‘ಕಣ್ಣಪ್ಪ’ ಸಿನಿಮಾ ಯಶಸ್ಸಿನ ಹಿಂದೆ ರಾಜಮೌಳಿ ತಂದೆಯ ನೆರವು

Kannappa movie: ಮಂಚು ವಿಷ್ಣು ನಟಿಸಿ ನಿರ್ಮಾಣ ಮಾಡಿರುವ ‘ಕಣ್ಣಪ್ಪ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾಕ್ಕೆ ಕತೆಯನ್ನೂ ಮಂಚು ವಿಷ್ಣು ಅವರೇ ರಚಿಸಿದ್ದು, ಎಸ್​ಎಸ್ ರಾಜಮೌಳಿ ಅವರ ತಂದೆ ಖ್ಯಾತ ಸಿನಿಮಾ ಕತೆಗಾರ ವಿಜಯೇಂದ್ರ ಪ್ರಸಾದ್ ನೀಡಿದ ಅಮೂಲ್ಯ ಸಲಹೆಯಿಂದ ಸಿನಿಮಾದ ಕತೆ ಗಟ್ಟಿಯಾಯಿತು ಎಂದಿದ್ದಾರೆ. ಏನದು ಸಲಹೆ?

‘ಕಣ್ಣಪ್ಪ’ ಸಿನಿಮಾ ಯಶಸ್ಸಿನ ಹಿಂದೆ ರಾಜಮೌಳಿ ತಂದೆಯ ನೆರವು
Kannappa Movie

Updated on: Jul 01, 2025 | 3:41 PM

ಮಂಚು ವಿಷ್ಣು (Manchu Vishnu) ನಟಿಸಿ ನಿರ್ಮಾಣ ಮಾಡಿರುವ ‘ಕಣ್ಣಪ್ಪ’ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಹ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದೆ. ಸಿನಿಮಾ ಗೆದ್ದ ಖುಷಿಯಲ್ಲಿ ಮಂಚು ವಿಷ್ಣು, ಸಿನಿಮಾದ ಎರಡನೇ ಭಾಗವನ್ನು ಘೋಷಿಸಿದ್ದು, ಜನಪ್ರಿಯ ನಿರ್ದೇಶಕರೊಬ್ಬರು ‘ಕಣ್ಣಪ್ಪ’ ಸಿನಿಮಾದ ಎರಡನೇ ಭಾಗವನ್ನು ನಿರ್ದೇಶಲಿರುವುದಾಗಿ ಹೇಳಿದ್ದಾರೆ. ಅಸಲಿಗೆ ‘ಕಣ್ಣಪ್ಪ’ ಸಿನಿಮಾದ ಕತೆಯನ್ನು ತಾವೇ ಬರೆದಿದ್ದಾಗಿ ಮಂಚು ವಿಷ್ಣು ಹೇಳಿದ್ದರು. ಆದರೆ ಕತೆಯ ಕೊರತೆಗಳನ್ನು ನಿವಾರಿಸಲು ರಾಜಮೌಳಿಯವರ ತಂದೆ ಖ್ಯಾತ ಸಿನಿಮಾ ಸಾಹಿತಿ ವಿಜಯೇಂದ್ರ ಪ್ರಸಾದ್ ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.

ಸಿನಿಮಾದ ಸಕ್ಸಸ್ ಮೀಟ್​​ನಲ್ಲಿ ಮಾತನಾಡಿರುವ ಮಂಚು ವಿಷ್ಣು, ‘ನಾನು ಯಾವುದೇ ಕತೆ ಬರೆದರೂ ಸಹ ವಿಜಯೇಂದ್ರ ಪ್ರಸಾದ್ ಅವರಿಗೆ ಹೇಳುತ್ತೇನೆ. ಅವರಿಂದ ಸಲಹೆಗಳನ್ನು ಪಡೆಯುತ್ತೇನೆ. ಹಾಗೆಯೇ ‘ಕಣ್ಣಪ್ಪ’ ಸಿನಿಮಾದ ಕತೆ ಬರೆದ ಬಳಿಕ ವಿಜಯೇಂದ್ರಪ್ರಸಾದ್ ಅವರನ್ನು ಕರೆಸಿಕೊಂಡು ಅವರಿಗೆ ಕತೆ ಹೇಳಿದೆ. ಬಹಳ ಆಸಕ್ತಿಯಿಂದ ಕತೆ ಕೇಳಿದ ವಿಜಯೇಂದ್ರ ಪ್ರಸಾದ್, ಕತೆಯನ್ನು ಕೆಲವು ಕೊರತೆಗಳನ್ನು ಎತ್ತಿ ತೋರಿಸಿದರು’ ಎಂದಿದ್ದಾರೆ.

‘ನಿನ್ನ ಕತೆಯಲ್ಲಿ ಶಿವ, ಬೇಡರ ಕಣ್ಣಪ್ಪನನ್ನೇ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳುವುದೇಕೆ, ಆತನನ್ನೇ ಭಕ್ತನನ್ನಾಗಿ ಮಾಡಿಕೊಳ್ಳಬೇಕು ಎಂದು ಶಿವ ನಿರ್ಧರಿಸಲು ಏನು ಕಾರಣ?’ ಎಂದು ಪ್ರಶ್ನೆ ಕೇಳಿದರು. ನನ್ನ ಬಳಿ ಸೂಕ್ತ ಇರಲಿಲ್ಲ. ಕಣ್ಣಪ್ಪ ಅವತಾರಪುರುಷ ಹಾಗಾಗಿ ಆತನನ್ನು ಶಿವ ಆಯ್ಕೆ ಮಾಡಿಕೊಳ್ಳುತ್ತಾನೆ’ ಎಂದೆ. ಆದರೆ ಅದು ಅವರಿಗೆ ಸರಿ ಬರಲಿಲ್ಲ. ಶಿವ, ಕಣ್ಣಪ್ಪನನ್ನೇ ಪರೀಕ್ಷೆ ಮಾಡಲು ಆಯ್ಕೆ ಮಾಡಿಕೊಳ್ಳಲು ಒಂದು ಬಲವಾದ ಕಾರಣವನ್ನು ಕತೆಯಲ್ಲಿ ನಿರ್ಮಿಸಿ, ನಿನ್ನ ಕತೆ ಆಗ ಸರಿಯಾಗುತ್ತದೆ. ಈಗ ನಿನ್ನ ಕತೆ ಅಪೂರ್ಣವಾಗಿದೆ ಎಂದರು’ ಎಂದು ಮಂಚು ವಿಷ್ಣು ಹೇಳಿದ್ದಾರೆ.

ಇದನ್ನೂ ಓದಿ:‘ಕಣ್ಣಪ್ಪ’ ಭರ್ಜರಿ ಕಲೆಕ್ಷನ್​ಗೆ ಕಾರಣವೇನು? ಸತ್ಯ ಒಪ್ಪಿಕೊಂಡ ನಟ ಮಂಚು ವಿಷ್ಣು

ಬಳಿಕ ಮಂಚು ವಿಷ್ಣು, ಇನ್ನೊಬ್ಬ ಬರಹಗಾರರ ಜೊತೆಗೆ ಸೇರಿಕೊಂಡು ಕೆಲವು ದೃಶ್ಯಗಳನ್ನು ಬರೆದರಂತೆ. ಆಗ ಕತೆಯಲ್ಲಿ ಮೋಹನ್​ಲಾಲ್ ಅವರ ಪಾತ್ರ ಸೃಷ್ಟಿಯಾಯ್ತಂತೆ. ಆಗ ತಿರುಪತಿಯಲ್ಲಿದ್ದ ಮೋಹನ್ ಬಾಬು ಅವರನ್ನು ಹೋಗಿ ಭೇಟಿ ಆದ ಮಂಚು ವಿಷ್ಣು, ಹೀಗೊಂದು ಪವರ್​​ಫುಲ್ ಪಾತ್ರ ಕತೆಯಲ್ಲಿ ಸೃಷ್ಟಿಯಾಗಿದೆ. ಅದನ್ನು ಮೋಹನ್​ಲಾಲ್ ಅವರೇ ನಿರ್ವಹಿಸಬೇಕು ಎಂದರಂತೆ. ಕೂಡಲೇ ಮೋಹನ್ ಬಾಬು ಅವರು ಮೋಹನ್​​ಲಾಲ್ ಅವರಿಗೆ ಕಾಲ್ ಮಾಡಿ, ಅವರನನ್ಉ ಪಾತ್ರದಲ್ಲಿ ನಟಿಸುವಂತೆ ಒಪ್ಪಿಸಿದರಂತೆ.

‘ಕಣ್ಣಪ್ಪ’ ಸಿನಿಮಾನಲ್ಲಿ ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್, ಮೋಹನ್ ಲಾಲ್, ಕಾಜೊಲ್ ಅವರುಗಳು ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರುಗಳ ಜೊತೆಗೆ ಕನ್ನಡದ ದೇವರಾಜ್, ಶರತ್ ಕುಮಾರ್, ಮೋಹನ್​ ಬಾಬು, ಬ್ರಹ್ಮಾನಂದಂ ಇನ್ನೂ ಹಲವಾರು ಮಂದಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಆದ ನಾಲ್ಕು ದಿನಕ್ಕೆ 26 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಸೋಮವಾರ ಸಿನಿಮಾದ ಕಲೆಕ್ಷನ್ ತುಸು ಕುಸಿದಿದ್ದು, ಇನ್ನುಳಿದ ದಿನಗಳಲ್ಲಿ ಕಲೆಕ್ಷನ್ ಅನ್ನು ಕಾಪಾಡಿಕೊಳ್ಳಲಿದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ