
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾತ್ರವಲ್ಲದೇ ಸ್ಪರ್ಧಿಗಳ ನಡವಳಿಕೆ ಹಾಗೂ ಮಾತು ಕೂಡ ಬಹಳ ಮುಖ್ಯ ಆಗುತ್ತದೆ. ಕೆಲವು ಸ್ಪರ್ಧಿಗಳು ಮಾತನಾಡುತ್ತಿರುವ ರೀತಿಯ ಬಗ್ಗೆ ದೊಡ್ಮನೆಯಲ್ಲಿ ಅಸಮಾಧಾನ ಶುರುವಾಗಿದೆ. ಕಾಮನರ್ ಆಗಿ ಬಂದಿರುವ ಕಿರಣ್ ಶಾಸ್ತ್ರಿ ಅವರು ಆಡುತ್ತಿರುವ ಮಾತುಗಳಿಂದ ವೈಷ್ಣವಿ, ಪ್ರಥಮಾ ಪ್ರಸಾದ್, ಅವಿನಾಶ್ ಮುಂತಾದ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ. ಆದ್ದರಿಂದ ಸರಿಯಾಗಿ ಮಾತನಾಡಿ ಎಂದು ಅವರಿಗೆ ಎಚ್ಚರಿಕೆ ನೀಡಲಾಗಿದೆ.
ಕಿರಣ್ ಶಾಸ್ತ್ರಿ ಇನ್ನೂ ಪೂರ್ತಿಯಾಗಿ ಬಿಗ್ ಬಾಸ್ ಮನೆಯ ಒಳಗೆ ಕಾಲಿಡುವ ಅರ್ಹತೆ ಪಡೆದಿಲ್ಲ. ವಿಮಾನಯಾನದಲ್ಲೇ ಅವರು ಉಳಿದುಕೊಂಡಿದ್ದಾರೆ. ಅವರ ಜೊತೆ ಪ್ರಥಮಾ ಪ್ರಸಾದ್, ಸೌಂದರ್ಯಾ ಶೆಟ್ಟಿ, ಅವಿನಾಶ್, ಧನುಷ್, ಲಿಖಿತ್ ಮುಂತಾದವರು ಕೂಡ ಇದ್ದಾರೆ. ಬುಧವಾರದ (ಸೆಪ್ಟೆಂಬರ್ 9) ಸಂಚಿಕೆಯಲ್ಲಿ ಮಾತಿನ ಚಕಮಕಿ ಉಂಟಾಗಿದೆ.
ಊಟ ಮಾಡುವ ಸಂದರ್ಭದಲ್ಲಿ ಕಿರಣ್ ಶಾಸ್ತ್ರಿಗೆ ಬುದ್ಧಿಮಾತು ಹೇಳಿದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳಲು ಕಿರಣ್ ರೆಡಿ ಇರಲಿಲ್ಲ. ಆಗ ಅವರು ಊಟ ಮಾಡುತ್ತಿದ್ದರು. ‘ಅನ್ನ ತಿನ್ನುವಾಗಲಾದ್ರೂ ನಿಮ್ಮ ಬಾಯಲ್ಲಿ ಒಳ್ಳೆಯ ಮಾತು ಬರಲಿ’ ಎಂದು ಕಿರಣ್ ಶಾಸ್ತ್ರಿಗೆ ಪ್ರಥಮಾ ಅವರು ಖಡಕ್ ಆಗಿ ಹೇಳಿದರು. ಆದರೂ ಕೂಡ ಏನೂ ಉಪಯೋಗ ಆಗಲಿಲ್ಲ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭ ಆದ ಮೊದಲ ದಿನವೇ ಪ್ರಥಮಾ ಪ್ರಸಾದ್ ಮತ್ತು ಕಿರಣ್ ಶಾಸ್ತ್ರಿ ಅವರ ನಡುವೆ ಕಿರಿಕ್ ಆಗಿತ್ತು. ದೊಡ್ಮನೆಗೆ ಕಾಲಿಡುತ್ತಿದ್ದಂತೆಯೇ ಪ್ರಥಮಾ ಅವರನ್ನು ಆಂಟಿ ಎಂದು ಕರೆಯುವ ಮೂಲಕ ಕಿರಣ್ ಅವರು ಹದ್ದು ಮೀರಿದ್ದರು. ಆ ರೀತಿ ಕರೆದಿದ್ದನ್ನು ಪ್ರಥಮಾ ಪ್ರಸಾದ್ ಅವರು ಕೂಡಲೇ ಖಂಡಿಸಿದ್ದರು.
ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್
ಈಗ ಕಿರಣ್ ಅವರು ಪ್ರಥಮಾ ಪ್ರಸಾದ್ ಅವರನ್ನು ಅಮ್ಮ ಎಂದು ಕರೆಯಲು ಶುರು ಮಾಡಿದ್ದಾರೆ. ‘ಆ ರೀತಿ ಕೂಡ ಕರೆಯಬೇಡಿ. ಪ್ರಥಮಾ ಮೇಡಂ ಅಥವಾ ಪ್ರಥಮಾ ಅಕ್ಕ ಅಂತ ಕರೆಯಿರಿ’ ಎಂದು ಪ್ರಥಮಾ ಅವರು ಸೂಚನೆ ನೀಡಿದ್ದಾರೆ. ಆದರೆ ಅದನ್ನು ಕಿರಣ್ ಒಪ್ಪಿಕೊಂಡಿಲ್ಲ. ಬೇಕಂತಲೇ ಅಮ್ಮ ಎಂದು ಕರೆಯುವುದನ್ನು ಮುಂದುವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.