ನಟ್ಟು ಬೋಲ್ಟು ಟೈಟ್ ಮಾಡಲು ಬಿಗ್ ಬಾಸ್ ಬಂದ್ ಆಯ್ತಾ: ಆರೋಪಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತು ಎಂದು ಡಿಕೆ ಶಿವಕುಮಾರ್​ ಹೇಳಿದ್ದರು. ಈಗ ಬಿಗ್ ಬಾಸ್ ಮನೆ ಬಂದ್ ಆಗಿದ್ದಕ್ಕೆ ಅದೇ ಕಾರಣ ಎಂದು ಜೆಡಿಎಸ್ ಆರೋಪ ಮಾಡಿದೆ. ಅದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಅವರು ಮಾತಾಡಿದ್ದಾರೆ.

ನಟ್ಟು ಬೋಲ್ಟು ಟೈಟ್ ಮಾಡಲು ಬಿಗ್ ಬಾಸ್ ಬಂದ್ ಆಯ್ತಾ: ಆರೋಪಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
Dk Shivakumar

Updated on: Oct 08, 2025 | 4:25 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದಿದೆ. ಈ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಳೇ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುವ ಬಗ್ಗೆ ಡಿಕೆ ಶಿವಕುಮಾರ್ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಈಗ ಕೆಲವರು ನೆನಪಿಸಿಕೊಂಡಿದ್ದಾರೆ. ಜೆಡಿಎಸ್ ಕೂಡ ಇದೇ ಆರೋಪ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ (DK Shivakumar) ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಕುಮಾರಸ್ವಾಮಿ ಮತ್ತು ಜೆಡಿಎಸ್​​ನವರು ಬರೀ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿಯಾದರೂ ಟ್ವೀಟ್ ಮಾಡಲಿ, ಮೇಲಿನವರಾದರೂ ಟ್ವೀಟ್ ಮಾಡಲಿ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ವಿಚಾರಿಸಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಇದನ್ನು ಮಾಡಿದ್ದಾರೆ. ಆದರೂ ಕೂಡ ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉದ್ಯೋಗಾವಕಾಶ ತುಂಬ ಮುಖ್ಯ. ಸಮಸ್ಯೆ ನಿವಾರಣೆಗೆ ಒಂದು ಅವಕಾಶ ನೀಡಲು ಸೂಚಿಸಿದ್ದೇನೆ’ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

‘ನಮ್ಮಲ್ಲಿ ಮನರಂಜನೆ ಆಗಬೇಕು. ನಾನೇ ಅದನ್ನು ಉದ್ಘಾಟನೆ ಮಾಡಿದ್ದು. ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ಜೆಡಿಎಸ್​ ಪಕ್ಷದವರಿಗೆ ನೆಮ್ಮದಿಯೇ ಇಲ್ಲ, ನಿದ್ರೆ ಬರಲ್ಲ. ಅವರಿಗೆ ಯಾವುದಕ್ಕೂ ಶಕ್ತಿ ಬರಲ್ಲ. ನಮ್ಮ ಸರ್ಕಾರದವರು ತಮ್ಮ ಕರ್ತವ್ಯ ಮಾಡಿರುವುದು ನನಗೆ ಗೊತ್ತಿರಲಿಲ್ಲ. ಫೋನ್ ಮಾಡಿ ಡಿಸಿ ಮತ್ತು ಎಸ್​​ಪಿ ಅವರಿಗೆ ಹೇಳಿದ್ದೇನೆ. ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು ಅಂತ ಹೇಳಿದ್ದೇನೆ’ ಎಂದಿದ್ದಾರೆ ಡಿಕೆ ಶಿವಕುಮಾರ್.

‘ಟಿವಿಯಲ್ಲಿ ನೋಡಿದ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಫೋನ್ ಮಾಡಿದ್ದೇನೆ. ಬಿಗ್ ಬಾಸ್ ಮುಂತಾದ ಮನರಂಜನೆ ಇರಬೇಕು. ಖಾಸಗಿಯವರು ಬಂಡವಾಳ ಹೂಡಿಕೆ ಮಾಡಿರುತ್ತಾರೆ. ತಪ್ಪು ಆಗಿರಬಹುದು, ಆದರೆ ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು ಅಂತ ಸಲನೆ ನೀಡಿದ್ದೇನೆ’ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ಖಾಲಿ ಮಾಡಿಸಲು ಬಂದ ಅಧಿಕಾರಿಗಳನ್ನು ಕಂಡು ಸ್ಪರ್ಧಿಗಳಿಗೆ ಶಾಕ್

ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋದವರು ಡಿಸಿ ಬಳಿ ಸಮಯಾವಕಾಶ ಕೋರಿದ್ದಾರೆ. ಆ ಮನವಿಯನ್ನು ಜಿಲ್ಲಾಡಳಿತವು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳಿಸಿದೆ. ಒಂದು ವೇಳೆ ಅನುಮತಿ ಸಿಕ್ಕರೆ ಕೂಡಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆರಂಭ ಆಗಲಿದೆ. ಅನುಮತಿ ಸಿಗುವುದು ತಡವಾದರೆ ಇನ್ನಷ್ಟು ದಿನಗಳ ಕಾಲ ಕಾಯುವುದು ಅನಿವಾರ್ಯ ಆಗುತ್ತದೆ. ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳನ್ನು ರೆಸಾರ್ಟ್​​ನಲ್ಲಿ ಇರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:23 pm, Wed, 8 October 25