‘ಲಕ್ಷಣ’ ಧಾರಾವಾಹಿಗೆ ಡಬಲ್​ ಸಂಭ್ರಮ; ನಟ ಗಣೇಶ್​ಗೆ ಧನ್ಯವಾದ ತಿಳಿಸಿದ ಜಗನ್​

| Updated By: ಮದನ್​ ಕುಮಾರ್​

Updated on: Oct 24, 2021 | 1:51 PM

ಕಿರುತೆರೆಯ ಜೊತೆಗೆ ಗಣೇಶ್ ಅವರು ಮೊದಲಿನಿಂದಲೂ ನಂಟು ಇಟ್ಟುಕೊಂಡಿದ್ದಾರೆ. ಅವರು ಬಂದಿದ್ದು ಕೂಡ ಕಿರುತೆರೆಯಿಂದಲೇ. ಹಾಗಾಗಿ ಅವರಿಗೆ ಟಿವಿ ಕಾರ್ಯಕ್ರಮ ಮತ್ತು ಅಲ್ಲಿ ಕೆಲಸ ಮಾಡುವ ಕಲಾವಿದರ ಬಗ್ಗೆ ವಿಶೇಷ ಪ್ರೀತಿ.

‘ಲಕ್ಷಣ’ ಧಾರಾವಾಹಿಗೆ ಡಬಲ್​ ಸಂಭ್ರಮ; ನಟ ಗಣೇಶ್​ಗೆ ಧನ್ಯವಾದ ತಿಳಿಸಿದ ಜಗನ್​
ಗಣೇಶ್​, ಜಗನ್​, ವಿಜಯಲಕ್ಷ್ಮೀ
Follow us on

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಲಕ್ಷಣ’ ಧಾರಾವಾಹಿ ಜನಮನ ಗೆಲ್ಲುತ್ತಿದೆ. ವಿಶೇಷ ಕಥಾಹಂದರ ಹೊಂದಿರುವ ಈ ಸೀರಿಯಲ್​ನಲ್ಲಿ ಜಗನ್​ ಮತ್ತು ವಿಜಯಲಕ್ಷ್ಮೀ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕಪ್ಪು ಮೈಬಣ್ಣ ಹೊಂದಿರುವ ಹುಡುಗಿ ಪಾತ್ರದಲ್ಲಿ ವಿಜಯಲಕ್ಷ್ಮೀ ಕಾಣಿಸಿಕೊಂಡಿದ್ದಾರೆ. ಆಕೆಯ ಕನಸುಗಳ ಪಯಣವೇ ‘ಲಕ್ಷಣ’ ಧಾರಾವಾಹಿಯ ಕಥಾಹಂದರ. ಈಗ ಈ ಸೀರಿಯಲ್​ ತಂಡಕ್ಕೆ ಡಬಲ್​ ಸಂಭ್ರಮ. ಮೊದಲ ಖುಷಿಗೆ ಕಾರಣ ಏನೆಂದರೆ, ಇತ್ತೀಚೆಗೆ ಶುರುವಾದ ಈ ಧಾರಾವಾಹಿ ಯಶಸ್ವಿಯಾಗಿ 50 ಎಪಿಸೋಡ್​ಗಳನ್ನು ಪೂರೈಸಿದೆ. ‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ‘ಲಕ್ಷಣ’ ಸೀರಿಯಲ್​ ಸೆಟ್​ಗೆ ಭೇಟಿ ನೀಡಿರುವುದು ಎರಡನೇ ಖುಷಿ.

ಕಿರುತೆರೆಯ ಜೊತೆಗೆ ಗಣೇಶ್ ಅವರು ಮೊದಲಿನಿಂದಲೂ ನಂಟು ಇಟ್ಟುಕೊಂಡಿದ್ದಾರೆ. ಅವರು ಬಂದಿದ್ದು ಕೂಡ ಕಿರುತೆರೆಯಿಂದಲೇ. ಹಾಗಾಗಿ ಅವರಿಗೆ ಟಿವಿ ಕಾರ್ಯಕ್ರಮ ಮತ್ತು ಅಲ್ಲಿ ಕೆಲಸ ಮಾಡುವ ಕಲಾವಿದರ ಬಗ್ಗೆ ವಿಶೇಷ ಪ್ರೀತಿ. ಇತ್ತೀಚೆಗೆ ಅವರು ‘ಲಕ್ಷಣ’ ಧಾರಾವಾಹಿಯ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ್ದರು. ಅದು ಇಡೀ ತಂಡಕ್ಕೆ ಖುಷಿ ನೀಡಿದೆ. ಈ ರೀತಿ ಪ್ರೋತ್ಸಾಹ ನೀಡಿದ ಗಣೇಶ್​ಗೆ ನಟ ಜಗನ್​ ಧನ್ಯವಾದ ತಿಳಿಸಿದ್ದಾರೆ.

‘ಅಚ್ಚರಿಯ ಭೇಟಿ ನೀಡಿದ ಗಣೇಶ್​ ಅವರಿಗೆ ಧನ್ಯವಾದಗಳು. ನಮ್ಮ ಸೆಟ್​ನಲ್ಲಿ ನೀವು ಸಮಯ ಕಳೆದಿದ್ದು ಸಂತಸ ತಂದಿದೆ’ ಎಂಬ ಕ್ಯಾಪ್ಷನ್​ ಜೊತೆಗೆ ಗ್ರೂಪ್​​ ಫೋಟೋವನ್ನು ಜಗನ್​ ಹಂಚಿಕೊಂಡಿದ್ದಾರೆ. ಕೋಲಾರ ಮೂಲದ ನಟಿ ವಿಜಯಲಕ್ಷ್ಮೀ ಅವರಿಗೆ ಇದು ಮೊದಲ ಸೀರಿಯಲ್​. ಚೊಚ್ಚಲ ಪ್ರಯತ್ನದಲ್ಲೇ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಗಣೇಶ್​ ರೀತಿಯ ಸ್ಟಾರ್​ ಕಲಾವಿದರ ಬೆಂಬಲದಿಂದ ಇಡೀ ಧಾರಾವಾಹಿ ತಂಡಕ್ಕೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗಿದೆ.

50 ಎಪಿಸೋಡ್​ಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ‘ಲಕ್ಷಣ’ ತಂಡಕ್ಕೆ ಸ್ನೇಹಿತರು ಮತ್ತು ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಆ.9ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತು. ‘ಸೀತಾ ವಲ್ಲಭ’ ಬಳಿಕ ಜಗನ್​ ನಟಿಸುತ್ತಿರುವ ಸೀರಿಯಲ್​ ಇದಾಗಿದೆ. ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸುತ್ತಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರ ಆಗುತ್ತಿದೆ. ಗಾಯಕಿ ಅರ್ಚನಾ ಉಡುಪ ಕೂಡ ಇದರಲ್ಲೊಂದು ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಸಖತ್​ ಆಗಿದೆ ‘ಸಖತ್’ ಟೀಸರ್​; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್​, ಸಿಂಪಲ್​ ಸುನಿ

ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​