‘ನಾನು ಸತ್ತರೂ ತಿರುಗಿ ನೋಡಬೇಡಿ’: ಮಂಜುಗೆ ಖಡಕ್ ಎಚ್ಚರಿಕೆ ನೀಡಿದ ಗೌತಮಿ

ಒಂದಷ್ಟು ದಿನಗಳ ಹಿಂದೆ ಗೌತಮಿ ಜಾದವ್ ಅವರಿಗೆ ಉಗ್ರಂ ಮಂಜು ಜತೆಗಿನ ಒಡನಾಟ ಆಪ್ತ ಎನಿಸುತ್ತಿತ್ತು. ಆದರೆ ಈಗ ಮಂಜುನ ಅವರು ದೂರ ಇಡುತ್ತಿದ್ದಾರೆ. ಇದರಿಂದಾಗಿ ಮಂಜುಗೆ ಕಸಿವಿಸಿ ಆಗುತ್ತಿದೆ. ಸ್ನೇಹದ ಕಾರಣದಿಂದ ಆಪ್ತತೆ ಬೆಳೆಸಿಕೊಂಡಿದ್ದ ಮಂಜುಗೆ ಈಗ ಅಂತರ ಕಾಯ್ದುಕೊಳ್ಳಲು ಬರುತ್ತಿಲ್ಲ. ಹಾಗಾಗಿ ಅವರು ಪದೇಪದೇ ಪೇಚಿಗೆ ಸಿಲುಕುತ್ತಿದ್ದಾರೆ.

‘ನಾನು ಸತ್ತರೂ ತಿರುಗಿ ನೋಡಬೇಡಿ’: ಮಂಜುಗೆ ಖಡಕ್ ಎಚ್ಚರಿಕೆ ನೀಡಿದ ಗೌತಮಿ
ಬಿಗ್ ಬಾಸ್​ ಕನ್ನಡ ಸೀಸನ್​ 11

Updated on: Dec 12, 2024 | 10:55 PM

ಬಿಗ್ ಬಾಸ್ ಆಟದ ಪ್ರತಿ ಹಂತದಲ್ಲೂ ಉಗ್ರಂ ಮಂಜು ಅವರು ಗೌತಮಿ ಜಾದವ್ ಅವರ ಪರವಾಗಿ ನಿಂತಿದ್ದಾರೆ. ‘ನಾನು ಗೌತಮಿಯನ್ನು ಮೆಚ್ಚಿಸಬೇಕು’ ಎಂದು ಸುದೀಪ್ ಎದುರು ಹೇಳಿಕೆ ನೀಡಲು ಕೂಡ ಅವರು ಹಿಂಜರಿಕೆ ಮಾಡಿಕೊಂಡಿರಲಿಲ್ಲ. ರಾಜಾಡಳಿತದ ಟಾಸ್ಕ್​ನಲ್ಲಿ ಮಂಜು ರಾಜನಾದಾಗ ಗೌತಮಿಗೆ ಫೇವರ್ ಮಾಡಿದ್ದರು ಕೂಡ. ಆದರೆ ಈಗ ಗೌತಮಿ ಮತ್ತು ಮಂಜು ನಡುವೆ ಬಿರುಕು ಮೂಡಿದೆ. ಆಟದ ತೀವ್ರತೆ ಹೆಚ್ಚಾದಂತೆಲ್ಲ ಇಬ್ಬರೂ ದೂರ ಆಗುತ್ತಿದ್ದಾರೆ. ಗೌತಮಿಯೇ ಮಂಜು ಅವರನ್ನು ದೂರ ತಳ್ಳುತ್ತಿದ್ದಾರೆ. ಗುರುವಾರದ (ಡಿ.12) ಸಂಚಿಕೆಯಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಗೌತಮಿ ಅವರ ಮೇಲೆ ಮಂಜು ಸಾಕಷ್ಟು ಪ್ರಭಾವ ಬೀರುತ್ತಾರೆ. ಇಷ್ಟು ವಾರಗಳ ತನಕ ಗೌತಮಿ ಅವರು ಆ ಬಗ್ಗೆ ತಕರಾರು ತೆಗೆದಿರಲಿಲ್ಲ. ಆದರೆ ಇತ್ತೀಚೆಗೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ. ಕೆಲವೇ ದಿನಗಳ ಹಿಂದೆ ಮಂಜು ಜೊತೆ ಗಂಟೆಗಟ್ಟಲೆ ಕುಳಿತು ಮಾತನಾಡುತ್ತಿದ್ದರು. ಮಂಜು ಜೊತೆ ಸೇರಿ ಅನೇಕ ಬಗೆಯ ತಂತ್ರಗಾರಿಕೆ ಮಾಡುತ್ತಿದ್ದರು. ಆಗೆಲ್ಲ ಅವರಿಗೆ ಮಂಜು ಸ್ನೇಹ ಸರಿ ಎನಿಸುತ್ತಿತ್ತು. ಆದರೆ ಈಗ ಅವರು ಏಕಾಏಕಿ ಬದಲಾಗಿದ್ದಾರೆ.

ಮಂಜು ಮಾತನಾಡಿಸಲು ಬಂದರೂ ಗೌತಮಿ ಅವರು ಈಗ ಸರಿಯಾಗಿ ಮಾತನಾಡುತ್ತಿಲ್ಲ. ಸಾಧ್ಯವಾದಷ್ಟು ಅಂತರ ಕಾಪಾಡಿಕೊಳ್ಳಲು ಗೌತಮಿ ಪ್ರಯತ್ನಿಸುತ್ತಿದ್ದಾರೆ. ತಮ್ಮ ನಡುವೆ ಬರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲು ಕೂಡ ಗೌತಮಿ ಸಿದ್ಧರಿಲ್ಲ. ಅದರ ಬದಲು ಮಂಜು ಆಡುವ ಬಹುತೇಕ ಎಲ್ಲ ಮಾತಿನಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೋಕ್ಷಿತಾನ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದ ಗೌತಮಿ; ಮುಂದುವರಿದ ದ್ವೇಷದ ಕಾವು

ಗೌತಮಿ ಟಾಸ್ಕ್ ಆಡುವಾಗ ಹಾಗೂ ಕ್ಯಾಪ್ಟನ್ ಜವಾಬ್ದಾರಿಯನ್ನು ನಿಭಾಯಿಸುವಾಗ ಮಂಜು ಮಧ್ಯ ಮಾತನಾಡಿದರೆ ಗೌತಮಿಗೆ ಸಿಕ್ಕಾಪಟ್ಟೆ ಕೋಪ ಬರುತ್ತಿದೆ. ಈ ವಿಚಾರವಾಗಿ ಅವರು ತುಂಬ ಕಟುವಾಗಿ ಎಚ್ಚರಿಕೆ ನೀಡಿದ್ದಾರೆ. ‘ನಾನು ಸತ್ತರೂ ತಿರುಗಿ ನೋಡಬೇಡಿ. ನಾನು ಸತ್ತಿದ್ದೇನೆ ಎಂದುಕೊಳ್ಳಿ. ನೀವು ನಿಮ್ಮ ಕೆಲಸ ಮಾಡಿ, ಬೇಕಿದ್ದರೆ ಕಾಲಿಗೆ ಬೀಳುತ್ತೇನೆ’ ಎಂದು ಗೌತಮಿ ಅವರು ಮಂಜುಗೆ ಹೇಳಿದ್ದಾರೆ. ಇಷ್ಟೆಲ್ಲ ಮಾತುಗಳನ್ನು ಕೇಳಿಸಿಕೊಂಡ ಬಳಿಕ ಮಂಜು ಅವರು ಮುಂದಿನ ಆಟ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗುವ ಅವಕಾಶ ಗೌತಮಿಗೂ ಕೈ ತಪ್ಪಿದೆ. ಮಂಜು ಕೂಡ ಕ್ಯಾಪ್ಟನ್ ಆಗುವ ಚಾನ್ಸ್ ಕಳೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us