
ಜೀ ಕನ್ನಡ ವಾಹಿನಿಯ ಜನಪ್ರಿಯ ‘ಅಮೃತಧಾರೆ’ ಧಾರಾವಾಹಿಯು (Amruthadhare Serial) ದಿನದಿಂದ ದಿನಕ್ಕೆ ತಿರುವಿನೊಂದಿಗೆ ಸಾಗುತ್ತಿದೆ. ಈಗ ಕಥೆ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇತ್ತೀಚಿನ ಸಂಚಿಕೆಗಳಲ್ಲಿ ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಆಕೆಯನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ಭೂಮಿಕಾ, ಈಗ ರೌಡಿಗಳ ಹೆಡೆಮುರಿ ಕಟ್ಟಲು ಭದ್ರಕಾಳಿ ಅವತಾರ ತಾಳಿದ್ದಾಳೆ.
ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ ಹಳೆ ರೌಡಿಗಳ ಸಹಾಯದೊಂದಿಗೆ ಕಿಡ್ನ್ಯಾಪರ್ಗಳ ಅಡಗುದಾಣವನ್ನು ಪತ್ತೆಹಚ್ಚಲು ಮುಂದಾಗುತ್ತಾಳೆ. ಒಂದು ಹಳೆಯ ಗೋದಾಮಿನಲ್ಲಿ ಮಿಂಚನ್ನು ಕೂಡಿಹಾಕಿರುವುದು ಗೊತ್ತಾದ ತಕ್ಷಣ ಅಲ್ಲಿಗೆ ಧಾವಿಸುತ್ತಾಳೆ. ಆದರೆ, ಪೊಲೀಸರು ಮತ್ತು ಭೂಮಿಕಾ ಕಣ್ಣು ತಪ್ಪಿಸಿ ಕಿಡ್ನ್ಯಾಪರ್ಗಳು ಮಿಂಚನ್ನು ಮತ್ತೊಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಾರೆ.
ನಂತರ ಆಕೆಯನ್ನು ಕಿಡ್ನ್ಯಾಪ್ ಮಾಡಿದವರ ಬಳಿ ಭೂಮಿಕಾ ತೆರಳುತ್ತಾಳೆ. ತಾಯಿಯ ಮಮತೆಯ ಜೊತೆಗೆ ರೌಡಿಗಳನ್ನು ಸಂಹರಿಸುವ ಉಗ್ರ ರೂಪ ತಳೆಯುತ್ತಾಳೆ. ಮಗಳನ್ನು ಕಾಪಾಡಲು ಮುಂದಾಗುವ ಭೂಮಿಕಾ ಎದುರು ಬರುವ ಪ್ರತಿಯೊಬ್ಬ ಗೂಂಡಾಗೂ ತಕ್ಕ ಶಾಸ್ತಿ ಮಾಡುತ್ತಾಳೆ. ಕೈಗೆ ಸಿಕ್ಕ ಕಡ್ಡಿ, ಕಬ್ಬಿಣದ ರಾಡ್ಗಳನ್ನೇ ಆಯುಧವಾಗಿಸಿಕೊಂಡು ರೌಡಿಗಳ ಮೇಲೆ ಮುಗಿಬೀಳುತ್ತಾಳೆ. ಭೂಮಿಕಾಳ ಈ ಅನಿರೀಕ್ಷಿತ ಸಾಹಸ ನೋಡಿ ಎಲ್ಲರೂ ಬೆಚ್ಚಿಬೀಳುತ್ತಾರೆ.
ಇದನ್ನೂ ಓದಿ: ಅಮೃತಧಾರೆ: ಆ ಒಂದು ವಿಷಯಕ್ಕೆ ದಿಯಾಳನ್ನು ಕೊಂದೇ ಬಿಟ್ಟ ಜೆಡಿ
ಸಾಮಾನ್ಯವಾಗಿ ಸೌಮ್ಯ ಸ್ವಭಾವದ ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ಭೂಮಿಕಾ, ಮಗಳ ರಕ್ಷಣೆಗಾಗಿ ಇಷ್ಟು ದೊಡ್ಡ ಸಾಹಸಕ್ಕೆ ಕೈ ಹಾಕಿರುವುದು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಈ ರೋಚಕ ಸಂಚಿಕೆಯು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಭೂಮಿಕಾ ತನ್ನ ಮಗಳು ಮಿಂಚನ್ನು ಕಿಡ್ನ್ಯಾಪರ್ಗಳಿಂದ ಸುರಕ್ಷಿತವಾಗಿ ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಮುಂದಿನ ಸಂಚಿಕೆಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.