
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare) ಸದ್ಯ ಅತ್ಯಂತ ರೋಚಕ ತಿರುವುಗಳೊಂದಿಗೆ ಪ್ರಸಾರವಾಗುತ್ತಿದೆ. ಸದಾ ಕೆಟ್ಟ ಕೆಲಸಗಳನ್ನು ಮಾಡುತ್ತಾ, ಎಲ್ಲರ ದ್ವೇಷ ಕಟ್ಟಿಕೊಂಡಿದ್ದ ಶಾಕುಂತಲಾ ಒಮ್ಮೆಲೆ ಸಂಪೂರ್ಣವಾಗಿ ಬದಲಾದಂತೆ ನಾಟಕವಾಡಿದ್ದರು. ತನ್ನ ಸ್ವಂತ ಮಗ ಜಯದೇವ್ ಮಾಡಿದ ತಪ್ಪುಗಳ ವಿರುದ್ಧವೇ ತಿರುಗಿಬಿದ್ದು, ತಾನೊಬ್ಬ ಆದರ್ಶ ತಾಯಿ ಎಂಬಂತೆ ಬಿಂಬಿಸಿಕೊಂಡಿದ್ದರು. ಆದರೆ ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಶಾಕುಂತಲಾ ತನ್ನ ಅಸಲಿ ಮುಖವನ್ನು ತೋರಿಸುವ ಮೂಲಕ ವೀಕ್ಷಕರಿಗೆ ದೊಡ್ಡ ಶಾಕ್ ನೀಡಿದ್ದಾಳೆ.
ಧಾರಾವಾಹಿಯ ಹೊಸ ಪ್ರೋಮೋದಲ್ಲಿ ಜೈಲಿನಲ್ಲಿದ್ದ ಜಯದೇವ್ಗೆ ಯಾರೋ ಬೇಲ್ ಕೊಡಿಸಿ ಬಿಡುಗಡೆ ಮಾಡಿಸುತ್ತಾರೆ. ಆಚೆ ಬಂದು ನೋಡಿದಾಗ ಅಲ್ಲಿ ಶಾಕುಂತಲಾ ನಿಂತಿರುತ್ತಾಳೆ. ‘ಅಮ್ಮಾ ನೀನೇ ನನಗೆ ಬೇಲ್ ಕೊಡಿಸಿದ್ದಾ?’ ಎಂದು ಜಯದೇವ್ ಆಶ್ಚರ್ಯದಿಂದ ಕೇಳಿದಾಗ, ಶಾಕುಂತಲಾ ತನ್ನ ಕ್ರೂರ ನಗುವಿನೊಂದಿಗೆ ಅಸಲಿ ಸತ್ಯವನ್ನು ಬಿಚ್ಚಿಡುತ್ತಾಳೆ. ‘ಇಷ್ಟು ದಿನ ನೀನು ನೋಡಿದ್ದಾವುದೂ ನಿಜವಲ್ಲ ಜಯದೇವ್, ಅದೆಲ್ಲಾ ನಾನು ಆಡಿದ ನಾಟಕ! ಇನ್ಮೇಲೆ ಶಾಕುಂತಲಾಳ ನಿಜವಾದ ಮುಖ ಏನೆಂದು ತೋರಿಸ್ತೀನಿ’ ಎನ್ನುತ್ತಾ ತನ್ನ ಕಪಟ ಬುದ್ಧಿಯನ್ನು ಮತ್ತೆ ಜಾಗೃತಗೊಳಿಸುತ್ತಾಳೆ.
ಇದನ್ನೂ ಓದಿ: ‘ಅಮೃತಧಾರೆ’ ಮಹಾ ತಿರುವು; ಗೌತಮ್ ಹಾಗೂ ಭೂಮಿಕಾ ದಂಪತಿಗೆ ತಿಳಿಯಿತು ಮಿಂಚು ಸತ್ಯ
ಶಾಕುಂತಲಾ ತಾನು ಯಾವುದೇ ಕಾರಣಕ್ಕೂ ಬದಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ತನ್ನ ಮಲಮಗ ಗೌತಮ್ ಹಾಗೂ ಆತನ ಪತ್ನಿ ಭೂಮಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆ ಭೀಕರ ಶಪಥ ತೊಟ್ಟಿದ್ದಾಳೆ. ಗೌತಮ್ ಮತ್ತು ಭೂಮಿಕಾ ಜೋಡಿಯನ್ನು ಸರ್ವನಾಶ ಮಾಡಲು ತಾನು ಮತ್ತೆ ಹಳೆ ರೂಪಕ್ಕೆ ಮರಳಿರುವುದಾಗಿ ಜಯದೇವ್ ಮುಂದೆ ವಿವರಿಸಿದ್ದಾಳೆ. ಅಲ್ಲಿಗೆ ಗೌತಮ್ ಸಂಸಾರಕ್ಕೆ ಮತ್ತೆ ಕಂಟಕ ಎದುರಾಗುವುದು ಗ್ಯಾರಂಟಿ ಎಂಬುದು ಪ್ರೋಮೋದಿಂದ ಸಾಬೀತಾಗಿದೆ.
ವಿಶೇಷವೆಂದರೆ, ‘ಅಮೃತಧಾರೆ’ ಧಾರಾವಾಹಿಯು ಯಶಸ್ವಿಯಾಗಿ 1000 ಸಂಚಿಕೆಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಇಂತಹ ಮಹತ್ವದ ಮೈಲಿಗಲ್ಲು ತಲುಪುವ ಸಂದರ್ಭದಲ್ಲೇ ಶಾಕುಂತಲಾಳ ನೆಗೆಟಿವ್ ಪಾತ್ರ ಮತ್ತೆ ಮುನ್ನೆಲೆಗೆ ಬಂದಿರುವುದು ಮತ್ತು ಆಕೆ ಸದಾ ಒಳ್ಳೆಯವಳಾಗಿ ಇರುತ್ತಾಳೆ ಎಂದು ನಂಬಿದ್ದ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ. ಸದಾ ಸಕಾರಾತ್ಮಕವಾಗಿ ಸಾಗುತ್ತಿದ್ದ ಕಥೆಯಲ್ಲಿ ಮತ್ತೆ ಹಳೆಯ ಸೇಡಿನ ಕಥೆ ಶುರುವಾಗಿರುವುದು ವೀಕ್ಷಕರಲ್ಲಿ ನಿರಾಸೆ ಮೂಡಿಸಿದ್ದು, ಮುಂದೆ ಕಥೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.