ಯೋಗರಾಜ್​ ಭಟ್​ ಧ್ವನಿಯಲ್ಲಿ ಮೂಡಿಬಂತು ‘ಬೆಂಬಿಡದ ನಾವಿಕ’ ಟೀಸರ್​; ಏನಿದರ ಕಥೆ?

|

Updated on: Nov 13, 2023 | 3:15 PM

ಶ್ರೀಯಾನ್ ಅವರು ‘ಬೆಂಬಿಡದ ನಾವಿಕ’ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಪ್ರಿಯದರ್ಶಿನಿ ಮತ್ತು ಐಶ್ವರ್ಯಾ ಅವರು ನಾಯಕಿಯರಾಗಿದ್ದಾರೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರದ ಟೀಸರ್​ಗೆ ಧ್ವನಿ ನೀಡುವ ಮೂಲಕ ಯೋಗರಾಜ್​ ಭಟ್​ ಅವರು ಬೆಂಬಲ ನೀಡಿದ್ದಾರೆ.

ಯೋಗರಾಜ್​ ಭಟ್​ ಧ್ವನಿಯಲ್ಲಿ ಮೂಡಿಬಂತು ‘ಬೆಂಬಿಡದ ನಾವಿಕ’ ಟೀಸರ್​; ಏನಿದರ ಕಥೆ?
‘ಬೆಂಬಿಡದ ನಾವಿಕ’ ಸಿನಿಮಾ ತಂಡ
Follow us on

ನಿರ್ದೇಶಕ ಯೋಗರಾಜ್​ ಭಟ್​ (Yogaraj Bhat) ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅವರ ನಿರ್ದೇಶನಕ್ಕೆ ಮಾತ್ರವಲ್ಲದೇ ಧ್ವನಿಗೂ ಕೂಡ ಬೇಡಿಕೆ ಇದೆ. ಅನೇಕ ಸಿನಿಮಾಗಳ ಟ್ರೇಲರ್, ಟೀಸರ್​, ಹಾಡಿನಲ್ಲಿ ಅವರು ಧ್ವನಿ ಹೈಲೈಟ್ ಆಗಿದೆ. ಈಗ ಹೊಸಬರ ‘ಬೆಂಬಿಡದ ನಾವಿಕ’ ಸಿನಿಮಾದ ಟೀಸರ್​ (Bembidada Naavika Teaser) ಕೂಡ ಯೋಗರಾಜ್​ ಭಟ್​ ಅವರ ನಿರೂಪಣೆಯಲ್ಲಿ ಮೂಡಿಬಂದಿದೆ. ಇಡೀ ಸಿನಿಮಾದ ಥೀಮ್​ ಏನು ಎಂಬುದನ್ನು ವಿವರಿಸುವಂತಹ ರೀತಿಯಲ್ಲಿ ಈ ಟೀಸರ್​ ಮೂಡಿಬಂದಿದೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ‘ಬೆಂಬಿಡದ ನಾವಿಕ’ (Bembidada Naavika) ಸಿನಿಮಾಗೆ ಧ್ವನಿ ನೀಡುವ ಮೂಲಕ ಯೋಗರಾಜ್​ ಭಟ್​ ಅವರು ಬೆಂಬಲ ನೀಡಿದ್ದಾರೆ.

‘ಬೆಂಬಿಡದ ನಾವಿಕ’ ಸಿನಿಮಾದಲ್ಲಿ ಇನ್‌ಫ್ಲುಯೆನ್ಸರ್ ಹುಡುಗನ ಬದುಕು ಬವಣೆಯೇ ಕಥೆಯಾಗಿದೆ. ‘ಶ್ರೀ ಅಂಬಲವಾಡಿ ಮಹಾಕಾಳಿ ಕಂಬೈನ್ಸ್’ ಮೂಲಕ ಜಿ. ಮಹೇಶ್ ಅವರು ಬಂಡವಾಳ ಹೂಡಿದ್ದಾರೆ. ಸದ್ದಿಲ್ಲದೇ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡದವರು ಈಗ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಯೋಗರಾಜ್​ ಭಟ್ ಅವರ ಹಿನ್ನಲೆ ಧ್ವನಿ ಇರುವ ಟೀಸರ್ ಅನಾವರಣ ಮಾಡಲಾಗಿದೆ. ಬೆಂಗಳೂರಿನ ರೇಣುಕಾಂಬ ಥಿಯೇಟರ್‌ನಲ್ಲಿ ಟೀಸರ್​ ಮತ್ತು ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆದಿದೆ.

ಮಾಧ್ಯಮದವರಿಂದ ‘ಪ್ರತಿ ಹೆಜ್ಜೆಗೂ..’ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಮಂಗಳೂರು, ಉಡುಪಿ, ಕಾಪು, ಮೈಸೂರಿನ ಸುಂದರ ಸ್ಥಳಗಳಲ್ಲಿ ಶೂಟಿಂಗ್​ ನಡೆಸಲಾಗಿದೆ. ಥ್ರಿಲ್ಲರ್-ಡ್ರಾಮಾ ಸನ್ನಿವೇಶಗಳನ್ನು ಈ ಸಿನಿಮಾ ಒಳಗೊಂಡಿದೆ. ಮುನ್ನ ಮೈಸೂರು ಅವರು ಸಂಗೀತ ನೀಡಿದ್ದಾರೆ. ಸತೀಶ್‌ ರಾಜೇಂದ್ರನ್ ಛಾಯಾಗ್ರಹಣ ಮಾಡಿದ್ದಾರೆ. ಸುನಿಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್‌ ಸಿನಿಮಾ’ ಮೂಲಕ ತರಬೇತಿ ಪಡೆದುಕೊಂಡಿರುವ ಶ್ರೀಯಾನ್ ಅವರು ‘ಬೆಂಬಿಡದ ನಾವಿಕ’ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Garadi Movie Review: ಕುಸ್ತಿ, ಪ್ರೀತಿ ಮತ್ತು ಮಸ್ತಿ ತುಂಬಿದ ಯೋಗರಾಜ್​ ಭಟ್ಟರ ‘ಗರಡಿ’

ಪ್ರಿಯದರ್ಶಿನಿ ಮತ್ತು ಐಶ್ವರ್ಯಾ ಅವರು ನಾಯಕಿಯರಾಗಿದ್ದಾರೆ. ದಿನೇಶ್‌ ಮಂಗಳೂರು, ವಿಕ್ರಂ, ಬಾಲ ರಾಜವಾಡಿ, ರಜತ್ ಮುಂತಾದ ಕಲಾವಿದರು ನಟಿಸಿದ್ದಾರೆ. ಮಹತ್ವಕಾಂಕ್ಷೆ ಇರುವ ಇನ್‌ಫ್ಲುಯೆನ್ಸರ್ ಯುವಕನಿಗೆ ಸೋಶಿಯಲ್​ ಮೀಡಿಯಾ ಮೂಲಕ ಬರುವ ಕಷ್ಟಗಳು ಹೇಗಿರುತ್ತವೆ? ಅವುಗಳಿಂದ ಆತನ ಜೀವನ ಹೇಗೆಲ್ಲ ಬದಲಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಇನ್‌ಫ್ಲುಯೆನ್ಸರ್ ಆದವನಿಗೂ ಎಲ್ಲರ ರೀತಿ ಒಂದಷ್ಟು ಸವಾಲುಗಳು ಇರುತ್ತವೆ. ಪ್ರತಿ ಕ್ಷಣವೂ ಬಹಳ ಮುಖ್ಯ ಆಗಿರುತ್ತದೆ. ಅದು ಆತನನ್ನು ಯಾವ ರೀತಿಯಲ್ಲಾದರೂ ಬದಲಾಯಿಸಬಹುದು ಎಂಬುದನ್ನು ಈ ಸಿನಿಮಾ ತೋರಿಸಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.