SS Rajamouli: ‘ಆದಿಪುರುಷ್’ ಚಿತ್ರದಿಂದ ಪಾಠ ಕಲಿತ ರಾಜಮೌಳಿ? ಏನಿದು ಸಮಾಚಾರ?

ಮಹಾಭಾರತ ಆಧರಿಸಿ ರಾಜಮೌಳಿ ಸಿನಿಮಾ ಮಾಡಲಿದ್ದಾರೆ. ‘ಆದಿಪುರುಷ್’ ಚಿತ್ರತಂಡದಿಂದ ಆದ ತಪ್ಪಿನಿಂದ ರಾಜಮೌಳಿ ಪಾಠ ಕಲಿತಿದ್ದಾರಂತೆ.

SS Rajamouli: ‘ಆದಿಪುರುಷ್’ ಚಿತ್ರದಿಂದ ಪಾಠ ಕಲಿತ ರಾಜಮೌಳಿ? ಏನಿದು ಸಮಾಚಾರ?
ರಾಜಮೌಳಿ-ಆದಿಪುರುಷ್

Updated on: Jul 12, 2023 | 6:30 AM

ನಿರ್ದೇಶಕ ಎಸ್​​ಎಸ್​ ರಾಜಮೌಳಿ (SS Rajamouli) ‘ಬಾಹುಬಲಿ’ ಸರಣಿ ಮತ್ತು ‘ಆರ್‌ಆರ್‌ಆರ್’ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಮನ್ನಣೆ ಗಳಿಸಿದ್ದಾರೆ. ‘ಆರ್‌ಆರ್‌ಆರ್‌’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಕೂಡ ಸಿಕ್ಕಿದೆ. ಹಾಲಿವುಡ್‌ನ ಖ್ಯಾತ ನಿರ್ದೇಶಕರಾದ ಸ್ಟಿವನ್ ಸ್ಪೀಲ್​ಬರ್ಗ್ ಮತ್ತು ಜೇಮ್ಸ್ ಕ್ಯಾಮೆರಾನ್ ಕೂಡ ರಾಜಮೌಳಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈಗ ರಾಜಮೌಳಿ ಅವರು ಮಹೇಶ್ ಬಾಬು Mahesh Babu)  ಜೊತೆಗೆ ಮಾಡಲಿರುವ ‘SSMB 29’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಾದ ಬಳಿಕ ಮಹಾಭಾರತ ಆಧರಿಸಿ ಸಿನಿಮಾ ಮಾಡಲಿದ್ದಾರೆ. ‘ಆದಿಪುರುಷ್’ ಚಿತ್ರತಂಡದಿಂದ ಆದ ತಪ್ಪನ್ನು ರಾಜಮೌಳಿ ಪಾಠ ಕಲಿತಿದ್ದಾರಂತೆ.

ರಾಜಮೌಳಿ ಈ ಹಿಂದೆ ಮಹಾಭಾರತ ಬಗ್ಗೆ ಹೇಳಿಕೆ ನೀಡಿದ್ದರು. ‘ಅದು ನನ್ನ ಕನಸಿನ ಯೋಜನೆ’ ಎಂದಿದ್ದರು. ‘ಭಾರತೀಯ ಮಹಾಕಾವ್ಯಗಳ ಬಗ್ಗೆ ಜಗತ್ತಿಗೆ ಹೇಳಬೇಕು. ಮಹಾಭಾರತ ನನ್ನ ಬಹುಕಾಲದ ಯೋಜನೆ. ಅದು ಸಾಗರ ಇದ್ದಂತೆ. ಅದರೊಳಗೆ ಪ್ರವೇಶಿಸಲು ಬಹಳ ಸಮಯ ಬೇಕು. ಮಹಾಭಾರತ ಮಾಡಿದರೆ ನಾನು ಹತ್ತು ಭಾಗದಲ್ಲಿ ಅದನ್ನು ತರಬೇಕು’ ಎಂದಿದ್ದರು. ಈ ಬಗ್ಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. 2025ರ ಬಳಿಕ ಈ ಚಿತ್ರವನ್ನು ರಾಜಮೌಳಿ ಕೈಗೆತ್ತಿಕೊಳ್ಳಲಿದ್ದಾರಂತೆ.

ಆದರೆ ಮಹಾಭಾರತವನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಇತ್ತೀಚೆಗಷ್ಟೇ ರಿಲೀಸ್ ಆದ ‘ಆದಿಪುರುಷ್’ ಚಿತ್ರದ ಬಗ್ಗೆ ಸಾಕಷ್ಟು ವಿವಾದ ಹುಟ್ಟಿಕೊಂಡಿತ್ತು. ರಾಮಾಯಣ ಆಧಾರಿತ ಈ ಸಿನಿಮಾದ ಮೂಲ ಉದ್ದೇಶ ತಪ್ಪಿದ್ದರಿಂದ ನಿರ್ದೇಶಕ ಓಂ ರಾವತ್ ಬಗ್ಗೆ ಟೀಕೆ ವ್ಯಕ್ತವಾಯಿತು. ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ಹೀಗಿರುವಾಗಲೇ ರಾಜಮೌಳಿ ಅವರು ಭಾರತದ ಮತ್ತೊಂದು ಮಹಾಕಾವ್ಯವಾದ ಮಹಾಭಾರತವನ್ನು ತೆರೆಗೆ ತರಲು ಮುಂದಾಗಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾ ಬಹುತೇಕ ಕಾಲ್ಪನಿಕ ಕಥೆ ಆಗಿತ್ತು. ಹೀಗಾಗಿ ರಾಜಮೌಳಿಗೆ ಸ್ವಾತಂತ್ರ್ಯ ಇತ್ತು. ಆದರೆ, ‘ಮಹಾಭಾರತ’ದಲ್ಲಿ ಹೀಗಾಗುವುದಿಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರವನ್ನೇ ಮತ್ತೊಮ್ಮೆ ಹೇಳಬೇಕು ಎಂದರೆ ಅದು ನಿಜಕ್ಕೂ ಚಾಲೆಂಜಿಂಗ್.

ಇದನ್ನೂ ಓದಿ: ‘ಆದಿಪುರುಷ್’ ಚಿತ್ರಕ್ಕೆ ಮತ್ತೊಂದು ಶಾಕ್; ಒಟಿಟಿ ರಿಲೀಸ್​ಗೂ ಮೊದಲೇ ಕಹಿ ಸುದ್ದಿ

ರಾಮಾಯಣಕ್ಕೆ ಹೋಲಿಸಿದರೆ ಮಹಾಭಾರತವು ಹೆಚ್ಚಿನ ಸಂಖ್ಯೆಯ ಪಾತ್ರಗಳನ್ನು ಹೊಂದಿದೆ. ರಾಜಮೌಳಿ ಹೇಳುವಂತೆ ಇದೊಂದು ಸಾಗರ. ಆಯಾ ಪಾತ್ರಗಳಿಗೆ ತಕ್ಕಂತೆ ನಟರನ್ನು ಆಯ್ಕೆ ಮಾಡುವತ್ತ ರಾಜಮೌಳಿ ಗಮನಹರಿಸಬೇಕು. ಅಲ್ಲದೆ, ಗೆಟಪ್‌ಗಳು ಮತ್ತು ಸಂಭಾಷಣೆಗಳ ವಿಷಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಯಾರಿಗೂ ನೋವಾಗದಂತೆ, ವಿವಾದಗಳಿಗೆ ಎಡೆ ಮಾಡಿಕೊಡದೆ ರಾಜಮೌಳಿ ಮಹಾಭಾರತವನ್ನು ಹೇಗೆ ತೆರೆಗೆ ತರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us