
ಬಾಲಿವುಡ್ನ ಪ್ರಸಿದ್ಧ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಟನಿಗೆ ಮಧ್ಯಂತರ ಜಾಮೀನು ನೀಡಿದೆ. ಈ ಆದೇಶದಿಂದ ನಟ ಸದ್ಯಕ್ಕೆ ಜೈಲು ಶಿಕ್ಷೆಯಿಂದ ಬಚಾವ್ ಆಗಿದ್ದಾರೆ. ಆದರೆ ನ್ಯಾಯಾಲಯ ಅವರಿಗೆ ಭಾರೀ ಮೊತ್ತ ಠೇವಣಿ ಇಡಲು ಸೂಚಿಸಿದೆ. ಇದನ್ನು ಅವರಿಂದ ಕಟ್ಟಲು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ನಟ ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ಯಾದವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ನಿರ್ಧಾರ ತಳೆಯಲಾಗಿದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಬುಧವಾರದೊಳಗೆ 5 ಕೋಟಿ ರೂಪಾಯಿ ಠೇವಣಿ ಇಡಲು ಷರತ್ತು ವಿಧಿಸಲಾಗಿದೆ. ಈ ಹಣ ಪಾವತಿಸಿದರೆ ಮಾತ್ರ ವಿನಾಯಿತಿ ಸಿಗಲಿದೆ.
ಈ ಇಡೀ ಪ್ರಕರಣವು ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದೆ. ನಟ ಸಾಲ ಪಡೆದು ಹಣ ಹಿಂದಿರುಗಿಸಿರಲಿಲ್ಲ. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದವು. ಈ ಸಂಬಂಧ ನಟನ ವಿರುದ್ಧ ಹಲವಾರು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿದ್ದವು. ಕಾನೂನು ಹೋರಾಟದ ಭಾಗವಾಗಿ ಈ ವಿಷಯವು ಸುಪ್ರೀಂ ಮೆಟ್ಟಿಲೇರಿತ್ತು.
ಇದಕ್ಕೂ ಮುನ್ನ ಹೈಕೋರ್ಟ್ ನಟನಿಗೆ ಏಳು ಪ್ರಕರಣಗಳಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸುವಂತೆ ಸೂಚಿಸಿತ್ತು. ಪ್ರತಿಯೊಂದು ಪ್ರಕರಣಗಳಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ನೀಡಲು ನಿರ್ದೇಶಿಸಲಾಗಿತ್ತು. ಇದರಲ್ಲಿ ತಲಾ 25,000 ರೂಪಾಯಿಯನ್ನು ರಾಜ್ಯ ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕಿತ್ತು. ನಟನ ಪತ್ನಿ ರಾಧಾ ಅವರಿಗೆ ಪ್ರತ್ಯೇಕವಾಗಿ ಪ್ರತಿ ಪ್ರಕರಣಕ್ಕೂ 5.51 ಲಕ್ಷ ರೂಪಾಯಿ ಕಟ್ಟಲು ಸೂಚಿಸಲಾಗಿತ್ತು.
ಇದನ್ನೂ ಓದಿ: ಸಾಲದ ಸುಳಿಗೆ ಸಿಲುಕಿ ನಟ ರಾಜ್ಪಾಲ್ ಯಾದವ್ ಆಸ್ತಿ ಹರಾಜು; ಹೆಚ್ಚಿತು ಸಂಕಷ್ಟ
ವಿಚಾರಣೆ ವೇಳೆ ನಟ ಈಗಾಗಲೇ 2.25 ಕೋಟಿ ರೂಪಾಯಿ ಹಣವನ್ನು ದೂರುದಾರರಿಗೆ ಪಾವತಿಸಿರುವುದು ಗಮನಕ್ಕೆ ಬಂದಿದೆ. ಈ ಮೊತ್ತವನ್ನು ಬಾಕಿ ಪಾವತಿಸಬೇಕಾದ ಹಣದಲ್ಲಿ ಕಳೆಯಲು ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ನಟನಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆ ಸಮಯದಲ್ಲಿ ಅವರ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.