ಸುದೀಪ್ ಎದುರೇ ಧ್ರುವಂತ್​​ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ

Bigg Boss Kannada season 12: ರಕ್ಷಿತಾ ಮತ್ತು ಧ್ರುವಂತ್ ಅವರು ಸೀಕ್ರೆಟ್ ರೂಂನಲ್ಲಿದ್ದರು. ಶನಿವಾರದ ಎಪಿಸೋಡ್​​ನಲ್ಲಿ ಸುದೀಪ್ ಅವರು ಪ್ರತ್ಯೇಕವಾಗಿ ಅವರೊಟ್ಟಿಗೆ ಮಾತನಾಡಿದರು. ರಕ್ಷಿತಾಗೆ ಮುಖ್ಯ ಮನೆಗೆ ಹೋಗುವ ಆಸೆ, ಆದರೆ ಧ್ರುವಂತ್​​ಗೆ ಸೀಕ್ರೆಟ್ ರೂಂನಿಂದ ನೇರವಾಗಿ ಫಿನಾಲೆಗೆ ಹೋಗುವ ಆಸೆ. ಈ ವೇಳೆ ರಕ್ಷಿತಾ, ಸುದೀಪ್ ಎದುರೇ ಧ್ರುವಂತ್​​ಗೆ ಬೆದರಿಕೆ ಹಾಕಿದರು.

ಸುದೀಪ್ ಎದುರೇ ಧ್ರುವಂತ್​​ಗೆ ಬೆದರಿಕೆ ಹಾಕಿದ ರಕ್ಷಿತಾ ಶೆಟ್ಟಿ
Bigg Boss Kannada

Updated on: Dec 20, 2025 | 10:32 PM

ಮತ್ತೊಂದು ವೀಕೆಂಡ್ ಬಂದಿದೆ. ಸುದೀಪ್ (Sudeep) ಮತ್ತೆ ಬಂದಿದ್ದಾರೆ. ಶನಿವಾರದ ಎಪಿಸೋಡ್​​ನಲ್ಲಿ ಸುದೀಪ್ ಅವರು ಸಾಧ್ಯವಾದಷ್ಟು ಗಂಭೀರವಾಗಿರುತ್ತಾರೆ. ಆದರೆ ಶನಿವಾರದ ಎಪಿಸೋಡ್ ಈ ಹಿಂದಿನ ಶನಿವಾರದ ಎಪಿಸೋಡ್​​ಗಳಿಗಿಂತಲೂ ತುಸು ಭಿನ್ನವಾಗಿತ್ತು. ಸುದೀಪ್ ಅವರು ಆರಂಭದಿಂದ ತುಸು ತಮಾಷೆಯಾಗಿಯೇ ಎಪಿಸೋಡ್​ ಪ್ರಾರಂಭಿಸಿದರು. ಅದರಲ್ಲೂ ಸೀಕ್ರೆಟ್ ರೂಂನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ ಅವರನ್ನು ಮಾತನಾಡಿಸುವಾಗ ಸ್ವತಃ ನಕ್ಕ ಸುದೀಪ್ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನೂ ಸಹ ನಗಿಸಿದರು.

‘ನನಗೆ ಈ ವಾರ ಬಹಳ ಎಂಟರ್ಟೈನ್​​ಮೆಂಟ್ ಆಗಿದ್ದಿದ್ದು ಬಿಗ್​​ಬಾಸ್ ಮನೆಯ ಮೇಯಿನ್ ಮನೆಯವರ ಆಟ ಅಲ್ಲ. ಬದಲಿಗೆ ಸೀಕ್ರೆಟ್ ರೂಂನಲ್ಲಿದ್ದ ನಿಮ್ಮಿಬ್ಬರ ಆಟ. ನಿಮ್ಮಿಬ್ಬರ ಜಗಳ, ನಿಮ್ಮಿಬ್ಬರ ಚರ್ಚೆ, ನಿಮ್ಮಿಬ್ಬರ ಮಾತುಗಳೇ ನನಗೆ ಹೆಚ್ಚು ಖುಷಿ ಕೊಟ್ಟಿತು. ಆ ಮನೆಯಲ್ಲಿ (ಮುಖ್ಯ ಮನೆಯಲ್ಲಿ) ಸ್ಪರ್ಧಿಗಳು ಟಾಸ್ಕ್, ರೂಲ್ಸ್, ಜಗಳ ಎಂದು ತಲೆ ನೋವು ತರಿಸಿದರು’ ಎಂದರು ಸುದೀಪ್.

ಆದರೆ ರಕ್ಷಿತಾ ಮತ್ತು ಧ್ರುವಂತ್ ಅವರು ಪರಸ್ಪರರ ಬಗ್ಗೆ ದೂರುಗಳ ಸರಮಾಲೆಯನ್ನೇ ಸುದೀಪ್ ಎದುರು ಹೇಳಿದರು. ರಕ್ಷಿತಾ ಅಂತು, ಸುದೀಪ್ ಅವರು ಏನನ್ನಾದರೂ ಕೇಳುವ ಮುಂಚೆಯೇ ಸರ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ, ನನಗೆ ಇವರನ್ನು ನೋಡೋಕೆ ಸಹ ಆಗಲ್ಲ. ನಾನು ಅವಾಯ್ಡ್ ಮಾಡುತ್ತೇನೆ ಆದರೂ ಬೇರೆ ಆಪ್ಷನ್ ನನಗೆ ಇಲ್ಲ, ನನ್ನನ್ನು ಇಲ್ಲಿಂದ ಕರೆಸಿಕೊಂಡು ಬಿಡಿ, ನನ್ನನ್ನು ಆ ಮನೆಗೆ ಕಳಿಸಿಕೊಡಿ ಎಂದು ಕೇಳಿಕೊಂಡರು.

ಇದನ್ನೂ ಓದಿ:ಅಪ್ಪನ ಸಿನಿಮಾ ಮೂಲಕ ವಿತರಕಿ ಆದ ಸುದೀಪ್ ಪುತ್ರಿ

ಧ್ರುವಂತ್ ಅವರು ಸಹ ರಕ್ಷಿತಾ ಮೇಲೆ ದೂರು ಹೇಳಿದರು. ಆದರೆ ಧ್ರುವಂತ್ ಅವರು, ತುಸು ಗಾಂಭಿರ್ಯದಿಂದ ದೂರುಗಳನ್ನು ಹೇಳಿದರು. ಆದರೆ ಸುದೀಪ್ ಅವರು ನೀವಿಬ್ಬರು ಚೆನ್ನಾಗಿ ಆಡುತ್ತಿದ್ದೀರ, ಹಾಗಾಗಿ ನಿಮ್ಮನ್ನು ಇನ್ನೂ ಒಂದು ವಾರ ಇಲ್ಲೇ ಇಡೋಣ ಅಂದುಕೊಂಡಿದ್ದೀವಿ, ಇನ್ನೂ ಚೆನ್ನಾಗಿ ಆಡಿದರೆ ಇನ್ನೂ ಒಂದು ವಾರ ಇಲ್ಲೇ ಇರಿಸುತ್ತೀವಿ, ನೀವುಗಳು ನೇರವಾಗಿ ಫಿನಾಲೆಗೆ ಇಲ್ಲಿಂದಲೇ ಹೋಗಬಹುದು ಎಂದರು. ಇದು ಧ್ರುವಂತ್​​ಗೆ ಆಸಕ್ತಿಕರ ಆಯ್ಕೆ ಎನಿಸಿತು, ಆದರೆ ರಕ್ಷಿತಾಗೆ ಇದು ಇಷ್ಟ ಆಗಲಿಲ್ಲ.

ಸುದೀಪ್ ಅವರು ರಕ್ಷಿತಾಗೆ ಅವಕಾಶ ನೀಡಿ, ‘ಆ ಮನೆಗೆ ಹೋಗಲು ನೀವು ಧ್ರುವಂತ್ ಅವರನ್ನು ಒಪ್ಪಿಸಿ ನೋಡೋಣ?’ ಎಂದರು. ಅದರಂತೆ ರಕ್ಷಿತಾ, ಧ್ರುವಂತ್ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದರು. ಆದರೆ ಧ್ರುವಂತ್ ಒಪ್ಪಲಿಲ್ಲ. ಮೂರು-ನಾಲ್ಕು ಬಾರಿ ಪ್ರಯತ್ನ ಮಾಡಿದರೂ ಸಹ ಧ್ರುವಂತ್, ಇಲ್ಲಿಂದ ನೇರವಾಗಿ ಫಿನಾಲೆಗೆ ಹೋಗೋಣ ಆ ಮನೆಗೆ ಹೋಗೋದು ಇಷ್ಟ ಇಲ್ಲ ಎಂದರು. ಎಲ್ಲ ಬುದ್ಧಿವಂತಿಕೆ ಬಳಸಿದ ಬಳಿಕ ಕೊನೆಗೆ ಬೆದರಿಕೆ ಹಾಕಲು ಶುರು ಮಾಡಿದರು ರಕ್ಷಿತಾ, ನೀವು ಇದೇ ಮನೆಯಲ್ಲಿ ಉಳಿಯಬೇಕು ಎಂದರೆ ನಾನು ನಿಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ’ ಎಂದರು. ಇದು ಧ್ರುವಂತ್​​ಗೆ ಶಾಕ್ ತಂದಿತು. ಸುದೀಪ್ ಸಹ ರಕ್ಷಿತಾರ ಮಾತು ಕೇಳಿ ನಕ್ಕರು. ಕೊನೆಗೆ ಧ್ರುವಂತ್ ಮತ್ತು ರಕ್ಷಿತಾ ಇಬ್ಬರನ್ನೂ ಮನೆಯೊಳಗೆ ಕಳಿಸಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ