SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

|

Updated on: Jun 13, 2021 | 8:44 AM

Sushant Singh Rajput Death Anniversary: ಸುಶಾಂತ್​ ಇಲ್ಲದೆ ಒಂದು ವರ್ಷ ಕಳೆದಿದೆ. ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಮತ್ತು ಕುಟುಂಬದವರು ಹೋರಾಟ ಮಾಡುತ್ತಿದ್ದಾರೆ.

SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?
ಸುಶಾಂತ್ ಸಿಂಗ್ ರಜಪೂತ್
Follow us on

ಬಾಲಿವುಡ್​ನಲ್ಲಿ ಮಿಂಚಿ ಮೆರೆಯಬೇಕಿದ್ದ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರು 2020ರ ಜೂನ್​ 14ರಂದು ದುರ್ಮರಣ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ಕೂಡ ಆ ಸುದ್ದಿ ಸಿಡಿಲಿನಂತೆ ಬಂದೆರಗಿತ್ತು. ಈಗ ಸುಶಾಂತ್​ ಸಿಂಗ್​ ರಜಪೂತ್​ ಇಲ್ಲದೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಅನೇಕ ಗಮನಾರ್ಹ ಘಟನೆಗಳು ನಡೆದಿವೆ. ಯಾವ ದಿನಾಂಕದಲ್ಲಿ ಏನೆಲ್ಲ ಆಯ್ತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಜೂ.14, 2020: ಬಾಂದ್ರಾ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಅಂದು ಮಧ್ಯಾಹ್ನ ಸುದ್ದಿ ಕೇಳಿದ ಎಲ್ಲರಿಗೂ ಅದನ್ನು ನಂಬಲು ಸಾಧ್ಯವಾಗಿರಲಿಲ್ಲ.

ಜೂ.15, 2020: ಸುಶಾಂತ್​ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದು ಆತ್ಮಹತ್ಯೆ ಅಲ್ಲ ಎಂದು ಕಂಗನಾ ರಣಾವತ್​ ಧ್ವನಿ ಎತ್ತಿದರು. ಪ್ರಕರಣದ ತನಿಖೆ ಆಗಬೇಕೆಂದು ಸುಶಾಂತ್​ ಭಾವ ಓಪಿ ಸಿಂಗ್​ ಪಟ್ಟು ಹಿಡಿದರು.

ಜೂ.16, 2020: ಬಿಜೆಪಿ ಸಂಸದ ನಿಶಿಕಾಂತ್​ ದುವೆ ಅವರು ಈ ಸಾವಿನ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ಆರೋಪಿಸಿದರು.

ಜೂ.18, 2020: ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಅವರು ತಮ್ಮ ಹೇಳಿಕೆ ನೀಡಿದರು.

ಜೂ.19, 2020: ಸೋಶಿಯಲ್​ ಮೀಡಿಯಾದಲ್ಲಿ ನೆಪೋಟಿಸಂ, ಗುಂಪುಗಾರಿಕೆ, ಮೂವೀ ಮಾಫಿಯಾದ ಬಗ್ಗೆ ದೊಡ್ಡ ಚರ್ಚೆ ಆರಂಭ ಆಯಿತು.

ಜೂ.24, 2020: ಸುಶಾಂತ್ ಸಿಂಗ್​ ಮರಣೋತ್ತರ ಪರೀಕ್ಷೆ ವರದಿ ಬಂತು. ಸುಶಾಂತ್​ ದೇಹದ ಮೇಲೆ ಯಾವುದೇ ಗಾಯಗಳು ಆಗಿರಲಿಲ್ಲ ಎಂಬುದು ತಿಳಿದುಬಂತು.

ಜು.4, 2020: ಸುಶಾಂತ್​ ತಂದೆ ಕೆಕೆ ಸಿಂಗ್ ಅವರು ತಮ್ಮ ಮಗನ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೇಡಿಕೆ ಇಟ್ಟರು.

ಜು.6, 2020: ನಿರ್ದೇಶಕ ಸಂಜಯ್​ ಲೀಲಾ ಬನ್ಸಾರಿ ಅವರು ಮುಂಬೈ ಪೊಲೀಸರ ಎದುರು ತಮ್ಮ ಹೇಳಿಕೆ ನೀಡಿದರು.

ಜು.14, 2020: ಸುಶಾಂತ್​ ನಿಧನದ ಬಳಿಕ ಅದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಕಾಣಿಸಿಕೊಂಡ ರಿಯಾ ಚಕ್ರವರ್ತಿ ಅವರು ತಮ್ಮ ಅಳಲು ತೋಡಿಕೊಂಡರು.

ಜು.16, 2020: ರಿಯಾ ಚಕ್ರವರ್ತಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಮನವಿ ಮಾಡಿ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಳಿಕೊಂಡರು.

ಜು.24, 2020: ಸುಶಾಂತ್​ ನಟನೆಯ ಕೊನೇ ಸಿನಿಮಾ ‘ದಿಲ್​ ಬೇಚಾರ’ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆ ಆಯಿತು. ಸುಶಾಂತ್​ಗೆ ನಮನ ಸಲ್ಲಿಸುವ ಸಲುವಾಗಿ ಉಚಿತವಾಗಿ ಪ್ರಸಾರ ಮಾಡಲಾಯಿತು.

ಜು.29, 2020: ಸುಶಾಂತ್​ ತಂದೆ ಕೆಕೆ ಸಿಂಗ್​ ಅವರು ಪಾಟ್ನಾದಲ್ಲಿ 6 ಮಂದಿ ವಿರುದ್ಧ ಮಗನ ಕೊಲೆ ಸಂಚು ಆರೋಪಿಸಿ ದೂರು ನೀಡಿದರು.

ಜು.29, 2020: ಕೆಕೆ ಸಿಂಗ್​ ದಾಖಲಿಸಿದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್​ನಲ್ಲಿ ಮನವಿ ಮಾಡಿಕೊಂಡರು.

ಜು.29, 2020: ಬಿಹಾರ ಪೊಲೀಸರು ತನಿಖೆ ನಡೆಸುವ ಸಲುವಾಗಿ ಮುಂಬೈಗೆ ಬಂದರು. ಕಾರ್ಯವ್ಯಾಪ್ತಿ ವಿಚಾರಕ್ಕೆ ಬಿಹಾರ ಮತ್ತು ಮಹಾರಾಷ್ಟ್ರ ಪೊಲೀಸರ ನಡುವೆ ವಿವಾದ ಆಯಿತು.

ಜು.30, 2020: ಈ ಪ್ರಕರಣದ ಸಂಪೂರ್ಣ ಮಾಹಿತಿ ಬೇಕು ಎಂದು ಜಾರಿ ನಿರ್ದೇಶನಾಲಯ ಕೂಡ ಕೇಳಿತು.

ಆ.4, 2020: ಬಿಹಾರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಶಿಫಾರಸು ಮಾಡಿತು.

ಆ.5, 2020: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು.

ಆ.6, 2020: ರಿಯಾ ಚಕ್ರವರ್ತಿ, ಅವರ ತಂದೆ ಇಂದ್ರಜಿತ್​ ಚಕ್ರವರ್ತಿ, ತಾಯಿ ಸಂಧ್ಯಾ, ಸಹೋದರ ಶೋವಿಕ್​, ಸುಶಾಂತ್​ ಮ್ಯಾನೇಜರ್​ ಸ್ಯಾಮುಯಲ್​ ಮಿರಾಂಡ, ಶ್ರುತಿ ಮೋದಿ ಮುಂತಾದವರ ವಿರುದ್ಧ ಸಿಬಿಐ ಎಫ್​ಐಆರ್​ ದಾಖಲಿಸಿತು.

ಆ.10, 2020: ತಮ್ಮನ್ನು ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿ, ರಿಯಾ ಚಕ್ರವರ್ತಿ ಅವರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದರು.

ಆ.19, 2020: ಸುಪ್ರೀಂ ಕೋರ್ಟ್​ ಕೂಡ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು.

ಆ.26, 2020: ಈ ಪ್ರಕರಣವನ್ನು ಎನ್​ಸಿಬಿ ತನಿಖೆ ನಡೆಸಿದರೆ ಬಾಲಿವುಡ್​ನ ಹಲವು ಪ್ರಮುಖರ ಹೆಸರು ಹೊರಬರುತ್ತದೆ ಎಂದು ಕಂಗನಾ ಹೇಳಿದರು.

ಆ.27, 2020: ಸುಶಾಂತ್​ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ತಂದೆ ಕೆಕೆ ಸಿಂಗ್​ ಹೇಳಿಕೆ ನೀಡಿದರು.

ಆ.28, 2020: ಸಿಬಿಐ ಮುಂದೆ ರಿಯಾ ಚಕ್ರವರ್ತಿ ಹಾಜರಾದರು. 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು.

ಸೆ.4, 2020: ರಿಯಾ ಸಹೋದರ ಶೋವಿಕ್​ ಸೇರಿದಂತೆ ಕೆಲವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದರು.

ಸೆ.8, 2020: ರಿಯಾ ಚಕ್ರವರ್ತಿಯನ್ನು ಮೂರು ದಿನ ವಿಚಾರಣೆ ಮಾಡಿದ ಬಳಿಕ ಎನ್​ಸಿಬಿ ಅಧಿಕಾರಿಗಳು ಬಂಧಿಸಿದರು.

ಸೆ.23, 2020: ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​, ರಾಕುಲ್​ ಪ್ರೀತ್​ ಸಿಂಗ್​ ಮುಂತಾದವರಿಗೆ ಎನ್​ಸಿಬಿ ಸಮನ್ಸ್​ ನೀಡಿತು.

ಅ.5. 2020: ಏಮ್ಸ್​ ಮೆಡಿಕಲ್​ ಬೋರ್ಡ್​ ತನ್ನ ವರದಿಯನ್ನು ಸಿಬಿಐಗೆ ಸಲ್ಲಿಸಿತು. ಕೊಲೆ ನಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕಿತು.

ಅ.8. 2020: ರಿಯಾ ಚಕ್ರವರ್ತಿ ಜಾಮೀನು ಪಡೆದು ಬೈಕುಲ್ಲಾ ಜೈಲಿನಿಂದ ಹೊರಬಂದರು.

ಫೆ.15, 2021: ಸುಶಾಂತ್ ಸಹೋದರಿ ವಿರುದ್ಧ ರಿಯಾ ಚಕ್ರವರ್ತಿ ಹೂಡಿದ್ದ ಪ್ರಕರಣವನ್ನು ಬಾಂಬೆ ಹೈ ಕೋರ್ಟ್​ ವಜಾಗೊಳಿಸಿತು.

ಮೇ 28, 2021: ಸುಶಾಂತ್​ ಫ್ಲ್ಯಾಟ್​ಮೇಟ್​ ಸಿದ್ದಾರ್ಥ್​ ಪಿಟಾನಿಯನ್ನು ಡ್ರಗ್ಸ್​ ಕೇಸ್​ಗೆ ಸಂಬಂಧಿಸಿದಂತೆ ಎನ್​ಸಿಬಿ ಅಧಿಕಾರಿಗಳು ಬಂಧಿಸಿದರು.

ಸುಶಾಂತ್ ಸಾವಿನ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ. ಸಿಬಿಐ ಅಧಿಕಾರಿಗಳು ಇನ್ನೂ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ಅಭಿಮಾನಿಗಳು ಮತ್ತು ಕುಟುಂಬದವರು ಹೋರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:

SSR Case: ಸಾಯುವುದಕ್ಕೂ ಮುನ್ನ ನಟನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದ ಸುಶಾಂತ್; ಅವರು ಯೋಚಿಸಿದ್ದೇನು?

ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು