‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

| Updated By: ಮದನ್​ ಕುಮಾರ್​

Updated on: Mar 13, 2022 | 10:26 AM

ಬಡ ಹೆಣ್ಣುಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಪುನೀತ್​ ರಾಜ್​ಕುಮಾರ್​ ನಿರ್ಧರಿಸಿದ್ದರು. ಶಾಲೆ ಸ್ಥಾಪನೆಗೆ ಅವರೊಂದು ಕಂಡೀಷನ್​ ಹಾಕಿದ್ದರು!

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ
ಪುನೀತ್​ ರಾಜ್​ಕುಮಾರ್​
Follow us on

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಕಿರುತೆರೆಯ ಪ್ರೇಕ್ಷಕರನ್ನೂ ಕೂಡ ರಂಜಿಸಿದ್ದರು. ನಟನೆ, ಗಾಯನ, ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಅವರು ನಿರೂಪಕನಾಗಿಯೂ ಫೇಮಸ್​ ಆಗಿದ್ದರು. ‘ಕನ್ನಡದ ಕೋಟ್ಯಧಿಪತಿ’ (Kannadada Kotyadhipathi) ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಅವರು ಕರುನಾಡಿನ ಮನೆಮನೆಯನ್ನು ತಲುಪುತ್ತಿದ್ದರು. ಆ ಶೋ ನಿರೂಪಣೆ ಮಾಡಿದ್ದಕ್ಕಾಗಿ ಪುನೀತ್​ ರಾಜ್​ಕುಮಾರ್​ ಅವರಿಗೆ ಕೈತುಂಬ ಸಂಭಾವನೆ ಸಿಕ್ಕಿತ್ತು. ಆ ವಿಚಾರದ ಬಗ್ಗೆ ಹಿರಿಯ ನಿರ್ದೇಶಕ ಎಸ್​.ಕೆ. ಭಗವಾನ್​ ಅವರು ಮಾಹಿತಿ ನೀಡಿದ್ದಾರೆ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಿಂದ ಪುನೀತ್​​ ಅವರಿಗೆ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿತ್ತು ಎಂದು ಭಗವಾನ್​ ತಿಳಿಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಪುನೀತ್​ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಮೈಸೂರಿನಲ್ಲಿ ಇರುವ ಶಕ್ತಿಧಾಮ (Shakthidhama) ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೆ ಸಂಭಾವನೆ ರೂಪದಲ್ಲಿ ಬಂದ ಆ 8 ಕೋಟಿ ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಅಪ್ಪು ಮೀಸಲಿಟ್ಟರು. ಆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ..

ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ನಿರ್ದೇಶಕ ದೊರೆ-ಭಗವಾನ್​ ಅವರಿಗೆ ಮೊದಲಿನಿಂದಲೂ ಒಡನಾಟ ಇದೆ. ಪುನೀತ್​ ರಾಜ್​ಕುಮಾರ್​ ಅವರನ್ನು ಹತ್ತಿರದಿಂದ ಕಂಡಂತಹ ವ್ಯಕ್ತಿಗಳಲ್ಲಿ ಅವರು ಕೂಡ ಪ್ರಮುಖರು. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಗವಾನ್​ ಅವರು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕಾಗಿ ಪುನೀತ್​ ರಾಜ್​ಕುಮಾರ್​ ಅವರು ತಮ್ಮ 8 ಕೋಟಿ ರೂಪಾಯಿ ಸಂಭಾವನೆಯನ್ನು ಮೀಸಲಿಟ್ಟರು ಎಂಬ ವಿಚಾರವನ್ನು ಭಗವಾನ್​ ತೆರೆದಿಟ್ಟಿದ್ದಾರೆ.

‘ಪುನೀತ್​ಗೆ ಕನ್ನಡದ ಕೋಟ್ಯಧಿಪತಿ ಶೋನಿಂದ 8 ಕೋಟಿ ರೂಪಾಯಿ ಸಂಭಾವನೆ ಬಂತು. ಅದನ್ನು ಶಕ್ತಿಧಾಮಕ್ಕೆ ಟ್ರಾನ್ಸ್​ಫರ್​ ಮಾಡಿದ್ದಾರೆ. ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇದ್ದಾರೆ. ಎಲ್ಲರೂ ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಮಕ್ಕಳಿಗಾಗಿ ಶಕ್ತಿಧಾಮದಲ್ಲಿಯೇ ಒಂದು ಶಾಲೆಯನ್ನು ಕಟ್ಟಿಸಬಹುದಲ್ಲ ಎಂಬ ಆಲೋಚನೆ ಅವರಿಗೆ ಮೂಡಿತು. ಕೂಡಲೇ ಮ್ಯಾನೇಜಿಂಗ್​ ಟ್ರಸ್ಟಿ ಬಳಿ ಮಾತನಾಡಿದರು. ಶಾಲೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬ ವಿಚಾರ ತಿಳಿದುಕೊಂಡು ಶಾಲೆ ಸ್ಥಾಪನೆಯ ಕೆಲಸ ಶುರುಮಾಡಿ ಅಂತ ಹೇಳಿದರು’ ಎಂದಿದ್ದಾರೆ ನಿರ್ದೇಶಕ ಭಗವಾನ್​.

ಶಾಲೆ ಶುರು ಮಾಡುವುದಕ್ಕೆ ಪುನೀತ್​ ರಾಜ್​ಕುಮಾರ್ ಒಂದು ಕಂಡೀಷನ್​ ಕೂಡ ಹಾಕಿದ್ದರು. ‘ಇದು ಬರೀ ಹೆಣ್ಣುಮಕ್ಕಳ ಶಾಲೆ ಆಗಿರಬೇಕು. ನಮ್ಮ ಶಕ್ತಿಧಾಮದ ಮಕ್ಕಳು ಇಲ್ಲೇ ಓದಬೇಕು. ಹೊರಗಡೆಯಿಂದ ಬರುವ ಬಡ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕು. ಯಾರಿಂದಲೂ ಫೀಸ್​ ಮತ್ತು ಡೊನೇಷನ್​ ಪಡೆಯಬಾರದು. ಎಲ್ಲ ಮಕ್ಕಳಿಗೆ ಸಮವಸ್ತ್ರವನ್ನು ನಾನೇ ಒದಗಿಸುತ್ತೇನೆ. ಈ ಷರತ್ತುಗಳಿಗೆ ಒಪ್ಪುವುದಾದರೆ ನೀವು ಶಾಲೆ ಸ್ಥಾಪನೆಯ ಕೆಲಸ ಶುರುಮಾಡಿ’ ಎಂದು ಅಪ್ಪು ಹೇಳಿದ್ದರು ಎಂಬ ವಿಚಾರವನ್ನು ಭಗವಾನ್​ ವಿವರಿಸಿದ್ದಾರೆ.

ಶಾಲೆ ನಿರ್ಮಿಸಬೇಕು ಎಂದು ಪುನೀತ್​ ಕಂಡ ಕನಸನ್ನು ಇಂದು ಅವರ ಕುಟುಂಬದವರು ನನಸು ಮಾಡುತ್ತಿದ್ದಾರೆ. ಅನುಮತಿಗಾಗಿ ಸರ್ಕಾರದ ಬಳಿ ಮನವಿಯನ್ನೂ ಸಲ್ಲಿಸಿದ್ದಾರೆ. ಸರ್ಕಾರದ ಕಡೆಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಆ ಶಾಲೆಗೆ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನೇ ಇಡಲಾಗುವುದು ಎಂಬ ಮಾಹಿತಿಯನ್ನು ಕೂಡ ಭಗವಾನ್​ ತಿಳಿಸಿದ್ದಾರೆ. ‘ಅಪ್ಪು ನಮ್ಮ ಜೊತೆ ಇಲ್ಲ. ಆದರೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಇರುತ್ತದೆ. ಅವರು ನಮ್ಮ ನಾಡಿನಲ್ಲಿ ಮತ್ತೆ ಹುಟ್ಟಿಬರಲಿ’ ಎಂದು ಭಗವಾನ್​ ಹೇಳಿದ್ದಾರೆ.

ಇದನ್ನೂ ಓದಿ:

ಕೊಪ್ಪಳದಲ್ಲಿ ಪುನೀತ್​ ರಾಜ್​ಕುಮಾರ್​ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿಗಳು

ಸೈನಿಕನ ಗೆಟಪ್​ನಲ್ಲಿ ಆಹಾ ಎಷ್ಟು ಚಂದ ಪುನೀತ್​; ಇಲ್ಲಿವೆ ‘ಜೇಮ್ಸ್​’ ಸಿನಿಮಾದ ಫೋಟೋಗಳು