
‘ಬಿಗ್ ಬಾಸ್ ಕನ್ನಡ’ ಶೋನಲ್ಲಿ ಕೆಲವು ಮೂಲ ನಿಯಮಗಳು ಇವೆ. ಅದರಲ್ಲಿ ಮುಖ್ಯವಾಗಿದ್ದು ಏನೆಂದರೆ, ಲೈಟ್ ಆಫ್ ಆಗುವುದಕ್ಕೂ ಮುನ್ನ ಯಾರೂ ನಿದ್ರೆ ಮಾಡುವಂತಿಲ್ಲ. ಒಂದು ವೇಳೆ ಈ ನಿಯಮ ಮುರಿದರೆ ಶಿಕ್ಷೆ ನೀಡಲಾಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಲೈಟ್ ಆಫ್ ಆಗುವುದಕ್ಕೂ ಮುನ್ನ ಕಿರಣ್ ಶಾಸ್ತ್ರಿ ನಿದ್ರೆ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಹಾಗಾಗಿ ಅವರಿಗೆ ಶಿಕ್ಷೆ ನೀಡಲಾಗಿದೆ.
ಸ್ಪರ್ಧಿಗಳು ಪದೇಪದೇ ನಿದ್ರೆ ಮಾಡಿರುವುದು ಬಿಗ್ ಬಾಸ್ ಗಮನಕ್ಕೆ ಬಂದಿದೆ. ಆದ್ದರಿಂದ ಸ್ಪರ್ಧಿಗಳು ತಮ್ಮಲ್ಲೇ ಚರ್ಚಿಸಿ ಇಬ್ಬರು ತಪ್ಪಿತಸ್ತರ ಹೆಸರನ್ನು ತಿಳಿಸುವಂತೆ ಸೂಚಿಸಲಾಯಿತು. ಎಲ್ಲರೂ ಸೇರಿ ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಹೆಸರನ್ನು ಅಂತಿಮಗೊಳಿಸಿದರು. ಹಾಗಾಗಿ ಈ ಇಬ್ಬರು ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಶಿಕ್ಷೆ ನೀಡಿದರು.
ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಅವರ ಹಾಸಿಗೆ, ದಿಂಬು ಮತ್ತು ಹೊದಿಕೆಯನ್ನು ಹಿಂಪಡೆಯಲಾಗಿದೆ. ಆದ್ದರಿಂದ ರಾತ್ರಿ ವೇಳೆ ಮಲಗುವುದು ಕಷ್ಟ ಆಗಲಿದೆ. ಎಲ್ಲರೂ ಸೇರಿ ತಮ್ಮನ್ನು ಟಾರ್ಗೆಟ್ ಮಾಡಿದ್ದಕ್ಕೆ ಕಿರಣ್ ಶಾಸ್ತ್ರಿ ಅವರಿಗೆ ಬೇಸರ ಆಗಿದೆ. ಎಲ್ಲರ ಎದುರಲ್ಲಿ ಅವರು ಕಣ್ಣೀರು ಹಾಕಿದ್ದಾರೆ. ಸಂಗೀತಾ ಭಟ್, ಆಸಿಯಾ ಮುಂತಾದವರು ಶಾಸ್ತ್ರಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.
ಲಿಖಿತ್ ಮತ್ತು ಕಿರಣ್ ಶಾಸ್ತ್ರಿಗೆ ಶಿಕ್ಷೆ ನೀಡಲಾಗಿದ್ದರೂ ಕೂಡ ಆ ಶಿಕ್ಷೆ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಇನ್ನುಳಿದ ಸ್ಪರ್ಧಿಗಳಿಗೆ ನೀಡಲಾಗಿದೆ. ಒಂದು ವೇಳೆ ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಶಿಕ್ಷೆ ಅನುಭವಿಸುವಲ್ಲಿ ವಿಫಲವಾದರೆ ಅದರ ಪರಿಣಾಮವನ್ನು ಬೇರೆ ಎಲ್ಲ ಸ್ಪರ್ಧಿಗಳೂ ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲರ ಮೇಲೂ ಜವಾಬ್ದಾರಿ ಇದೆ.
ಇದನ್ನೂ ಓದಿ: ‘ಬಳೆ ಹಾಕಿಕೊಂಡು ಕುಳಿತುಕೊಳ್ಳಿ’ ಎಂದ ಕಿರಣ್ ಶಾಸ್ತ್ರಿ; ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಳೆ ವಿವಾದ
ಬಿಗ್ ಬಾಸ್ ನೀಡಿರುವ ಶಿಕ್ಷೆಯನ್ನು ಅನುಭವಿಸದೇ ಬೆಡ್ ಮೇಲೆ ಮಲಗಲು ಕಿರಣ್ ಶಾಸ್ತ್ರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆ ರೀತಿ ಮಾಡುವುದರಿಂದ ಇನ್ನುಳಿದ ಸ್ಪರ್ಧಿಗಳಿಗೆ ಶಿಕ್ಷೆ ಕೊಡಿಸಲು ಅವರು ನಿರ್ಧರಿಸಿದ್ದಾರೆ. ಇದು ನಿದ್ರೆಯ ವಿಚಾರವಾದರೆ ಇನ್ನೂ ಹಲವು ನಿಯಮಗಳನ್ನು ಕೂಡ ಕೆಲವು ಸ್ಪರ್ಧಿಗಳು ಸರಿಯಾಗಿ ಪಾಲಿಸುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.