‘ಪೆಟ್ಟಾಯ್ತು ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದು ನಾಟಕ’: ಮತ್ತೊಂದು ಬಾಂಬ್ ಹಾಕಿದ ಜಗದೀಶ್​

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಬಗ್ಗೆ ಲಾಯರ್​ ಜಗದೀಶ್​ ಅವರು ಈಗಾಗಲೇ ಹಗುರವಾಗಿ ಮಾತನಾಡಿದ್ದಾರೆ. ಈಗ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ಇತ್ತೀಚೆಗೆ ಟಾಸ್ಕ್​ ಮಾಡುವಾಗ ತ್ರಿವಿಕ್ರಮ್ ಅವರಿಗೆ ಪೆಟ್ಟಾಗಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆಸ್ಪತ್ರೆಗೆ ಹೋಗಿದ್ದೆಲ್ಲ ನಾಟಕ ಎಂದು ಜಗದೀಶ್ ಹೇಳಿದ್ದಾರೆ.

‘ಪೆಟ್ಟಾಯ್ತು ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದು ನಾಟಕ’: ಮತ್ತೊಂದು ಬಾಂಬ್ ಹಾಕಿದ ಜಗದೀಶ್​
ಲಾಯರ್​ ಜಗದೀಶ್​

Updated on: Oct 04, 2024 | 10:08 PM

ಸ್ವರ್ಗ ವಾಸಿಗಳು ಮತ್ತು ನರಕವಾಸಿಗಳು ಎಂದು ಎರಡು ತಂಡಗಳಾಗಿ ಬಿಗ್​ ಬಾಸ್​ ಮನೆ ಭಾಗ ಆಗಿದೆ. ಸ್ವರ್ಗದಲ್ಲಿ ಕೆಲವು ಸವಲತ್ತುಗಳು ಇವೆ. ಆದರೆ ನರಕದಲ್ಲಿ ಇರುವವರಿಗೆ ಬೇಸಿಕ್​ ಸೌಕರ್ಯಗಳು ಮಾತ್ರ ಇವೆ. ಹಾಗಾಗಿ ನರಕದಲ್ಲಿ ಇರುವವರು ಸ್ವರ್ಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಟಾಸ್ಕ್​ ಆಡುವಾಗ ಸಿಕ್ಕಾಪಟ್ಟೆ ಆಗ್ರೆಸಿವ್​ ಆಗಿ ಸ್ಪರ್ಧಿಗಳು ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಟಾಸ್ಕ್​ನಲ್ಲಿ ನಟ ತ್ರಿವಿಕ್ರಮ್ ಅವರಿಗೆ ಪೆಟ್ಟಾಗಿದ್ದರಿಂದ ಅವರನ್ನು ವೈದ್ಯರ ಬಳಿ ಕಳಿಸಿ ಚಿಕಿತ್ಸೆ ಕೊಡಿಸುವುದು ಅನಿವಾರ್ಯ ಆಯಿತು. ಆದರೆ ತ್ರಿವಿಕ್ರಮ್ ಮಾಡಿದ್ದೆಲ್ಲ ನಾಟಕ ಎಂದು ಲಾಯರ್​ ಜಗದೀಶ್​ ಹೇಳಿದ್ದು, ಕಿಡಿ ಹೊತ್ತಿಸಿದ್ದಾರೆ.

ಲಾಯರ್​ ಜಗದೀಶ್​ ಅವರು ಸ್ವರ್ಗದಲ್ಲಿ ಇದ್ದಾರೆ. 5ನೇ ದಿನ ಬೆಳ್ಳಂಬೆಳಗ್ಗೆ ನರಕದ ಬಳಿ ಬಂದ ಅವರು ಗೋಲ್ಡ್​ ಸುರೇಶ್​ ಎದುರು ನಿಂತು ಈ ಮಾತುಗಳನ್ನು ಹೇಳಿದ್ದಾರೆ. ‘ತ್ರಿವಿಕ್ರಮ್​ ಆಸ್ಪತ್ರೆಗೆ ಹೋಗಿದ್ದು ನಾಟಕ. ಅವನಿಗೆ ಪೆಟ್ಟಾಗಿದೆ ಎಂಬುದು ನಿಜ. ಆದರೆ ಆಸ್ಪತ್ರೆಗೆ ಹೋಗುವ ಮಟ್ಟಕ್ಕೆ ಏನೂ ಆಗಿಲ್ಲ. ಇದೆಲ್ಲ ಅವನ ನಾಟಕ’ ಎಂದು ಲಾಯರ್​ ಜಗದೀಶ್​ ಹೇಳಿದ್ದಾರೆ. ಈ ಮಾತು ಕೇಳಿದ ಬಳಿಕ ಏನು ಉತ್ತರ ನೀಡಬೇಕು ಎಂಬುದು ತಿಳಿಯದೇ ಗೋಲ್ಡ್​ ಸುರೇಶ್​ ಅವರು ನಕ್ಕು ಸುಮ್ಮನಾಗಿದ್ದಾರೆ.

ವಿಚಿತ್ರ ವರ್ತನೆಗಳಿಂದ ಲಾಯರ್​ ಜಗದೀಶ್​ ಗುರುತಿಸಿಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಅವರು ಬಿಗ್​ ಬಾಸ್​ ಶೋ ವಿರುದ್ಧವೇ ತಿರುಗಿ ಬಿದ್ದಿದ್ದರು. ‘ನಾನು ಈ ಕಾರ್ಯವನ್ನು ನಿಲ್ಲಿಸುತ್ತೇನೆ. ಇಲ್ಲಿನ ಮಾಫಿಯಾ ಎಕ್ಸ್​ಪೋಸ್​ ಮಾಡುತ್ತೇನೆ’ ಎಂದೆಲ್ಲ ಅವರು ಆರ್ಭಟಿಸಿದ್ದರು. ಕೆಲವೇ ಸಮಯದ ಬಳಿಕ ಕ್ಷಮೆ ಕೇಳಿದರು. ಹಾಗಂತ ಅವರು ಆಡಿದ ಮಾತುಗಳನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ವೀಕೆಂಡ್​ನಲ್ಲಿ ಖಂಡಿತವಾಗಿಯೂ ಈ ಬಗ್ಗೆ ಸುದೀಪ್​ ಅವರು ಕ್ಲಾಸ್​ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಕಿತ್ತೋಗಿರೋ ಪ್ರೋಗ್ರಾಂ’: ಬಿಗ್ ಬಾಸ್​ಗೆ ಅವಮಾನ ಮಾಡಿದ ಲಾಯರ್ ಜಗದೀಶ್​; ಕಾದಿದೆ ಗ್ರಹಚಾರ

ಬಿಗ್​ ಬಾಸ್​ ಕಾರ್ಯಕ್ರಮ ಈ ಬಾರಿ ಹೊಸ ಸ್ವರೂಪದಲ್ಲಿ ಜನರ ಎದುರು ಬಂದಿದೆ. ಇದು 11ನೇ ಸೀಸನ್​ ಆದ್ದರಿಂದ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗಿದೆ. ಸ್ವರ್ಗ ಮತ್ತು ನರಕ ಎಂಬುದು ‘ಬಿಗ್​ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಹೊಸ ಕಾನ್ಸೆಪ್ಟ್​. ಇದರಿಂದಾಗಿ ಆಟದ ರೀತಿ-ನೀತಿ ಬಯಲಾಗಿದೆ. 7 ಸ್ಪರ್ಧಿಗಳು ನರಕದಲ್ಲಿ ಇದ್ದಾರೆ. 10 ಜನರು ಸ್ವರ್ಗದಲ್ಲಿ ಇದ್ದಾರೆ. ಉಗ್ರಂ ಮಂಜು, ಲಾಯರ್​ ಜಗದೀಶ್​, ಧನರಾಜ್​, ಧರ್ಮ ಕೀರ್ತಿರಾಜ್​, ಶಿಶಿರ್​, ತ್ರಿವಿಕ್ರಮ್​, ಗೋಲ್ಡ್​ ಸುರೇಶ್​, ಯಮುನಾ ಶ್ರೀನಿಧಿ, ಹಂಸಾ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಐಶ್ವರ್ಯಾ, ಭವ್ಯಾ ಗೌಡ, ಅನುಷಾ ರೈ, ರಂಜಿತ್, ಗೌತಮಿ ಜಾಧವ್, ಮಾನಸಾ ಅವರು ಸ್ಪರ್ಧಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us