‘ಬಿಗ್ ಬಾಸ್ 11’ ಟ್ರೋಫಿ ಎದುರು ಕಣ್ಣೀರು ಹಾಕಿದ ಮಂಜು; ಬೇಡಿಕೊಂಡ ಮೋಕ್ಷಿತಾ

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. 6 ಮಂದಿ ಫೈನಲಿಸ್ಟ್​ಗಳ ಬಗ್ಗೆ ಒಬ್ಬರಿಗೆ ಟ್ರೋಫಿ ಸಿಗಲಿದೆ. ಭವ್ಯಾ ಗೌಡ, ಮೋಕ್ಷಿತಾ ಪೈ, ಹನುಮಂತ, ಉಗ್ರಂ ಮಂಜು, ತ್ರಿವಿಕ್ರಮ್ ಹಾಗೂ ರಜತ್ ಅವರು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳವಾರ (ಜನವರಿ 21) ಸಂಚಿಕೆಯಲ್ಲಿ ಟ್ರೋಫಿಯನ್ನು ಹತ್ತಿರದಿಂದ ನೋಡಿದ್ದಾರೆ.

‘ಬಿಗ್ ಬಾಸ್ 11’ ಟ್ರೋಫಿ ಎದುರು ಕಣ್ಣೀರು ಹಾಕಿದ ಮಂಜು; ಬೇಡಿಕೊಂಡ ಮೋಕ್ಷಿತಾ
Ugram Manju, Mokshitha Pai

Updated on: Jan 21, 2025 | 10:11 PM

ಫಿನಾಲೆಯಲ್ಲಿ ವಿನ್ನರ್​ ಹಿಡಿಯುವ ಟ್ರೋಫಿಯ ಅನಾವರಣ ಮಾಡಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ 6 ಸ್ಪರ್ಧಿಗಳು ಫಿನಾಲೆ ಸೇರಿದ್ದಾರೆ. 113ನೇ ದಿನದಲ್ಲಿ ಆಕರ್ಷಕ ಟ್ರೋಫಿಯನ್ನು ದೊಡ್ಮನೆ ಒಳಗೆ ತರಲಾಗಿದೆ. ಅದರ ಎದುರು ಕುಳಿತು ಸ್ಪರ್ಧಿಗಳು ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ. ತಮಗೆ ಈ ಟ್ರೋಫಿ ಯಾಕೆ ಮುಖ್ಯ ಎಂಬುದನ್ನು ಎಲ್ಲರೂ ವಿವರಿಸಿದ್ದಾರೆ. ಟ್ರೋಫಿ ನೋಡಿದ ತಕ್ಷಣ ಉಗ್ರಂ ಮಂಜು, ಮೋಕ್ಷಿತಾ ಪೈ ಅವರು ಎಮೋಷನಲ್ ಆಗಿದ್ದಾರೆ.

ಮೋಕ್ಷಿತಾ ಪೈ ಅವರು ಕಿರಿತೆರೆ ಸೀರಿಯಲ್​ಗಳಲ್ಲಿ ನಟಿಸುತ್ತಿದ್ದರು. ಅವರಿಗೆ ಬಿಗ್ ಬಾಸ್​ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಈಗ ಫಿನಾಲೆ ತಲುಪಿದ್ದಾರೆ. ‘ಬಿಗ್ ಬಾಸ್​ನಿಂದ ಫೋನ್ ಬಂದಾಗ ಬೆಂಬಲ ನೀಡಿದ್ದು ಅಮ್ಮ. ಅದು ಅವರ ಕನಸು. ಪ್ರಾಮಾಣಿಕವಾಗಿ ಆಟ ಆಡಿದ್ದೇನೆ. ಫಿನಾಲೆ ವಾರದಲ್ಲಿ ಕುಳಿತಿದ್ದು ನನಗೆ ಸರ್ಪೈಸ್​. ಟ್ರೋಫಿ ನೋಡಿ ದಿಗ್ಭಮೆ ಆಯಿತು. ಅಮ್ಮನ ಆಶೀರ್ವಾದ, ದೇವರ ಆಶೀರ್ವಾದ ಮತ್ತು ಜನರ ಪ್ರೀತಿ ಇದ್ದರೆ ಟ್ರೋಫಿ ನನ್ನದಾಗತ್ತೆ. 12 ವಾರ ನಾಮಿನೇಟ್​ ಆಗಿದ್ದವಳನ್ನು ಜನರು ಇಲ್ಲಿಯ ತನಕ ಉಳಿಸಿದ್ದಾರೆ. ಜನರು ಮನಸ್ಸು ಮಾಡಿದರೆ ಈ ಟ್ರೋಫಿ ನನ್ನದಾಗತ್ತೆ’ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ.

ಉಗ್ರಂ ಮಂಜು ಅವರು ಬಿಗ್ ಬಾಸ್ ಟ್ರೋಫಿಯ ಎದುರು ಕಣ್ಣೀರು ಹಾಕಿದರು. ‘ನನ್ನ ತಾಯಿ ತಂದೆ, ತಂಗಿಯರ ಆಸೆ ಇದು. ಕಲಾವಿದನಾಗಬೇಕು ಅಂತ ಬಂದು ಮನೆ ಮಠ ಇಲ್ಲದೇ ಬೆಂಗಳೂರಲ್ಲಿ ಕಾಲ ಕಳೆದೆ. 200 ಸಿನಿಮಾ ಮಾಡಿದರೂ ಒಂದು ಅವಾರ್ಡ್ ಬಂದಿಲ್ಲ. ಈ ಮನೆಯಲ್ಲಿ ಏಳು-ಬೀಳು ಕಂಡು ಜೀವಿಸಿದ್ದೀನಿ. ವ್ಯಕ್ತಿತ್ವ ಉಳಿಸಿಕೊಂಡಿದ್ದೇನೆ. ಕೆಲವೊಂದನ್ನು ಬಿಟ್ಟುಕೊಡೀಕೆ ಆಗಲ್ಲ. ಈ ಮನೆಯಲ್ಲಿ ನನ್ನ ಕಡೆಯಿಂದಲೂ ತಪ್ಪು ಆಗಿರಬಹುದು. ಕೆಲವರಿಗೆ ನೋವು ನೀಡಿರಬಹುದು. ಇಷ್ಟು ವರ್ಷ ಇಲ್ಲದೇ ಇರುವುದನ್ನು ಇಲ್ಲಿ ಕಲಿತಿದ್ದೇನೆ’ ಎಂದರು ಮಂಜು.

ಇದನ್ನೂ ಓದಿ: ಬಿಗ್ ಬಾಸ್​ಗೆ ಬಂದ 2ನೇ ವಾರದಲ್ಲೇ ನಾನು ಕಪ್ ಗೆದ್ದೆ; ತಮ್ಮದೇ ಲೆಕ್ಕಾಚಾರ ತಿಳಿಸಿದ ಹನುಮಂತ

ರಜತ್ ಕೂಡ ಟ್ರೋಫಿ ಎದುರು ಮನದ ಮಾತು ಹಂಚಿಕೊಂಡರು. ‘ನನ್ನ ಮಾತಿನಿಂದ ಹರ್ಟ್ ಆಗಿದ್ದರೆ ಕ್ಷಮೆ ಇರಲಿ. ವೈಲ್ಡ್ ಕಾರ್ಡ್​ ಮೂಲಕ ಬಂದು ಘಟಾನುಘಟಿಗಳನ್ನು ಹೊರಗೆ ಹಾಕಿ ಫಿನಾಲೆಗೆ ಬಂದಿದ್ದೀನಿ ಅಂದರೆ ನನಗೆ ಎಷ್ಟು ಪ್ರೀತಿ ಸಿಕ್ಕಿದೆ ಎಂಬುದು ತಿಳಿಯುತ್ತಿದೆ. ಕಪ್ ನನಗೆ ತುಂಬ ಮುಖ್ಯ. ಅದನ್ನೂ ಮೀರಿ ನಾನು ಈ ಶೋಗೆ ಬಂದಿದ್ದು ಜನರ ಪ್ರೀತಿಗೆ. ವ್ಯಕ್ತಿತ್ವದಲ್ಲಿ ನಾನು ಏರುಪೇರು ಮಾಡಿಕೊಂಡಿಲ್ಲ. ಹೊರಗೆ ಇದ್ದಂತೆಯೇ ನಾನು ಇಲ್ಲಿ ಇದ್ದೇನೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us