
ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ (Serial) ನಟಿಸಿ ಖ್ಯಾತಿ ಪಡೆದಿದ್ದ ನಂದಿನಿ ಸಿಎಂ (Nandini CM) ಅವರು ನಿಧನರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಅವರು ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಆರ್ಆರ್ ನಗರದಲ್ಲಿ ನಂದಿನಿ ಅವರು ಸಾವಿಗೆ ಶರಣಾಗಿದ್ದಾರೆ. ಅವರ ಸಾವಿಗೆ (Nandini CM Death) ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ಅವರು ಈ ರೀತಿ ದುರಂತ ಅಂತ್ಯ ಕಂಡಿರುವುದು ನೋವಿನ ಸಂಗತಿ.
ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಧಾರಾವಾಹಿಗಳಲ್ಲಿ ನಂದಿನಿ ಅವರು ನಟಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ನಂದಿನಿ ಅವರು ನಾಯಕಿಯ ಪಾತ್ರ ಮಾಡುತ್ತಿದ್ದರು. ದುರ್ಗಾ ಮತ್ತು ಕನಕ ಎಂಬ ಪಾತ್ರಗಳ ಮೂಲಕ ಅವರು ವೀಕ್ಷಕರಿಗೆ ಪರಿಚಿತರಾಗಿದ್ದರು. ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಶೋಕ ಆವರಿಸಿದೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ
ನಂದಿನಿ ಅವರು ಮೂಲತಃ ಕೊಟ್ಟೂರಿನವರು. ಆದರೆ ಬೆಂಗಳೂರಿನಲ್ಲಿ ವಾಸವಿದ್ದರು. ಪಿಜಿಯಲ್ಲಿ ವಾಸವಿದ್ದ ಅವರು ತಾಯಿಗೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ನಂದಿನಿ ನಿಧನದ ಸುದ್ದಿ ಕೇಳಿ ‘ಗೌರಿ’ ಧಾರಾವಾಹಿ ತಂಡಕ್ಕೆ ಆಘಾತ ಎದುರಾಗಿದೆ. ವೀಕ್ಷಕರು ಹಾಗೂ ಆಪ್ತರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
‘ಗೌರಿ’ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುವ ಅವಕಾಶವನ್ನು ನಂದಿನಿ ಅವರು ಪಡೆದಿದ್ದರು. ಅವರ ನಟನೆಗೆ ವೀಕ್ಷಕರಿಗೆ ಮೆಚ್ಚುಗೆ ಸಿಕ್ಕಿತ್ತು. ಕಿರುತೆರೆ ಲೋಕದಲ್ಲಿ ಹೊಸ ಹೊಸ ಅವಕಾಶಗಳು ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿತ್ತು. ಈ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Mon, 29 December 25