ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್​ಗೆ ವಾರದ ಆರಂಭದಲ್ಲೇ ಜೈಲು ಶಿಕ್ಷೆ; ಯಾಕೀ ನಿರ್ಧಾರ?

| Updated By: ರಾಜೇಶ್ ದುಗ್ಗುಮನೆ

Updated on: Nov 28, 2023 | 2:07 PM

ಬಿಗ್ ಬಾಸ್​ನಲ್ಲಿ ತುಕಾಲಿ ಸಂತೋಷ್ ಅವರಿಗೆ ಶಿಕ್ಷೆ ಆಗಿದೆ. ವಾರದ ಆರಂಭದಲ್ಲೇ ಒಂದು ದಿನ ಶಿಕ್ಷೆ ನೀಡುವ ನಿರ್ಧಾರಕ್ಕೆ ಮನೆ ಮಂದಿ ಬಂದಿದ್ದಾರೆ. ವರ್ತೂರು ಸಂತೋಷ್ ಅವರಿಗೂ ಪರೋಕ್ಷವಾಗಿ ಶಿಕ್ಷೆ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್​ಗೆ ವಾರದ ಆರಂಭದಲ್ಲೇ ಜೈಲು ಶಿಕ್ಷೆ; ಯಾಕೀ ನಿರ್ಧಾರ?
ಸಂತೋಷ್
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ವಾರಾಂತ್ಯದ ವೇಳೆ ಕಳಪೆ ಹಾಗೂ ಉತ್ತಮ ಎನ್ನುವ ಹಣೆಪಟ್ಟಿ ನೀಡಲಾಗುತ್ತದೆ. ಉತ್ತಮ ಪಡೆದವರಿಗೆ ಮೆಡಲ್ ಸಿಕ್ಕರೆ, ಕಳಪೆ ಪಡೆದವರಿಗೆ ಜೈಲು ಶಿಕ್ಷೆ ಆಗುತ್ತದೆ. ಕಳೆದ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಸಿಕ್ಕಿತ್ತು. ಟಾಸ್ಕ್ ಉತ್ತಮವಾಗಿ ಆಡಿಲ್ಲ ಎನ್ನುವ ಕಾರಣಕ್ಕೆ ಅವರು ಜೈಲು ವಾಸ ಅನುಭವಿಸಬೇಕಾಯಿತು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಸಂತೋಷ್ ನಿಯಮ ಮೀರಿದ್ದರು. ಇದಕ್ಕೆ ಸುದೀಪ್ ಅವರು ಸಂತೋಷ್​ಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನು ನಿರ್ಧರಿಸಲು ಮನೆಯವರಿಗೆ ಅಧಿಕಾರ ನೀಡಿದ್ದರು. ಇದರ ಪ್ರಕಾರ ಮನೆಯ ಸದಸ್ಯರು ಶಿಕ್ಷೆ ನಿರ್ಧರಿಸಿದ್ದಾರೆ.

ವರ್ತೂರು ಸಂತೋಷ್ ಅವರು ಜೈಲು ಸೇರಿದ್ದರು. ಮಧ್ಯರಾತ್ರಿ ಅವರು ಜೈಲಿನಿಂದ ಹೊರ ಬಂದಿದ್ದರು. ಕಂಬಿಯಿಂದ ನುಸುಳಿ ಅವರು ತಪ್ಪಿಸಿಕೊಂಡು ಬಂದಿದ್ದರು. ಇದನ್ನು ಹಾಸ್ಯಕ್ಕಾಗಿ ಅವರು ಮಾಡಿದ್ದರು. ಆದರೆ, ಇದು ಗಂಭೀರ ತಪ್ಪು. ಹೀಗಾಗಿ, ಶಿಕ್ಷೆ ಆಗಲೇಬೇಕಿತ್ತು. ಈ ಅಧಿಕಾರವನ್ನು ಮನೆ ಮಂದಿಗೆ ನೀಡಲಾಯಿತು. ಮನೆ ಮಂದಿ ಶಿಕ್ಷೆ ನೀಡುವ ನಿರ್ಧಾರಕ್ಕೆ ಬಂದರು.

ವರ್ತೂರು ಸಂತೋಷ್ ಜೈಲಿನಿಂದ ಹೊರ ಬರಲು ತುಕಾಲಿ ಸಂತೋಷ್ ಕೂಡ ಕಾರಣ. ಅವರು ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಒಂದೊಮ್ಮೆ ಜೈಲಿನಿಂದ ಹೊರಬರುವಾಗ ಇದು ತಪ್ಪು ಎನ್ನುವ ಮಾತನ್ನು ಹೇಳಿದ್ದರೆ ಬಹುಶಃ ವರ್ತೂರು ಸಂತೋಷ್ ಅವರು ಈ ಕೆಲಸ ಮಾಡುತ್ತಿರಲಿಲ್ಲವೇನೋ. ಈ ಕಾರಣದಿಂದ ತುಕಾಲಿ ಸಂತೋಷ್​ಗೆ ಜೈಲು ಶಿಕ್ಷೆ ನೀಡಲು ಮನೆ ಮಂದಿ ನಿರ್ಧರಿಸಿದರು.

ಆರಂಭದಲ್ಲಿ ಇಡೀ ದಿನ ಮನೆಯ ಎಲ್ಲಾ ಕೆಲಸವನ್ನು ಸಂತೋಷ್ ಮಾಡಬೇಕು ಎನ್ನುವ ಶಿಕ್ಷೆ ನೀಡಲು ಆಲೋಚಿಸಲಾಯಿತು. ಆದರೆ ಇದಕ್ಕೆ ಒಮ್ಮತ ಸಿಗಲಿಲ್ಲ. ಆ ಬಳಿಕ ತುಕಾಲಿ ಸಂತೋಷ್ ಅವರನ್ನು ಒಂದು ದಿನ ಜೈಲಿನಲ್ಲಿ ಇರಿಸಿ ವರ್ತೂರು ಅವರು ತುಕಾಲಿಯನ್ನು ಭೇಟಿ ಮಾಡಬಾರದು ಎನ್ನುವ ಷರತ್ತನ್ನು ಹಾಕಲಾಯಿತು. ಮನೆಯ ಆ್ಯಕ್ಟಿಂಗ್ ಕ್ಯಾಪ್ಟನ್ ಮೈಕಲ್ ಅವರು ಬಿಗ್ ಬಾಸ್ ಬಳಿ ಹೋಗಿ ತಾವು ಈ ಶಿಕ್ಷೆ ನಿರ್ಧರಿಸಿದ್ದೇವೆ, ದಯವಿಟ್ಟು ಕೀ ಕಳುಹಿಸಿಕೊಡಿ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada: ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಬಿಗ್ ಬಾಸ್​ನಲ್ಲಿ ಸ್ಟಾರ್ಟ್ ಆಯ್ತು ಫೈಟ್; ನೆಲಕ್ಕೆ ಬಿದ್ದ ಸಂತೋಷ್

ಆದರೆ, ಬಿಗ್ ಬಾಸ್ ಕಡೆಯಿಂದ ಕೀ ಬಂದಿಲ್ಲ. ಹೀಗಾಗಿ, ಶಿಕ್ಷೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈ ವಾರ ವರ್ತೂರು ಸಂತೋಷ್ ಅವರು ನಾಮಿನೇಟ್ ಆಗಿದ್ದಾರೆ. ಅವರಿಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಿದೆ. ತುಕಾಲಿ ಸಂತೋಷ್ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಹೀಗಾಗಿ, ಅವರು ಒಂದು ದಿನ ಜೈಲಿನಲ್ಲಿ ಇದ್ದರೂ ಅಂಥ ಬದಲಾವಣೆ ಏನು ಆಗುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ