KGF 2: ಅಧೀರನ ಫ್ಯಾನ್ ಅಂತೆ ರಾಕಿ! ಸಂಜಯ್ ದತ್ ಬಗ್ಗೆ ಯಶ್ ವಿಶೇಷ ಮಾತು

| Updated By: shivaprasad.hs

Updated on: Mar 29, 2022 | 9:48 AM

Yash | Sanjay Dutt: ಚಿತ್ರದಲ್ಲಿ ರಾಕಿ ಎದುರು ಅಧೀರ ತೊಡೆತಟ್ಟಲಿದ್ದಾನೆ. ಆದರೆ ರಿಯಲ್ ಲೈಫ್​ನಲ್ಲಿ ರಾಕಿ ಅಧೀರನ ಫ್ಯಾನ್ ಅಂತೆ! ಹೌದು. ಈ ಬಗ್ಗೆ ಯಶ್ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.

KGF 2: ಅಧೀರನ ಫ್ಯಾನ್ ಅಂತೆ ರಾಕಿ! ಸಂಜಯ್ ದತ್ ಬಗ್ಗೆ ಯಶ್ ವಿಶೇಷ ಮಾತು
‘ಕೆಜಿಎಫ್ 2’ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಹಾಗೂ ಸಂಜಯ್ ದತ್
Follow us on

ಸದ್ಯ ಭಾರತೀಯ ಚಿತ್ರರಂಗದಲ್ಲಿ ‘ಕೆಜಿಎಫ್ 2’ (KGF 2) ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ತೆರೆಕಂಡ ಟ್ರೇಲರ್ ದಾಖಲೆಯ ವೀಕ್ಷಣೆ ಕಾಣುತ್ತಿರುವುದಲ್ಲದೇ, ಚಿತ್ರದ ಮೇಕಿಂಗ್ ಬಗ್ಗೆ ದೊಡ್ಡ ಮಟ್ಟದಲ್ಲಿ ಹೊಗಳಿಕೆ ವ್ಯಕ್ತವಾಗುತ್ತಿದೆ. ಟ್ರೇಲರ್​ ರಿಲೀಸ್​ಗೆ ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್​ನ ತಾರೆಯರು ಕೂಡ ಉಪಸ್ಥಿತರಿದ್ದರು. ಚಿತ್ರದಲ್ಲಿ ಯಶ್ (Yash)​ ಎದುರು ತೊಡೆತಟ್ಟಿರುವ ಸಂಜಯ್ ದತ್ (Sanjay Dutt) ಹಾಜರಿದ್ದು, ಚಿತ್ರತಂಡದ ಗುಣಗಾನ ಮಾಡಿದ್ದರು. ಈ ವೇಳೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಈ ಹಿಂದೆ ಹಲವು ಪಾತ್ರಗಳು ಹೆಸರು ತಂದಿಕೊಟ್ಟಿವೆ. ಜನರು ಅದೇ ಹೆಸರಿನಿಂದ ತಮ್ಮನ್ನು ಗುರುತಿಸುತ್ತಿದ್ದರು. ಇನ್ನು ಮುಂದೆ ‘ಅಧೀರ’ ಎಂದು ಗುರುತಿಸಬಹುದು ಎಂದು ಸಂಜಯ್ ದತ್ ಹೇಳಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮಾತನಾಡುತ್ತಾ, ಯಶ್​ಗೆ ‘ರಾಕಿಂಗ್ ಸ್ಟಾರ್’ ಎಂಬ ಬಿರುದಿನ ಬಗ್ಗೆ ಮಾತನಾಡುತ್ತಾ, ‘ಕೆಜಿಎಫ್ 2’ ಚಿತ್ರದ ರಾಕಿ ಪಾತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದಿದ್ದರು. ಹೀಗೆ ‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ತಮ್ಮ ಪಾತ್ರದ ಮೂಲಕವೇ ಸುದ್ದಿಯಾಗುತ್ತಿರುವ ರಾಕಿ- ಅಧೀರನ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

ಚಿತ್ರದಲ್ಲಿ ರಾಕಿ ಎದುರು ಅಧೀರ ತೊಡೆತಟ್ಟಲಿದ್ದಾನೆ. ಆದರೆ ರಿಯಲ್ ಲೈಫ್​ನಲ್ಲಿ ರಾಕಿ ಅಧೀರನ ಫ್ಯಾನ್ ಅಂತೆ! ಹೌದು. ಈ ಬಗ್ಗೆ ಯಶ್ ಮಾತನಾಡುತ್ತಾ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯಶ್, ಸಂಜಯ್ ದತ್ ಅವರ ಕೆಲಸದ ಮೇಲಿನ ಬದ್ಧತೆಯನ್ನು ಹೊಗಳಿದರು. ‘‘ಅವರೊಬ್ಬ ಹೋರಾಟಗಾರ’’ ಎಂದು ಸಂಜಯ್ ದತ್ ಕುರಿತು ನುಡಿದಿರುವ ಯಶ್, ‘‘ಅವರು ಬದುಕನ್ನು ಕಂಡವರು. ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ತೋರಿದ ಬದ್ಧತೆಯನ್ನು ನೋಡಿ ಅವರ ಆರೋಗ್ಯದ ಬಗ್ಗೆ ನನಗೆ ಚಿಂತೆಯಾಗಿತ್ತು. ಕೆಜಿಎಫ್ 2 ಚಿತ್ರವನ್ನು ಮತ್ತೊಂದು ಎತ್ತರಕ್ಕೆ ಸಂಜಯ್ ತೆಗೆದುಕೊಂಡು ಹೋಗಿದ್ದಾರೆ’’ ಎಂದಿದ್ದಾರೆ.

ಅಷ್ಟೇ ಅಲ್ಲದೇ ಸಂಜಯ್ ದತ್ ಅಭಿಮಾನಿ ತಾವು ಎಂದೂ ಹೇಳಿಕೊಂಡಿದ್ದಾರೆ. ‘‘ನಾನು ಯಾವಾಗಲೂ ಸಂಜಯ್ ದತ್ ಅಭಿಮಾನಿ’’ ಎಂದಿದ್ದಾರೆ ಯಶ್. ಚಿತ್ರದಲ್ಲಿ ಅಧೀರನ ಎದುರು ಸೆಣಸಲಿರುವ ರಾಕಿ ಭಾಯ್, ನಿಜ ಜೀವನದಲ್ಲಿ ಅಧೀರನ ಫ್ಯಾನ್ ಎಂದು ಅಭಿಮಾನಿಗಳು ಇದನ್ನು ವ್ಯಾಖ್ಯಾನಿಸಿದ್ದಾರೆ.

ಕೆಜಿಎಫ್ 2 ಟ್ರೇಲರ್ ಇಲ್ಲಿದೆ:

‘ಕೆಜಿಎಫ್​ 2’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಈ ಚಿತ್ರದ ಮೂಲಕ ರವೀನಾ ಟಂಡನ್​ ಹಲವು ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಮರಳುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್​ ಚಿತ್ರದಲ್ಲಿ ನಟಿಸಿದ್ದಾರೆ. ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಚಿತ್ರ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಇದನ್ನೂ ಓದಿ:

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ

‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​