ವಿಶ್ವ ಸುಂದರಿ ಸ್ಪರ್ಧಿಗಳ ಕಾಲು ತೊಳೆದ ತೆಲಂಗಾಣ ಮಹಿಳೆಯರು; ಜನರ ಖಂಡನೆ

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವಿದೇಶಿ ಮಹಿಳೆಯರು ಭಾರತಕ್ಕೆ ಬಂದಿದ್ದಾರೆ. 100ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ತೆಲಂಗಾಣದ ರಾಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಕಾಲುಗಳನ್ನು ಸ್ಥಳೀಯ ಮಹಿಳೆಯರು ತೊಳೆದಿದ್ದಾರೆ. ಈ ಸಂದರ್ಭದ ವಿಡಿಯೋ ನೋಡಿ ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ.

ವಿಶ್ವ ಸುಂದರಿ ಸ್ಪರ್ಧಿಗಳ ಕಾಲು ತೊಳೆದ ತೆಲಂಗಾಣ ಮಹಿಳೆಯರು; ಜನರ ಖಂಡನೆ
Miss World Contestants

Updated on: May 15, 2025 | 9:15 PM

ತೆಲಂಗಾಣ ಸರ್ಕಾರ (Telangana Government) ಯಾರನ್ನೋ ಮೆಚ್ಚಿಸಲು ಹೋಗಿ ಒಂದು ಎಡವಟ್ಟು ಮಾಡಿದೆ. ತೆಲಂಗಾಣದ ಮಹಿಳೆಯರಿಂದ ವಿದೇಶಿ ಮಹಿಳೆಯರ ಕಾಲು ತೊಳೆಸಲಾಗಿದೆ! ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಗುಲಾಮಗಿರಿ ಮತ್ತು ಜನಾಂಗೀಯ ಭೇದದಂತೆ ಕಾಣುತ್ತಿದೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ. ವಿಶ್ವ ಸುಂದರಿ (Miss World) ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮಹಿಳೆಯರು ಹೈದರಾಬಾದ್​ಗೆ ಬಂದಿದ್ದಾರೆ. ಇಲ್ಲಿನ ದೇವಸ್ಥಾನಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರಿಂದ ವಿಶ್ವ ಸುಂದರಿ ಸ್ಪರ್ಧಿಗಳ (Miss World Contestants) ಕಾಲು ತೊಳೆಸಲಾಗಿದೆ.

ಈ ಬಾರಿ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಅದರ ಪ್ರಕ್ರಿಯೆಗಳು ಆರಂಭ ಆಗಿವೆ. ಅದರ ಅಂಗವಾಗಿ ಕೆಲವು ಸ್ಥಳಗಳಿಗೆ ವಿದೇಶಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಮೇ 31ರಂದು ಹೈದರಾಬಾದ್​ನಲ್ಲಿ ಮಿಸ್ ವರ್ಲ್ಡ್​ ಸ್ಪರ್ಧೆಯ ಫಿನಾಲೆ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈ ನಡುವೆ ವಿವಾದ ಕೂಡ ಶುರುವಾಗಿದೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

ನೂರಕ್ಕೂ ಅಧಿಕ ದೇಶಗಳಿಂದ ಬಂದಿರುವ ವಿಶ್ವ ಸುಂದರಿ ಸ್ಪರ್ಧಿಗಳು ತೆಲಂಗಾಣದಲ್ಲಿ ಉಳಿದುಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ಮೇ 10ರಿಂದ ವಿಶ್ವ ಸುಂದರಿ ಸ್ಪರ್ಧೆಯ ಪ್ರಕ್ರಿಯೆಗಳು ಆರಂಭ ಆದವು. ಸ್ಪರ್ಧಿಗಳೆಲ್ಲರೂ ರಾಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ! ಇದರ ಉಸ್ತುವಾರಿಯನ್ನು ತೆಲಂಗಾಣ ಸರ್ಕಾರದ ಪ್ರವಾಸೋದ್ಯಮದ ಇಲಾಖೆ ವಹಿಸಿಕೊಂಡಿದೆ. ಸಂಪ್ರದಾಯದ ಪ್ರಕಾರ ಕಾಲು ತೊಳೆದುಕೊಂಡು ದೇವಸ್ಥಾನ ಪ್ರವೇಶ ಮಾಡಬೇಕು. ಆದರೆ ಆ ಸಂಪ್ರದಾಯ ಪಾಲಿಸುವಲ್ಲಿ ಅತಿರೇಕದ ವರ್ತನೆ ತೋರಿಸಲಾಗಿದೆ.

ವಿದೇಶಿ ಮಹಿಳೆಯರನ್ನು ಸಾಲಾಗಿ ಕೂರಿಸಲಾಗಿದೆ. ಅವರ ಕಾಲುಗಳನ್ನು ತೆಲಂಗಾಣದ ಸ್ಥಳೀಯ ಮಹಿಳೆಯರಿಂದ ತೊಳೆಸಲಾಗಿದೆ. ಬಳಿಕೆ ಕಾಲು ಒರೆಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಬಹುತೇಕರು ಕಟುವಾಗಿ ಟೀಕಿಸಿದ್ದಾರೆ. ‘ತೆಲಂಗಾಣ ಸರ್ಕಾರದ ಅಸಹ್ಯ ಕೆಲಸ ಇದು’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಖುಷಿಯಲ್ಲಿ ಡೆನ್ಮಾರ್ಕ್‌ ಚೆಲುವೆ

ನೂರಾರು ಸ್ಪರ್ಧಿಗಳಲ್ಲಿ ಕೆಲವರು ಯಾರ ಸಹಾಯವನ್ನೂ ಪಡೆಯದೇ ಸ್ವತಃ ಕಾಲು ತೊಳೆದುಕೊಂಡರು. ಆದರೆ ಇನ್ನುಳಿದ ಸ್ಪರ್ಧಿಗಳಿಗೆ ತೆಲಂಗಾಣದ ಮಹಿಳೆಯರು ಕಾಲು ತೊಳೆಸಿದರು. ಇದು ನಾರಿ ಶಕ್ತಿಗೆ ಮಾಡಿದ ಅವಮಾನ ಎಂದು ಟೀಕಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.