- TV9 Kannada Photo gallery Cricket photos India vs West Indies: Why Devdutt Padikkal Missed Out, Ruturaj Gaikwad Chosen
42 ಪಂದ್ಯಗಳಲ್ಲಿ 13 ಶತಕ.. ಹಾಗಿದ್ದರೂ ದೇವದತ್ ಪಡಿಕ್ಕಲ್ಗಿಲ್ಲ ಸ್ಥಾನ..! ಕಾರಣ ಇಲ್ಲಿದೆ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಈ ಆಯ್ಕೆಯಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಕಡೆಗಣಿಸಿ, ರುತುರಾಜ್ ಗಾಯಕ್ವಾಡ್ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಅಸಾಮಾನ್ಯ ದಾಖಲೆಗಳ ಹೊರತಾಗಿಯೂ ಪಡಿಕ್ಕಲ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ? ಗಾಯಕ್ವಾಡ್ ಆಯ್ಕೆಗೆ ಆಯ್ಕೆ ಸಮಿತಿ ನೀಡಿದ ಕಾರಣಗಳು ಇಲ್ಲಿವೆ.
Updated on: Sep 17, 2026 | 3:04 PM

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಎರಡು ತಂಡಗಳಲ್ಲೂ ಈ ಮೊದಲೇ ನಿರೀಕ್ಷಿಸಿದ್ದ ಹೆಸರುಗಳೇ ಇವೆ. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ಗೆ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಡಿಕ್ಕಲ್ ಬದಲಿಗೆ ಬಿಸಿಸಿಐ ರುತುರಾಜ್ ಗಾಯಕ್ವಾಡ್ಗೆ ಮಣೆ ಹಾಕಿದೆ(PC-PTI).

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸೆಪ್ಟೆಂಬರ್ 16 ರ ಬುಧವಾರದಂದು ಏಕದಿನ ಮತ್ತು ಟಿ20 ಸರಣಿಗಳಿಗೆ ತಂಡಗಳನ್ನು ಹೆಸರಿಸಿತು. ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯುವುದರಿಂದ ಏಕದಿನ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಇದಲ್ಲದೆ, ಏಷ್ಯನ್ ಕ್ರೀಡಾಕೂಟದಿಂದಾಗಿ, ಕೆಲವು ಪ್ರಮುಖ ಆಟಗಾರರು ಲಭ್ಯವಿಲ್ಲ. ಆದ್ದರಿಂದ, ಅವರ ಸ್ಥಾನಗಳನ್ನು ತುಂಬುವುದು ನಿರ್ಣಾಯಕವಾಗಿತ್ತು(PC-PTI).

ಅದರಲ್ಲೂ ಪ್ರಮುಖವಾದದ್ದು ನಾಲ್ಕನೇ ಕ್ರಮಾಂಕದಲ್ಲಿ ಆಡುವ ಶ್ರೇಯಸ್ ಅಯ್ಯರ್ ಬದಲಿಗೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಪ್ರಶ್ನೆಯಾಗಿತ್ತು. ಇದೀಗ ತಂಡ ಪ್ರಕಟಿಸಿರುವ ಬಿಸಿಸಿಐ ಅಯ್ಯರ್ ಬದಲಿಗೆ ರುತುರಾಜ್ ಗಾಯಕ್ವಾಡ್ ಅವರನ್ನು ಆಯ್ಕೆ ಮಾಡಿದೆ. ಗಾಯಕ್ವಾಡ್ ಅವರ ಆಯ್ಕೆ ಸಹಜವಾದರೂ, ಪ್ರಸ್ತುತ ಅತ್ಯುತ್ತಮ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ(PC-PTI).

ದೇವದತ್ ಪಡಿಕ್ಕಲ್ ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು. ಅಲ್ಲದೆ ಐಪಿಎಲ್ 2026 ರಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಇಷ್ಟೇ ಅಲ್ಲ, ಲಿಸ್ಟ್ ಎ ಕ್ರಿಕೆಟ್ ಅಥವಾ ಏಕದಿನ ಕ್ರಿಕೆಟ್ನಲ್ಲಿ ಅವರ ದಾಖಲೆ ಅದ್ಭುತವಾಗಿದೆ. 42 ಲಿಸ್ಟ್ ಎ ಪಂದ್ಯಗಳಲ್ಲಿ, ಪಡಿಕ್ಕಲ್ 13 ಶತಕಗಳು ಮತ್ತು 14 ಅರ್ಧಶತಕಗಳು ಸೇರಿದಂತೆ 2796 ರನ್ ಗಳಿಸಿದ್ದಾರೆ. ಅಂದರೆ ಅವರು ಬ್ಯಾಟಿಂಗ್ ಮಾಡಿದ 41 ಇನ್ನಿಂಗ್ಸ್ಗಳಲ್ಲಿ 27 ಬಾರಿ 50ರ ಗಡಿ ದಾಟಿದ್ದಾರೆ. ಇದಲ್ಲದೆ, ಅವರ ಸರಾಸರಿ 82.23 ಆಗಿದ್ದು, ಇದು ಪ್ರಸ್ತುತ ಈ ಸ್ವರೂಪದಲ್ಲಿ ವಿಶ್ವದಲ್ಲಿಯೇ ಅತ್ಯಧಿಕ ಸರಾಸರಿಯಾಗಿದೆ(PC-PTI).

ಇಂತಹ ಪರಿಸ್ಥಿತಿಯಲ್ಲಿ, ಪಡಿಕ್ಕಲ್ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದಾಗ್ಯೂ, ಆಯ್ಕೆ ಸಮಿತಿಯು ಗಾಯಕ್ವಾಡ್ ಅವರನ್ನು ಆಯ್ಕೆ ಮಾಡಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಪಡಿಕ್ಕಲ್ ಒಬ್ಬ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್, ಮುಖ್ಯವಾಗಿ ಆರಂಭಿಕ ಆಟಗಾರ. ಹೀಗಾಗಿ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ನ ಅವಶ್ಯಕತೆ ಇತ್ತು. ಹೀಗಾಗಿ ಈ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿರುವ ರುತುರಾಜ್ಗೆ ಅವಕಾಶ ನೀಡಲಾಗಿದೆ(PC-PTI).

ಎರಡನೆಯದಾಗಿ, ಗಾಯಕ್ವಾಡ್ ತಮ್ಮ ಕೊನೆಯ ಏಕದಿನ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದರು. ಈ ಶತಕವನ್ನು ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಬಾರಿಸಿದ್ದರು. ಹೀಗಾಗಿ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಗಾಯಕ್ವಾಡ್ ತಮ್ಮ ವೃತ್ತಿಜೀವನದುದ್ದಕ್ಕೂ ಈ ಕ್ರಮಾಂಕದಲ್ಲಿ ಸಾಕಷ್ಟು ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಇದಲ್ಲದೆ ಗಾಯಕ್ವಾಡ್ ಸುಮಾರು 59 ಸರಾಸರಿಯಲ್ಲಿ 5334 ರನ್ ಗಳಿಸಿದ್ದಾರೆ, ಇದರಲ್ಲಿ 21 ಶತಕಗಳು ಸೇರಿವೆ. ಆದ್ದರಿಂದ, ಪಡಿಕ್ಕಲ್ ಕಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ(PC-PTI).




