ಕಪಿಲ್ ಶರ್ಮಾ ರೆಸ್ಟೊರೆಂಟ್​ ಮೇಲೆ ಮತ್ತೆ ಗುಂಡಿನ ದಾಳಿ: ವಿಡಿಯೋ

Kapil Sharma show: ಖ್ಯಾತ ಹಾಸ್ಯ ಕಲಾವಿದ, ನಟ ಕಪಿಲ್ ಶರ್ಮಾ ಅವರ ಕೆನಡಾದ ರೆಸ್ಟೊರೆಂಟ್​ ಮೇಲೆ ನಿನ್ನೆ ರಾತ್ರಿ ದಾಳಿ ನಡೆದಿದೆ. ಅಗಂತುಕನೊಬ್ಬ ಗುಂಡಿನ ದಾಳಿ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾನೆ. ಅಸಲಿಗೆ ಕಳೆದ ನಾಲ್ಕು ತಿಂಗಳಲ್ಲಿ ಇದೇ ರೆಸ್ಟೊರೆಂಟ್​ ಮೇಲೆ ನಡೆಯುತ್ತಿರುವ ಮೂರನೇ ಗುಂಡಿನ ದಾಳಿ ಇದಾಗಿದೆ. ದಾಳಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ...

ಕಪಿಲ್ ಶರ್ಮಾ ರೆಸ್ಟೊರೆಂಟ್​ ಮೇಲೆ ಮತ್ತೆ ಗುಂಡಿನ ದಾಳಿ: ವಿಡಿಯೋ
Kapil Sharma

Updated on: Oct 17, 2025 | 10:13 AM

ಕಪಿಲ್ ಶರ್ಮಾ (Kapil Sharma) ಭಾರತದ ಬಲು ಜನಪ್ರಿಯ ಸೆಲೆಬ್ರಿಟಿ. ಭಾರತದ ಅತ್ಯಂತ ಶ್ರೀಮಂತ ಕಮಿಡಿಯನ್. ಟಿವಿ ಲೋಕದ ತಾರೆ. ಇದೆಲ್ಲದರ ಜೊತೆಗೆ ಅವರು ಉದ್ಯಮಿಯೂ ಹೌದು. ರಿಯಲ್ ಎಸ್ಟೇಟ್ ಹೂಡಿಕೆ ಮತ್ತು ಹೋಟೆಲ್ ಬ್ಯುಸಿನೆಸ್​​ಗಳಲ್ಲಿಯೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅವರು ಪಂಜಾಬಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೆನಡಾನಲ್ಲಿ ತಮ್ಮ ರೆಸ್ಟೊರೆಂಟ್ ತೆರೆದಿದ್ದರು. ಆದರೆ ಇತ್ತೀಚೆಗೆ ಭೂಗತ ಪಾತಕಿಗಳು ರೆಸ್ಟೊರೆಂಟ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಅದೂ ಬರೋಬ್ಬರಿ ಮೂರನೇ ಬಾರಿ ರೆಸ್ಟೊರೆಂಟ್ ಗುಂಡಿನ ದಾಳಿಗೆ ಈಡಾಗಿದೆ.

ಕೆನಡಾದ ಸರ್ರೆಯ ನ್ಯೂ ಟೌನ್​​ ಏರಿಯಾನಲ್ಲಿ ಕಪಿಲ್ ಶರ್ಮಾ ಅವರ ಮಾಲಿಕತ್ವದ ರೆಸ್ಟೊರೆಂಟ್ ಒಂದು ಕಾರ್ಯ ನಿರ್ವಹಿಸುತ್ತಿದೆ. ಗುರುವಾರ ರಾತ್ರಿ ಈ ರೆಸ್ಟೊರೆಂಟ್​ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಲ್ಲಿನ ಕಾಲಮಾನ 3:45ರ ಸುಮಾರಿಗೆ ಕೆಲ ಅಗಂತುಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಯಾರಿಗೂ ಹಾನಿ ಆಗಿಲ್ಲ ಆದರೆ ರೆಸ್ಟೊರೆಂಟ್​ನ ಗಾಜಿಗೆ ಹಾನಿ ಆಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​​ಗೆ ಸೇರಿದ ಕುಲ್ವೀರ್ ಸಿಧು ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಗುಂಡಿನ ದಾಳಿ ಮಾಡಿದ ವ್ಯಕ್ತಿ ಅದನ್ನು ಮೊಬೈಲ್​​​ನಲ್ಲಿ ರೆಕಾರ್ಡ್ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸಹ ಹಂಚಿಕೊಂಡಿದ್ದಾನೆ.

ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಕಾರಿನ ಕಿಟಕಿಯಿಂದ ಕೈ ಹೊರಗೆ ಚಾಚಿ ಹಲವಾರು ಬಾರಿ ರೆಸ್ಟೊರಂಟ್​​ನತ್ತ ಗುಂಡು ಹಾರಿಸುವ ದೃಶ್ಯ ವಿಡಿಯೋನಲ್ಲಿ ಸೆರೆಯಾಗಿದೆ. ವ್ಯಕ್ತಿ ಗುಂಡು ಹಾರಿಸುತ್ತಿದ್ದಂತೆ ರೆಸ್ಟೊರೆಂಟ್​ನ ಕಿಟಕಿ, ಬಾಗಿಲಿನ ಗಾಜುಗಳೆಲ್ಲ ಪುಡಿಯಾಗಿ ಕೆಳಗೆ ಉರುಳಿವೆ. ಈ ಘಟನೆ ನಡೆದ ಸಂದರ್ಭದಲ್ಲಿ ರೆಸ್ಟೊರೆಂಟ್​​ನ ಸಿಬ್ಬಂದಿ ಒಳಗೆ ಇದ್ದರು ಆದರೆ ಯಾರಿಗೂ ಸಹ ಯಾವುದೇ ರೀತಿಯ ಹಾನಿ ಆಗಿಲ್ಲ ಎನ್ನಲಾಗುತ್ತಿದೆ. ಘಟನೆ ಕುರಿತಾಗಿ ಕಪಿಲ್ ಶರ್ಮಾ ಈ ವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸ್ಥಳೀಯ ಪೊಲೀಸರು ಘಟನೆ ಕುರಿತಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮತ್ತೆ ನಿಲ್ಲಲಿದೆ ಕಪಿಲ್ ಶರ್ಮಾ ಶೋ? ಸೆಟ್​ನಲ್ಲಿ ನಡೆಯಿತು ದೊಡ್ಡ ಜಗಳ

ಕಪಿಲ್ ಶರ್ಮಾ ಅವರ ಕೆಫೆ ಮೇಲೆ ದಾಳಿ ಆಗುತ್ತಿರುವುದು ಇದು ಮೂರನೇ ಬಾರಿ. ಮೊದಲಿಗೆ ಇದೇ ವರ್ಷ ಜುಲೈ 9 ರಂದು ದಾಳಿ ಮಾಡಲಾಗಿತ್ತು. ಅದಾದ ಬಳಿಕ ಆಗಸ್ಟ್ 7 ರಂದು ದಾಳಿ ಮಾಡಲಾಯ್ತು. ಈಗ ಅಕ್ಟೋಬರ್ 16 ರಂದು ದಾಳಿ ಮಾಡಲಾಗಿದೆ. ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಇನ್ನಿತರೆ ಭೂಗತ ಪಾತಕಿಗಳ ಗ್ಯಾಂಗ್​​ಗಳು ಕೆನಡಾ ಅನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದು ತಾವು ಕೇಳಿದಷ್ಟು ಹಣ ಕೊಡದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಬೆದರಿಕೆ ದಾಳಿಗಳನ್ನು ಮಾಡುತ್ತಿರುತ್ತಾರೆ. ಈ ಭೂಗತ ಪಾತಕಿಗಳು ಕೆನಡಾದ ಇತರೆ ಕೆಲವು ಪಂಜಾಬಿನ ಉದ್ಯಮಿಗಳು, ಜನಪ್ರಿಯ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:11 am, Fri, 17 October 25

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us