ಅಶ್ವಿನಿ ಗೌಡ ವಿರುದ್ಧ ಗೆದ್ದರೂ ಗಳಗಳನೆ ಅತ್ತ ಜಾಹ್ನವಿ: ವಿಚಿತ್ರ ವರ್ತನೆ ಎಂದ ಸ್ಪರ್ಧಿಗಳು

ಈ ಮೊದಲು ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವೆ ಭಾರಿ ಸ್ನೇಹ ಇತ್ತು. ಈಗ ಬಿರುಕು ಮೂಡಿದೆ. ಸ್ನೇಹ ಅಂತ್ಯ ಆದರೂ ಕೂಡ ಅಶ್ವಿನಿ ಗೌಡ ಗಟ್ಟಿಯಾಗಿದ್ದಾರೆ. ಆದರೆ ಜಾಹ್ನವಿ ಅಳಲು ಆರಂಭಿಸಿದ್ದಾರೆ. ಅಶ್ವಿನಿ ಗೌಡ ವಿರುದ್ಧ ಆಟದಲ್ಲಿ ಗೆದ್ದರೂ ಕೂಡ ಜಾಹ್ನವಿ ಅವರು ಸಖತ್ ಕಣ್ಣೀರು ಹಾಕಿದ್ದಾರೆ.

ಅಶ್ವಿನಿ ಗೌಡ ವಿರುದ್ಧ ಗೆದ್ದರೂ ಗಳಗಳನೆ ಅತ್ತ ಜಾಹ್ನವಿ: ವಿಚಿತ್ರ ವರ್ತನೆ ಎಂದ ಸ್ಪರ್ಧಿಗಳು
ಜಾನ್ವಿ-ಅಶ್ವಿನಿ

Updated on: Oct 28, 2025 | 10:51 PM

ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳಲು ಒಂದು ಅವಕಾಶ ನೀಡಲಾಗಿತ್ತು. ಅಶ್ವಿನಿ ಗೌಡ (Ashwini Gowda) ಮತ್ತು ಜಾಹ್ನವಿ ಅವರು ಮುಖಾಮುಖಿ ಆಗಿ ಚರ್ಚಾಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇಬ್ಬರಲ್ಲಿ ಯಾರು ಸೋಲುತ್ತಾರೋ ಅವರನ್ನು ನಾಮಿನೇಟ್ ಮಾಡುವ ಅಧಿಕಾರ ಕ್ಯಾಪ್ಟನ್ ರಘು ಅವರಿಗೆ ನೀಡಲಾಯಿತು. ಜಾಹ್ನವಿ ಗೆದ್ದಿದ್ದಾರೆ, ಅಶ್ವಿನಿ ಗೌಡ ಸೋತಿದ್ದಾರೆ ಎಂದು ರಘು ಘೋಷಿಸಿದರು. ಆ ಕ್ಷಣದಲ್ಲಿ ಖುಷಿಪಡುವ ಬದಲು ಜಾಹ್ನವಿ (Jahnavi) ಅವರು ಗಳಗಳನೆ ಅಳಲು ಆರಂಭಿಸಿದರು. ಅವರ ವರ್ತನೆ ಕಂಡು ಇನ್ನುಳಿದ ಸ್ಪರ್ಧಿಗಳಿಗೆ ವಿಚಿತ್ರ ಎನಿಸಿತು.

ಅಷ್ಟಕ್ಕೂ ಜಾಹ್ನವಿ ಅವರು ಆ ರೀತಿ ಮಾಡಿದ್ದಕ್ಕೆ ಒಂದು ಕಾರಣ ಕೂಡ ಇತ್ತು. ಸೋತು ನಾಮಿನೇಟ್ ಆದ ಸ್ಪರ್ಧಿಗಳ ಮನೆಯವರಿಗೆ ಕ್ಯಾಪ್ಟನ್ ರಘು ಕಾಲ್ ಮಾಡುತ್ತಾರೆ. ಈ ಸುತ್ತಿನಲ್ಲಿ ಸೋತ ಅಶ್ವಿನಿ ಗೌಡ ಅವರ ಮನೆಯವರಿಗೆ ರಘು ದೂರವಾಣಿ ಕರೆ ಮಾಡಿದರು. ಮನೆಯವರ ಧ್ವನಿ ಕೇಳುವ ಅವಕಾಶ ಅಶ್ವಿನಿಗೆ ಸಿಕ್ಕಿತು. ತಮಗೆ ಈ ಚಾನ್ಸ್ ಮಿಸ್ ಆಯಿತಲ್ಲ ಎಂದು ಜಾಹ್ನವಿ ಅವರು ಬಿಕ್ಕಿ ಬಿಕ್ಕಿ ಅತ್ತರು!

ನಾಮಿನೇಷನ್ ಎಂಬುದು ತುಂಬ ಗಂಭೀರವಾದ ವಿಚಾರ. ನಾಮಿನೇಟ್ ಆಗಬಾರದು ಎಂದರೆ ತುಂಬ ಕಷ್ಟಪಡಬೇಕು. ಕೆಲವು ತ್ಯಾಗಗಳನ್ನು ಕೂಡ ಮಾಡಬೇಕಾಗುತ್ತದೆ. ನಾಮಿನೇಷನ್​ನಿಂದ ತಪ್ಪಿಸಿಕೊಂಡರೆ ಒಂದು ವಾರ ಬಿಗ್ ಬಾಸ್ ಮನೆಯ ಜರ್ನಿ ಮುಂದುವರಿಯುತ್ತದೆ. ಆದರೆ ಇದನ್ನೆಲ್ಲ ಪರಿಗಣಿಸದೇ ಜಾಹ್ನವಿ ಅವರು ಕೇವಲ ಮನೆಯವರ ಫೋನ್ ಕಾಲ್ ತಪ್ಪಿಹೋಯಿತು ಎಂದು ಅಳಲು ಆರಂಭಿಸಿದರು.

ಅಶ್ವಿನಿ ಗೌಡ ವಿರುದ್ಧ ಚರ್ಚಾಸ್ಪರ್ಧೆಯಲ್ಲಿ ಗೆದ್ದು, ನಾಮಿನೇಷನ್​​ನಿಂದ ಪಾರಾದರೂ ಕೂಡ ಜಾಹ್ನವಿ ಅವರು ಅಳಲು ಆರಂಭಿಸಿದ್ದನ್ನು ಕಂಡು ಎಲ್ಲರಿಗೂ ಅಚ್ಚರಿ ಆಯಿತು. ಇದು ಒಂದು ವಿಚಿತ್ರ ವರ್ತನೆ ಎಂಬ ರೀತಿಯಲ್ಲಿ ಅವರೆಲ್ಲರೂ ನೋಡಿದರು. ಇದನ್ನೆಲ್ಲ ಜಾಹ್ನವಿ ಅವರು ಸಿಂಪಥಿ ಗಿಟ್ಟಿಸಲು ಮಾಡುತ್ತಿದ್ದಾರೆ ಎಂಬ ಅನುಮಾನ ಕೂಡ ಮೂಡುವಂತಿದೆ.

ಇದನ್ನೂ ಓದಿ: ಅತಿ ಬುದ್ಧಿವಂತಿಕೆ ತೋರಿಸಲು ಬಂದು ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್

ಈ ವಾರ ಧ್ರುವಂತ್, ರಿಷಾ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧನುಷ್, ಮಾಳು, ಗಿಲ್ಲಿ, ಮಲ್ಲಮ್ಮ ಅವರು ನಾಮಿನೇಟ್ ಆಗಿದ್ದಾರೆ. ತಮ್ಮನ್ನು ನಾಮಿನೇಟ್ ಮಾಡಿದ್ದಕ್ಕಾಗಿ ರಾಶಿಕಾ ಅವರು ರಘು ವಿರುದ್ಧ ಕಿರುಚಾಡಿದ್ದಾರೆ. ನಾಮಿನೇಟ್ ಆದರೂ ಪರವಾಗಿಲ್ಲ, ಮನೆಯವರಿಂದ ಫೋನ್ ಕರೆ ಬಂತು ಎಂದು ಧ್ರುವಂತ್ ಅವರು ಖುಷಿಪಟ್ಟಿದ್ದಾರೆ. ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಈ ವಾರ ಒಬ್ಬರು ಎಲಿಮಿನೇಟ್ ಆಗುವುದು ಖಚಿತ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.