, ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾವೇರಿ ಪರ ಹೋರಾಟದಲ್ಲಿ ಕನ್ನಡ ಚಿತ್ರರಂಗದ (Kannada Film Industry) ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಆರಂಭದಲ್ಲಿ ಈ ಹೋರಾಟಕ್ಕೆ ಸ್ಯಾಂಡಲ್​ವುಡ್​ನ ಪ್ರಮುಖ ಕಲಾವಿದರು ಬಂದಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಕೇವಲ ಕಲಾವಿದರನ್ನು ಪ್ರಶ್ನೆ ಮಾಡಲಾಗಿತ್ತು. ಕರ್ನಾಟಕದಲ್ಲಿ ತಮಿಳು ಸಿನಿಮಾಗಳ ವಿತರಣೆಯಿಂದ ಲಾಭ ಮಾಡಿಕೊಂಡ ವಿತರಕರನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ನಟ ದರ್ಶನ್​ (Darshan) ಕೇಳಿದ್ದಾರೆ. ಟಿ. ನರಸೀಪುರದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ದರ್ಶನ್​ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆ ತಮಿಳು ಸಿನಿಮಾ ಯಾವುದು? ವಿತರಕರು ಯಾರು ಎಂಬುದನ್ನು ಅವರು ಪ್ರಸ್ತಾಪಿಸಿಲ್ಲ.

‘ಮೊದಲು ವಿವಾದದ ಬಗ್ಗೆ ಮಾತಾಡೋಣ. ಬೇರೆಯವರು ಹೇಳೋದಕ್ಕಿಂತ ಮುಂಚೆ ನಾವೇ ಹೇಳಿದರೆ ಉತ್ತಮ. ಕಲಾವಿದರು ಹೋರಾಟಕ್ಕೆ ಬರಲಿಲ್ಲ ಎಂದು ಕೆಲವರು ಒಂದಷ್ಟು ದಿನಗಳಿಂದ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಒಂದು ತಮಿಳು ಸಿನಿಮಾ ಬಿಡುಗಡೆ ಆಯಿತು. ಅದನ್ನು ಒಬ್ಬ ವಿತರಕ 6 ಕೋಟಿ ರೂಪಾಯಿಗೆ ತೆಗೆದುಕೊಂಡ. ಕರ್ನಾಟಕದಲ್ಲಿ 36ರಿಂದ 37 ಕೋಟಿ ರೂಪಾಯಿ ಲಾಭ ಮಾಡಿಕೊಂಡ. ಅದನ್ನು ಬರೀ ತಮಿಳರು ನೋಡಿದ್ರಾ? ಕಾವೇರಿ ಬಗ್ಗೆ ಆ ವಿತರಕನ ಬಳಿ ನೀವು ಯಾಕೆ ಕೇಳಲಿಲ್ಲ’ ಎಂದು ದರ್ಶನ್​ ಪ್ರಶ್ನಿಸಿದ್ದಾರೆ.

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ಗೆ ಪ್ರೀತಿಯಿಂದ ತಾತ ಎಂದು ಕರೆಯುವ ದರ್ಶನ್​

‘ದರ್ಶನ್​, ಸುದೀಪ್​, ಶಿವರಾಜ್​ಕುಮಾರ್​, ಯಶ್​, ಅಭಿಷೇಕ್​ ಅಂಬರೀಷ್​ ಮಾತ್ರ ಕಾಣಿಸೋದಾ? ತಮಿಳು ಸಿನಿಮಾ ಪ್ರದರ್ಶಿಸಿ 36 ಕೋಟಿ ರೂಪಾಯಿ ಪಡೆದುಕೊಂಡ ಆ ವಿತರಕರು ಕಾಣಿಸೋದಿಲ್ವಾ? ಇವತ್ತು ನಾವು ಗುದ್ದಾಡುತ್ತಿರುವುದು ಯಾಕೆ? ಎಲ್ಲರೂ ಸುಮ್ಮನಾಗಿದ್ದೀರಿ. ನಾನು ಮಾತನಾಡಿದರೆ ಸ್ವಲ್ಪ ಹಾರ್ಶ್​ ಆಗಿರುತ್ತದೆ’ ಎಂದಿದ್ದಾರೆ ದರ್ಶನ್​. ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಕಾವೇರಿ ನೀರಿಗಾಗಿ ಕರುನಾಡಿನ ಪರ ಧ್ವನಿ ಎತ್ತಿದ್ದಾರೆ. ಸೆ.26ರಂದು ಬೆಂಗಳೂರು ಬಂದ್​ಗೆ ಚಿತ್ರರಂಗ ಸಾಥ್​ ನೀಡುತ್ತಿದೆ.

ಕಾವೇರಿ ಬಗ್ಗೆ ದರ್ಶನ್​ ಪೋಸ್ಟ್:

‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರನ್ನು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದುಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲ ಅಂಕಿಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತೆ ಆಗಲಿ’ ಎಂದು ಸೆ.20ರಂದು ದರ್ಶನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.