ಸಭ್ಯತೆ ಇರಲಿ: ‘ದಿ ರಣ್ವೀರ್ ಶೋ’ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ
‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದಲ್ಲಿ ತಂದೆ-ತಾಯಿಯ ಲೈಂಗಿಕತೆ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಯೂಟ್ಯೂಬರ್ ರಣ್ವೀರ್ ಅಲಹಾಬಾದಿಯಾ ಅವರಿಗೆ ಈಗ ಸಣ್ಣ ರಿಲೀಫ್ ಸಿಕ್ಕಿದೆ. ಯೂಟ್ಯೂಬ್ನಲ್ಲಿ ಹೊಸ ಎಪಿಸೋಡ್ ಅಪ್ಲೋಡ್ ಮಾಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಜನಪ್ರಿಯ ಯೂಟ್ಯೂಬರ್ ರಣ್ವೀರ್ ಅಲಹಾಬಾದಿಯಾ (Ranveer Allahbadia) ಅನೇಕರ ಕೆಂಗಣ್ಣಿಗೆ ಗುರಿ ಆಗಿದ್ದರು. ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ಅಶ್ಲೀಲವಾಗಿ ಮಾತನಾಡಿದ ಅವರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ‘ದಿ ರಣ್ವೀರ್ ಶೋ’ ಯೂಟ್ಯೂಬ್ ಚಾನೆಲ್ನಲ್ಲಿ ಹೊಸ ಸಂಚಿಕೆಗಳನ್ನು ಅಪ್ಲೋಡ್ ಮಾಡದಂತೆ ತಡೆ ನೀಡಲಾಗಿತ್ತು. ಆದರೆ ಈಗ ರಣ್ವೀರ್ ಅಲಹಾಬಾದಿಯಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ‘ದಿ ರಣ್ವೀರ್ ಶೋ’ ಹೊಸ ಎಪಿಸೋಡ್ಗಳನ್ನು ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ. ಸಭ್ಯತೆ ಮತ್ತು ನೈತಿಕತೆ ಇರಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ರಣ್ವೀರ್ ಅಲಹಾಬಾದಿಯಾ ಅತಿಥಿಯಾಗಿ ಹೋಗಿದ್ದಾಗ ತೀರ ಕೀಳುಮಟ್ಟದಲ್ಲಿ ಮಾತನಾಡಿದ್ದರು. ಸಭ್ಯ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿತ್ತು ಅವರ ಹೇಳಿಕೆಗಳು. ಅದಕ್ಕಾಗಿ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಅವರ ಹೇಳಿಕೆಗಳನ್ನು ಕೋರ್ಟ್ ಕೂಡ ಖಂಡಿಸಿದೆ.
‘ದಿ ರಣ್ವೀರ್ ಶೋ’ ನಂಬಿಕೊಂಡೇ ತಮ್ಮ ಜೀವನ ಸಾಗುತ್ತಿದೆ. ಅಲ್ಲದೇ ತಾವು 280 ಜನರಿಗೆ ಇದರಿಂದ ಉದ್ಯೋಗ ನೀಡಿದ್ದು, ಅವರೆಲ್ಲರ ಜೀವನದ ದೃಷ್ಟಿಯಿಂದ ಶೋ ಮುಂದುವರಿಸಲು ಅವಕಾಶ ನೀಡಬೇಕು ಎಂದು ರಣ್ವೀರ್ ಅಲಹಾಬಾದಿಯಾ ಅವರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕೆಲವು ಷರತ್ತುಗಳ ಜೊತೆ ಶೋ ಮುಂದುವರಿಸಲು ಅನುಮತಿ ಕೊಟ್ಟಿದೆ.
ಇದನ್ನೂ ಓದಿ: ಇಂಡಿಯಾ ಗಾಟ್ ಲೇಟೆಂಟ್ ವಿವಾದ, ರಾಖಿ ಸಾವಂತ್ಗೂ ಸಮನ್ಸ್
ಈ ಶೋನಲ್ಲಿ ಪ್ರಸಾರ ಆಗುವ ವಿಷಯಗಳು ಎಲ್ಲ ವಯೋಮಾನದ ವೀಕ್ಷಕರು ನೋಡುವಂತೆ ನೈತಿಕತೆ ಮತ್ತು ಸಭ್ಯತೆಯನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ. ಅಲ್ಲದೇ ಈ ಎಪಿಸೋಡ್ಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಕೇಸ್ ಬಗ್ಗೆ ಯಾವುದೇ ಚರ್ಚೆ ಮಾಡುವಂತಿಲ್ಲ ಎಂದು ಕೂಡ ಆದೇಶಿಸಿದೆ. ಅಣ್ವೀರ್ ಅಲಹಾಬಾದಿಯಾಗೆ ನೀಡಿದ ನಿರೀಕ್ಷಣಾ ಜಾಮೀನಿನ ಅವಧಿಯನ್ನು ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ. ಇದರಿಂದ ಅವರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.