ಕನಸು ಈಡೇರಿತೆಂದ ನಟಿ: ಶ್ರೀಲೀಲಾ ಮಾತ್ರವಲ್ಲ ಅವರ ತಾಯಿಯೂ ಈ ನಟನ ಅಭಿಮಾನಿ

Sreeleela: ತೆಲುಗು ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾ ನಾಯಕ ನಟನನ್ನು ಹೊಗಳುತ್ತಾ ನನ್ನ ಕನಸು ನನಸಾದಂತೆ ಅನಿಸಿತು ಎಂದಿದ್ದಾರೆ. ಯಾರು ಆ ನಾಯಕ ನಟ?

ಕನಸು ಈಡೇರಿತೆಂದ ನಟಿ: ಶ್ರೀಲೀಲಾ ಮಾತ್ರವಲ್ಲ ಅವರ ತಾಯಿಯೂ ಈ ನಟನ ಅಭಿಮಾನಿ
ಶ್ರೀಲೀಲಾ

Updated on: Oct 05, 2023 | 8:33 PM

ಕನ್ನಡದ ನಟಿ ಶ್ರೀಲೀಲಾ (Sreeleela) ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಒಂದರ ಹಿಂದೊಂದು ಬಿಗ್ ಬಜೆಟ್ ಸ್ಟಾರ್ ನಟರ ಸಿನಿಮಾಗಳು ಶ್ರೀಲೀಲಾಗೆ ಸಿಗುತ್ತಲೇ ಇವೆ. ತೆಲುಗು ಸಿನಿ ಅಭಿಮಾನಿಗಳು ಸಹ ಶ್ರೀಲೀಲಾರ ನಟನೆ, ನೃತ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಶ್ರೀಲೀಲಾರ ಜನಪ್ರಿಯತೆ ತೆಲುಗಿನಲ್ಲಿ ಯಾವ ಮಟ್ಟಿಗೆ ಹೆಚ್ಚಿದೆಯೆಂದರೆ ಇತರೆ ಸಿನಿಮಾಗಳವರು ಸಹ ತಮ್ಮ ಸಿನಿಮಾದ ಪ್ರಚಾರಕ್ಕೆ ಶ್ರೀಲೀಲಾರನ್ನು ಆಹ್ವಾನಿಸುತ್ತಿದ್ದಾರೆ.

ತೆಲುಗಿನಲ್ಲಿ ಹೊಸ ನಟರು ‘ಮ್ಯಾಡ್’ ಹೆಸರಿನ ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ನಟಿ ಶ್ರೀಲೀಲಾ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಥೇಟ್ ತೆಲುಗು ಹುಡುಗಿಯಂತೆ ಹರಳು ಹುರಿದಂತೆ ತೆಲುಗು ಮಾತನಾಡಿದ ನಟಿ ಶ್ರೀಲೀಲಾ, ಸಿನಿಮಾ ತಂಡವನ್ನು ಹೊಗಳುವ ಜೊತೆಗೆ ತಮಗೆ ಬಹಳ ಇಷ್ಟವಾದ ನಟರೊಬ್ಬರ ಬಗ್ಗೆ ಮಾತನಾಡಿದರು.

ಶ್ರೀಲೀಲಾ ಅತಿಥಿಯಾಗಿದ್ದ ‘ಮ್ಯಾಡ್’ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ಬಹುಭಾಷಾ ನಟ ದುಲ್ಕರ್ ಸಲ್ಮಾನ್ ಸಹ ಭಾಗಿಯಾಗಿದ್ದರು. ದುಲ್ಕರ್ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ನಟಿ ಶ್ರೀಲೀಲಾ, ”ಸರ್, ನೀವು ಈ ಕಾರ್ಯಕ್ರಕ್ಕೆ ಬರುತ್ತಿದ್ದೀರಿ ಎಂದಾಗ ನನ್ನ ತಾಯಿ ಬಹಳ ಖುಷಿಯಾದರು. ನಿಮಗೆ ಸಾಕಷ್ಟು ಪ್ರೀತಿಯನ್ನು ಅವರ ಕಡೆಯಿಂದ ತಿಳಿಸಲು ಹೇಳಿದ್ದಾರೆ” ಎಂದರು.

ಮುಂದುವರೆದು, ”ನಾನು ಸಣ್ಣ ಹುಡುಗಿಯಾಗಿದ್ದಾಗ ಕನಸೊಂದಿತ್ತು, ನನ್ನ ಅಜ್ಜಿ ಹೇಳಿದ ಕತೆಗಳಿಂದ ಪ್ರಭಾವಕ್ಕೊಳಗಾಗಿ ಕುದುರೆ ಏರಿ ಬರುವ ರಾಜಕುಮಾರನನ್ನು ನಾನು ಕಲ್ಪಿಸಿಕೊಂಡಿದ್ದೆ, ನಿಮ್ಮ ‘ಹೀರೇಯೇ’ ಹಾಡು ನೋಡಿದಾಗ ನನ್ನ ಆ ಕನಸಿನ ರಾಜಕುಮಾರ ನೀವೇನಾ ಎಂದು ಅನಿಸಿತು” ಎಂದರು ಶ್ರೀಲೀಲಾ. ನಟಿಯ ಅಭಿಮಾನದ ಮಾತಿಗೆ ಸಣ್ಣನೆ ಮುಗುಳು ನಗೆ ನಕ್ಕು, ಥ್ಯಾಂಕ್ಸ್ ಎಂದಷ್ಟೆ ಹೇಳಿದರು ದುಲ್ಕರ್ ಸಲ್ಮಾನ್.

ಇದನ್ನೂ ಓದಿ:ಕನ್ನಡಕ್ಕೆ ಮರಳುತ್ತಾರೆಯೇ ನಟಿ ಶ್ರೀಲೀಲಾ?

ನಟಿ ಶ್ರೀಲೀಲಾ ತೆಲುಗಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವಾರವಷ್ಟೆ ಅವರ ನಟನೆಯ ‘ಸ್ಕಂದ’ ಸಿನಿಮಾ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡಿದೆ. ಬಾಲಕೃಷ್ಣ ಜೊತೆಗೆ ನಟಿಸಿರುವ ‘ಭಗವಂತ್ ಕೇಸರಿ’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಬಾಲಕೃಷ್ಣ ಪುತ್ರಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಅದರ ಜೊತೆಗೆ ಪ್ರಸ್ತುತ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿಯೂ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಆದಿಕೇಶವ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಮುಗಿದಿದೆ.

ಪವನ್ ಕಲ್ಯಾಣ್ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಜೊತೆಗೆ ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಅನಗನಗಾ ಒಕ ರಾಜು’ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಕ್ಕಿನೇನಿ ನಾಗ ಚೈತನ್ಯ ನಟನೆಯ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ. ಇನ್ನೂ ಕೆಲವು ತೆಲುಗು ಸಿನಿಮಾಗಳು ಮಾತುಕತೆ ಹಂತದಲ್ಲಿವೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us