ದೊಡ್ಮನೆ ಅಭಿಮಾನಿಗಳ ಪ್ರೀತಿಗೆ ಉದಾಹರಣೆ ಕೊಟ್ಟ ನಟಿ ಸಪ್ತಮಿ ಗೌಡ

|

Updated on: Jun 21, 2023 | 7:41 PM

Sapthami Gowda: ನಟಿ ಸಪ್ತಮಿ ಗೌಡ, ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ಬಗ್ಗೆ ಹಾಗೂ ದೊಡ್ಮನೆ ಅಭಿಮಾನಿಗಳ ಪ್ರೀತಿಯ ಬಗ್ಗೆ ಮಾತಾಡಿದ್ದಾರೆ.

ದೊಡ್ಮನೆ ಅಭಿಮಾನಿಗಳ ಪ್ರೀತಿಗೆ ಉದಾಹರಣೆ ಕೊಟ್ಟ ನಟಿ ಸಪ್ತಮಿ ಗೌಡ
ಯುವ ರಾಜ್​ಕುಮಾರ್
Follow us on

ನಟಿ ಸಪ್ತಮಿ ಗೌಡ (Sapthami Gowda) ಚಂದನವನದ (Sandalwood) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕಾಂತಾರ (Kantara) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿಬಿಟ್ಟಿರುವ ಸಪ್ತಮಿ ಕೈಯ್ಯಲಿ ಈಗ ಸಾಲು-ಸಾಲು ಸಿನಿಮಾಗಳಿವೆ. ಒಂದು ಬಾಲಿವುಡ್ ಸಿನಿಮಾ ಸಹ ಮುಗಿಸಿ ಬಂದಿರುವ ಸಪ್ತಮಿ ಗೌಡ. ಇದೀಗ ದೊಡ್ಮನೆಯ ಕುಡಿ ಯುವರಾಜ್ ಕುಮಾರ್ (Yuva Rajkumar) ಅವರೊಟ್ಟಿಗೆ ಯುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಮನೆಯ ಸದಸ್ಯರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಸಪ್ತಮಿ ಗೌಡ, ದೊಡ್ಮನೆ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ.

”ಯುವರಾಜ್ ಕುಮಾರ್ ಅವರ ಜೊತೆ ನಟಿಸುವಾಗ ಇದು ಮೊದಲ ಸಿನಿಮಾ ಅನಿಸುವುದೇ ಇಲ್ಲ. ಬಹಳ ಪೂರ್ವಸಿದ್ಧತೆ ಮಾಡಿಕೊಂಡು ಅವರು ಸೆಟ್​ಗೆ ಬರ್ತಾರೆ ಕ್ಯಾಮೆರಾ ಎದುರಿಸುತ್ತಾರೆ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದೇವೆ. ಸಿನಿಮಾದ ಬಿಡುಗಡೆ ದಿನ ದೊಡ್ಡ ಹಬ್ಬವೇ ಆಗಲಿದೆ. ಯುವಕರಿಗೆ ಇಷ್ಟವಾಗುವ ವಿಷಯ ಇಟ್ಟುಕೊಂಡು ಬರುತ್ತಿದ್ದೇವೆ. ನಾನಂತೂ ಬಹಳ ಖುಷಿಯಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೀನಿ” ಎಂದಿದ್ದಾರೆ ಸಪ್ತಮಿ ಗೌಡ.

”ಪ್ರತಿದಿನ ಶೂಟಿಂಗ್ ಸೆಟ್​ಗೆ ಒಬ್ಬರಲ್ಲ ಒಬ್ಬರು ದೊಡ್ಮನೆ ಅಭಿಮಾನಿಗಳು ಬಂದೇ ಬರುತ್ತಾರೆ. ಬಂದವರೆಲ್ಲ ವಿಧ ವಿಧವಾದ ಊಟ ತಂದಿರುತ್ತಾರೆ. ಹೊಟ್ಟೆ ತುಂಬಿದ್ದರೂ ಊಟ ಮಾಡಬೇಕು ಅನಿಸುತ್ತೆ ಅಷ್ಟು ಪ್ರೀತಿಯಿಂದ ಅವರು ಊಟ ತಂದು ಬಡಿಸುತ್ತಾರೆ. ಅವರು ಮಾತನಾಡುವ ರೀತಿ, ನಡೆದುಕೊಳ್ಳುವ ರೀತಿ ಖುಷಿಯಾಗುತ್ತದೆ. ಸೆಟ್​ಗೆ ಬಂದರೂ ಸುಮ್ಮನೆ ಇರುತ್ತಾರೆ ಅವಕಾಶ ಸಿಕ್ಕಾಗ ಬಂದು ಮಾತನಾಡಿಸುತ್ತಾರೆ. ರಾಜ್​ಕುಮಾರ್ ಅವರಿದ್ದಾಗಿನಿಂದಲೂ ಅವರ ಕುಟುಂಬದ ಮೇಲೆ ಅವರಿಗಿರುವ ಪ್ರೀತಿ ಅದು, ದೊಡ್ಮನೆ ಅಭಿಮಾನಿಗಳ ಬಗ್ಗೆ ಅವರ ಪ್ರೀತಿಯ ಬಗ್ಗೆ ಕೇಳಿದ್ದೆ ಈಗ ನೋಡುತ್ತಿದ್ದೇನೆ” ಎಂದಿದ್ದಾರೆ ಸಪ್ತಮಿ ಗೌಡ.

ಇದನ್ನೂ ಓದಿ:Yuva Rajkumar Birthday: ಯುವ ರಾಜ್​ಕುಮಾರ್ ಹುಟ್ಟುಹಬ್ಬದ ಸಂಭ್ರಮ ಹೀಗಿತ್ತು

ಯುವ ರಾಜ್​ಕುಮಾರ್ ಅವರ ಮೊದಲ ಸಿನಿಮಾ ಯುವ ಅನ್ನು ಸಂತೋಶ್ ಆನಂದ್​ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ರಾಜ್​ಕುಮಾರ್ ಕಾಲವಾದ ಬಳಿಕ ಆ ಸ್ಥಾನವನ್ನು ಯುವ ಅವರು ತುಂಬಲಿದ್ದಾರೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದು, ದೊಡ್ಡ ಮೊತ್ತದ ನಿರೀಕ್ಷೆಯನ್ನು ಯುವ ರಾಜ್​ಕುಮಾರ್ ಮೇಲೆ ದೊಡ್ಮನೆ ಅಭಿಮಾನಿಗಳು ಇಟ್ಟಿದ್ದಾರೆ. ಯುವ ಸಿನಿಮಾವನ್ನು ಪ್ರತಿಷ್ಠಿತ ಹೊಂಬಾಳೆ ಫಿಲಮ್ಸ್​ನವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವು ಕಾಲೇಜು ಕತೆಯನ್ನು ಒಳಗೊಂಡಿದ್ದು ಸಖತ್ ಆಕ್ಷನ್ ಜೊತೆಗೆ ಪ್ರೇಮಕತೆಯನ್ನೂ ಸಹ ಒಳಗೊಂಡಿರಲಿದೆ. ಸಿನಿಮಾವು ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ ಎಂದು ಈಗಾಗಲೇ ಹೊಂಬಾಳೆ ಫಿಲಮ್ಸ್ ಘೋಷಣೆ ಮಾಡಿ ಆಗಿದೆ.

ಯುವ ರಾಜ್​ಕುಮಾರ್ ಅವರು ಬೇರೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದರು. ಐತಿಹಾಸಿಕ ಕತೆಯುಳ್ಳ ಸಿನಿಮಾ ಮೂಲಕ ಎಂಟ್ರಿ ನೀಡಲು ಯುವ ಸಜ್ಜಾಗಿದ್ದರು ಆದರೆ ಕೋವಿಡ್ ಹಾಗೂ ಇತರೆ ಕಾರಣಗಳಿಂದ ಆ ಸಿನಿಮಾ ಪಕ್ಕಕ್ಕೆ ಸರಿದು ಹೊಂಬಾಳೆ ಫಿಲಮ್ಸ್ ಮೂಲಕ ಯುವ ರಾಜ್​ಕುಮಾರ್ ಎಂಟ್ರಿ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ