
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಮೊದಲ ಎಪಿಸೋಡ್ ಪ್ರಸಾರ ಆಗಿದೆ. ಮೊದಲ ದಿನವೇ ಜಗಳ ಉಂಟಾಗಿದೆ. ಕಾಮನರ್ ಮತ್ತು ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಅಗ್ನಿ ಪರೀಕ್ಷೆ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ಕಿರಣ್ ಶಾಸ್ತ್ರಿ ಮತ್ತು ಮಂಜ ನಡುವೆ ಕಿರಿಕ್ ಶುರುವಾಗಿದೆ. ಇಬ್ಬರ ಮಾತು ಜಾಸ್ತಿ ಆಗಿದೆ. ಮಾತಿನ ಭರದಲ್ಲಿ ಮೊದಲ ದಿನವೇ ಕಿರಣ್ ಶಾಸ್ತ್ರಿ ಅವರು ಕಚಡ, ಹಂದಿ ಎಂಬಿತ್ಯಾದಿ ಪದಗಳನ್ನು ಬಳಸಿದ್ದಾರೆ.
ಮಂಜ ಮತ್ತು ಕಿರಣ್ ಶಾಸ್ತ್ರಿ ಅವರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಮಂಜ ಆಡಿದ ಮಾತುಗಳಿಂದ ಕಿರಣ್ ಕೆರಳಿದ್ದಾರೆ. ಮಂಜಗೆ ಹಂದಿ, ಕಚಡ ಎಂದು ಕಿರಣ್ ಬೈಯ್ದಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲ ದಿನವೇ ಇಷ್ಟು ಜಗಳ ಆಗುತ್ತದೆ ಎಂದು ಇನ್ನುಳಿದ ಸ್ಪರ್ಧಿಗಳು ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಜಗಳ ಇನ್ನಷ್ಟು ಹೆಚ್ಚಲಿದೆ.
ಜಗಳ ಆಡುವ ಭರದಲ್ಲಿ ಕಚಡ, ಹಂದಿ ಎಂಬಿತ್ಯಾದಿ ಪದಗಳನ್ನು ಬಳಸಿದ ಕಿರಣ್ ಶಾಸ್ತ್ರಿ ಅವರು ಬಳಿಕ ತಾವೇ ಕಣ್ಣೀರು ಹಾಕಲು ಶುರು ಮಾಡಿದ್ದಾರೆ. ಮಂಜ ಆಡಿದ ಮಾತುಗಳಿಂದ ತಮಗೆ ನೋವಾಗಿದೆ ಎಂದು ಅತ್ತರು. ಅವರನ್ನು ಇನ್ನುಳಿದ ಸ್ಪರ್ಧಿಗಳು ಸಮಾಧಾನ ಮಾಡಲು ಪ್ರಯತ್ನಿಸಿದರು. ಮಂಜ ಮಾತನಾಡುತ್ತಿರುವ ರೀತಿ ಕೂಡ ಹಲವರಿಗೆ ಇಷ್ಟ ಆಗುತ್ತಿಲ್ಲ.
ಈ ಬಾರಿ ವಿಮಾನಯಾನದ ಥೀಮ್ನಲ್ಲಿ ‘ಬಿಗ್ ಬಾಸ್ ಕನ್ನಡ’ ಶೋ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳು ಇನ್ನೂ ಪೂರ್ತಿಯಾಗಿ ಮನೆಯನ್ನು ಎಂಜಾಯ್ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಸಮಯವನ್ನು ವಿಮಾನದ ಸೆಟ್ ಒಳಗೆ ಕಳೆಯುವಂತಾಗಿದೆ. ಅಲ್ಲಿಯೇ ಸ್ಪರ್ಧಿಗಳಿಗೆ ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೂ ಮುನ್ನವೇ ಜಗಳ ಶುರು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ವಿರುದ್ಧವೇ ಅಸಮಾಧಾನ ಹೊರಹಾಕಿದ ಸ್ಪರ್ಧಿಗಳು
ಮಂಜ, ಕಿರಣ್ ಶಾಸ್ತ್ರಿ, ಕಾವ್ಯಾ, ಸಂಗೀತಾ ಭಟ್, ಅವಿನಾಶ್, ಲಿಖಿತ್, ಧನುಷ್, ಓಂ ಪ್ರಕಾಶ್ ರಾವ್, ಸೌಂದರ್ಯಾ ಶೆಟ್ಟಿ, ಜಗ್ಗ ಮಮ್ಮಿ, ಪ್ರಥಮಾ ಪ್ರಸಾದ್, ಗಗನ ಚಿನ್ನಪ್ಪ, ಆಸಿಯಾ, ತಾಂಡವ್ ರಾಮ್, ವೈಷ್ಣವಿ, ಯಶಸ್ ಕೃಷ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.