ರಜತ್ ಹಾಗೂ ವಿನಯ್ ಗೌಡ (Vinay Gowda) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಅವರು ಅರೆಸ್ಟ್ ಆದರು. ರೀಲ್ಸ್ಗೆ ಬಳಸಿದ್ದ ಮಚ್ಚು ಸಿಗದೇ ಇದ್ದ ಕಾರಣ ಈಗ ಸಾಕ್ಷಿ ನಾಶದ ಆರೋಪ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೋರ್ವ ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಸಂಕಷ್ಟ ಎದುರಾಗಿದೆ. ನಾಡದೇವಿ ಚಾಮುಂಡೇಶ್ವರಿಗೆ ಅವಹೇಳನ ಮಾಡಿದ ಆರೋಪದಲ್ಲಿ ಅವರ ವಿರುದ್ಧ ದೂರು ನೀಡಲು ಹಿಂದೂ ಸಂಘಟನೆಗಳು ಮುಂದಾಗಿವೆ. ದೂರು ನೀಡಿದ ಬಳಿಕ ಅವರ ಭವಿಷ್ಯ ನಿರ್ಧಾರ ಆಗಲಿದೆ.
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ರಕ್ಷಕ್ ಸ್ಪರ್ಧಿಸಿದ್ದಾರೆ. ಸಹಸ್ಪರ್ಧಿಯನ್ನು ಹೊಗಳುವ ಭರದಲ್ಲಿ ಚಾಮುಂಡೇಶ್ವರಿಗೆ ಅವಮಾನ ಮಾಡಿರುವ ಆರೋಪ ರಕ್ಷಕ್ ಬುಲೆಟ್ ವಿರುದ್ಧ ಕೇಳಿ ಬಂದಿದೆ. ಈ ಕಾರಣದಿಂದ ಅವರ ವಿರುದ್ಧ ಹಿಂದೂ ಸಂಘಟನೆಗಳು ದೂರು ಕೊಟ್ಟಿವೆ.
‘ಭರ್ಜರಿ ಬ್ಯಾಚುಲರ್ಸ್ 2’ನಲ್ಲಿ ರಮೋಲಾ ಅವರು ರಕ್ಷಕ್ಗೆ ಜೊತೆಯಾಗಿದ್ದಾರೆ. ಅವರನ್ನು ನೋಡಿ ರಕ್ಷಕ್ ಹೊಗಳಿದರು. ಆದರೆ, ಈ ವೇಳೆ ಎಡವಟ್ಟು ಮಾಡಿಕೊಂಡರು. ‘ನಿಮ್ಮನ್ನು ನೋಡುತ್ತಾ ಇದ್ದರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು, ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್ನಲ್ಲಿ ಟ್ರಿಪ್ ಹೊಡಿಯುತ್ತಿದ್ದಾಳೆ ಅನ್ನಿಸ್ತಿದೆ’ ಎಂದು ರಕ್ಷಕ್ ಬುಲೆಟ್ ಡೈಲಾಗ್ ಹೊಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹಿಂದೂ ಸಂಘಟನೆಗಳಿಂದ ಕಮಿಷನರ್ಗೆ ದೂರು ನೀಡಲು ಮುಂದಾಗಿವೆ. ‘ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ರಕ್ಷಕ್ ಬುಲೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಲಾಗಿದೆ.
ಈಗಾಗಲೇ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ಬಂಧನದಲ್ಲಿ ಇದ್ದಾರೆ. ಇತ್ತೀಚೆಗೆ ಮಚ್ಚು ಬಳಕೆ ಮಾಡಿ ರೀಲ್ಸ್ ಮಾಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.