ಆನೆ ಅಂದುಕೊಂಡು ಮೆರೆಯುತ್ತಿದ್ದ ವಿನಯ್​ ಮದವಿಳಿಸಿದ ‘ಹೆಬ್ಬುಲಿ’ ಕಿಚ್ಚ

| Updated By: Digi Tech Desk

Updated on: Nov 07, 2023 | 2:35 PM

Kichcha Sudeep: ಈ ವಾರ ಬಿಗ್​ಬಾಸ್ ಮನೆಯಲ್ಲಿ ವಿನಯ್ ಆಡಿತ ಮಾತುಗಳು ಅವರು ತೋರಿದ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಿಗ್​ಬಾಸ್ ಮನೆಯ ಆನೆ ಎಂದು ಮೆರೆಯುತ್ತಿದ್ದ ವಿನಯ್​ರ ಮದವನ್ನು 'ಹೆಬ್ಬುಲಿ' ಸುದೀಪ್ ಇಳಿಸಿದ್ದಾರೆ.

ಆನೆ ಅಂದುಕೊಂಡು ಮೆರೆಯುತ್ತಿದ್ದ ವಿನಯ್​ ಮದವಿಳಿಸಿದ ಹೆಬ್ಬುಲಿ ಕಿಚ್ಚ
ಸುದೀಪ್-ವಿನಯ್
Follow us on

ಬಿಗ್​ಬಾಸ್ (Bigg Boss) ಮನೆಯಲ್ಲಿ ಈ ವಾರ ನಡೆದ ಕೆಲವು ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದಾದವು. ಅದರಲ್ಲಿಯೂ ವಿನಯ್, ಮಹಿಳೆಯರನ್ನು ಅವಹೇಳನಕಾರಿಯಾಗಿ ಮಾತನಾಡಿಸಿದ್ದು, ಕಾರ್ತಿಕ್ ಅನ್ನು ಅಪಮಾನಿಸುವ ಭರದಲ್ಲಿ ಬಳೆಗಳ ರಾಜ ಎಂದಿದ್ದು, ಬಳೆ ಹಾಕಿಕೊಂಡು ಬಾ ಎಂದೆಲ್ಲ ಕರೆದಿದ್ದು ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೆಲ್ಲದರ ಅರಿವಿಲ್ಲದೆ ಬಿಗ್​ಬಾಸ್ ಮನೆಯಲ್ಲಿ ವಿನಯ್ ಕ್ಯಾಪ್ಟನ್ ಆಗಿ ತಮ್ಮ ಅಬ್ಬರ ಮುಂದುವರೆಸಿದ್ದರು. ವಿನಯ್ ವರ್ತನೆ ಹಾಗೂ ಮಾತುಗಳ ಬಗ್ಗೆ ಅಸಮಾಧಾನಗೊಂಡಿದ್ದ ಜನ ಶನಿವಾರದ ಎಪಿಸೊಡ್​ನ ಮೇಲೆ ನಿರೀಕ್ಷೆ ಇಟ್ಟಿದ್ದರು. ಬಿಗ್​ಬಾಸ್ ಮನೆಯ ಆನೆ ತಾನು ಎಂದುಕೊಂಡು ಮೆರೆಯುತ್ತಿದ್ದ ವಿನಯ್​ನ ಮದವನ್ನು ‘ಹೆಬ್ಬುಲಿ’ ಕಿಚ್ಚ ಸುದೀಪ್ ಸರಿಯಾಗಿಯೇ ಇಳಿಸಿದರು.

ಎಪಿಸೋಡ್​ನ ಆರಂಭದಲ್ಲಿ ಸುದೀಪ್, ವಿನಯ್​ ಅವರನ್ನು ಮಾತನಾಡಿಸಲೇ ಇಲ್ಲ, ಬದಲಿಗೆ ಟಾಸ್ಕ್​ನ ವೇಳೆಯಲ್ಲಿ ಯಾರ್ಯಾರು ಹೇಗೆ ಹೇಗೆ ಮಾತನಾಡಿದರು, ಮನೆಯಲ್ಲಿ ನಿರ್ಮಾಣಗೊಂಡಿರುವ ‘ಗ್ಯಾಂಗ್’ ಕಲ್ಚರ್​ಗಳ ಬಗ್ಗೆ ಮಾತನಾಡಿದರು. ಆದರೆ ಸುದೀಪ್​ ಆಡಿದ ಮಾತುಗಳೆಲ್ಲವೂ ಕೊನೆಯಲ್ಲಿ ಬಳೆಯ ಸನ್ನಿವೇಶದೊಂದಿಗೆ ಲಿಂಕ್ ಆಗುತ್ತಿದ್ದವು.

ವಿನಯ್, ಕಾರ್ತಿಕ್ ಅನ್ನು ಬಳೆಗಳ ರಾಜ ಎಂದಾಗ ನಗುತ್ತಾ ಎಂಜಾಯ್ ಮಾಡಿದ ನಮ್ರತಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್, ನಮ್ರತಾ ತಮ್ಮ ಚಮಚ ವ್ಯಕ್ತಿತ್ವದಿಂದ ಇನ್ನೂ ಹೊರಗೆ ಬಂದಿಲ್ಲ ಎಂಬುದನ್ನು ಉದಾಹರಣೆಯೊಂದಿಗೆ ನೆನಪು ಮಾಡಿದರು. ಅದಾದ ಬಳಿಕ ವಿನಯ್​ ಕಡೆಗೆ ಮಾತು ಹೊರಳಿಸಿದ ಸುದೀಪ್, ‘ಬಳೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಹೇಳಿ’ ಎಂದರು. ವಿನಯ್ ತಾವು ಆ ಮಹಿಳೆ ವೀಕ್ ಎಂಬ ಅರ್ಥದಲ್ಲಿ ಆ ಮಾತು ಆಡಲಿಲ್ಲ ಎಂದರು ಆದರೂ ಬಿಡದ ವಿನಯ್, ಯಾವಾಗಲೂ ಹೆಣ್ಣೆ ಟಾರ್ಗೆಟ್ ಏಕೆ? ಕಾರ್ತಿಕ್, ಸಂಗೀತಾ ಹಾಗೂ ತನಿಷಾ ಜೊತೆಗಿದ್ದರೆಂದು ಬಳೆಗಳ ರಾಜ ಎಂದಿರಿ, ಸಂಗೀತಾ, ತನಿಷಾರನ್ನು ಮೀಸೆ ರಾಣಿ ಎನ್ನಲಿಲ್ಲ ಏಕೆ ಎಂದು ಸುದೀಪ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಡವ್ ರಾಣಿ ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು

ಸುದೀಪ್​ರ ಪ್ರಶ್ನೆಗಳ ಬಾಣದಿಂದ ಕಂಗಾಲಾದ ವಿನಯ್, ಗೊಂದಲದಲ್ಲಿ ಏನೇನೋ ಹೇಳಲು ಮುಂದಾದರು, ಆದರೆ ವಿನಯ್ ಆಡಿದ ಪ್ರತಿ ಮಾತಿಗೂ ತಮ್ಮ ಮಾತಿನಿಂದ ಚೆಕ್ ಇಟ್ಟ ಸುದೀಪ್, ನಿಮ್ಮ ವ್ಯಕ್ತಿತ್ವದಲ್ಲಿಯೇ ತಪ್ಪಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿದರು. ವಿನಯ್ ಸಹ ಕೊನೆಗೆ ನಾನು ಹಾಗೆ ಮಾತನಾಡಬಾರದಿತ್ತು ಎಂದು ಒಪ್ಪಿಕೊಂಡರು. ಕರ್ನಾಟಕದ ಜನತೆಯ ಬಳಿ ಕ್ಷಮೆ ಕೇಳಿದರು.

ಅಷ್ಟಕ್ಕೆ ಸುದೀಪ್ ಸುಮ್ಮನಾಗಲಿಲ್ಲ, ವಿನಯ್ ಭಾಗ್ಯಶ್ರೀ ವಿಷಯದಲ್ಲಿ ಆಡಿದ್ದ ಮಾತುಗಳ ವಿಚಾರವನ್ನು ತೆಗೆದರು. ಭಾಗ್ಯಶ್ರೀ, ಸ್ನೇಹಿತ್​ ಅನ್ನು ನಾಮಿನೇಟ್ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ವಿನಯ್ ಹಾಗೂ ತುಕಾಲಿ. ಆ ವಿಷಯವಾಗಿ ಇಬ್ಬರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡರು ಸುದೀಪ್. ಅದರಲ್ಲಿಯೂ ಭಾಗ್ಯಶ್ರೀ ಕಣ್ಣೀರು ಹಾಕಿದಾಗ ಡ್ರಾಮಾ, ಸೀರಿಯಲ್ ಎಂದೆಲ್ಲ ಅಹಂಕಾರದಿಂದ ಮಾತನಾಡಿದ್ದ ವಿನಯ್​ಗೆ ಪರೋಕ್ಷವಾಗಿ ಕಪಾಳಮೋಕ್ಷ ಮಾಡಿದರು. ತುಕಾಲಿಯಂತೂ ತಲೆ ಎತ್ತಿ ನೋಡಲಾಗದಂತೆ ಅವರ ತಪ್ಪುಗಳನ್ನು ಎತ್ತಿ ತೋರಿಸಿಬಿಟ್ಟರು. ಕೊನೆಗೆ ವಿನಯ್, ಆ ವಿಷಯದಲ್ಲಿಯೂ ತಮ್ಮ ತಪ್ಪು ಒಪ್ಪಿಕೊಂಡು ತಾವು ಜೋಕರ್ ಎಂದು ಸ್ವತಃ ತಾವೇ ಹೇಳಿದರು.

ಸಂಗೀತಾಗೆ ಕಳಪೆ ಕೊಟ್ಟ ವಿಧಾನದ ಬಗ್ಗೆಯೂ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆ ವಿಷಯದಲ್ಲಿಯೂ ವಿನಯ್ ಅನ್ನು ಉದ್ದೇಶಿಸಿಯೇ ಕೆಲವು ಕಟುವಾದ ಮಾತುಗಳನ್ನು ಸುದೀಪ್, ಜಾಣತನದಿಂದ ಆಡಿದರು. ಗುಂಪುಗೂಡಿಕೊಂಡು ಇಂಥಹವರಿಗೇ ಕಳಪೆ ಎಂದು ಕೊಡುವುದು ಅಕ್ಷಮ್ಯ ಎಂದ ಸುದೀಪ್, ಅದು ನಿಮ್ಮ ವ್ಯಕ್ತಿತ್ವಗಳನ್ನು ತೋರಿಸುತ್ತದೆ ಎಂದರು. ವಿನಯ್ ಮಾತ್ರವೇ ಅಲ್ಲದೆ, ಅವರಿಗೆ ಸಾಥ್ ನೀಡುತ್ತಾ ಬರುತ್ತಿದ್ದ ನಮ್ರತಾ, ಸ್ನೇಹಿತ್, ತುಕಾಲಿ ಸಂತುಗೆ ಸಹ ಸರಿಯಾಗಿ ಕ್ಲಾಸ್ ತೆಗೆದುಕೊಂಡರು ಸುದೀಪ್. ತುಕಾಲಿ ಅಂತು ಕೆಳಗಿಳಿಸಿದ ತಲೆಯನ್ನು ಮೇಲೆತ್ತದಂತೆ ಮಾಡಿಬಿಟ್ಟರು ಸುದೀಪ್. ಕೊನೆಗೆ ಅವರೇ ತುಕಾಲಿಗೆ ಸಮಾಧಾನ ಮಾಡಬೇಕಾಗಿ ಬಂತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 pm, Sat, 4 November 23