ಫಿನಾಲೆ ವಾರ ತಲುಪಿದ ವರ್ತೂರು ಸಂತೋಷ್​; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ

|

Updated on: Jan 21, 2024 | 11:18 AM

ಅನೇಕ ಸವಾಲುಗಳನ್ನು ಎದುರಿಸಿ ವರ್ತೂರು ಸಂತೋಷ್​ ಅವರು ಫಿನಾಲೆ ವಾರಕ್ಕೆ ಬಂದಿದ್ದಾರೆ. ಈ ಶೋ ಆರಂಭ ಆದ ಕೆಲವೇ ದಿನಗಳಲ್ಲಿ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿತ್ತು. ಅದನ್ನು ನಿವಾರಿಸಿಕೊಂಡು ಅವರು ಆಟ ಮುಂದುವರಿಸಿದರು. ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ ಬಳಿಕ ಬಿಗ್​ ಬಾಸ್​ ಫಿನಾಲೆ ವಾರವನ್ನು ತಲುಪಿದ ಮೂರನೇ ಸ್ಪರ್ಧಿಯಾಗಿದ್ದಾರೆ ವರ್ತೂರು ಸಂತೋಷ್​.

ಫಿನಾಲೆ ವಾರ ತಲುಪಿದ ವರ್ತೂರು ಸಂತೋಷ್​; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ
ತುಕಾಲಿ ಸಂತೋಷ್​, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್​
Follow us on

ಕಿಚ್ಚ ಸುದೀಪ್​ ಅವರು ಜನವರಿ 20ರ ಸಂಚಿಕೆಯಲ್ಲಿ ಕೊನೆಯ ಪಂಚಾಯ್ತಿ ನಡೆಸಿದ್ದಾರೆ. ಈ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್​ (Varthur Santhosh) ಬಗ್ಗೆ ಭರ್ಜರಿ ನ್ಯೂಸ್​ ಹೊರಬಿದ್ದಿದೆ. ರೈತನಾಗಿ ಗುರುತಿಸಿಕೊಂಡಿರುವ ಅವರು ಈಗ ಬಿಗ್​ ಬಾಸ್​ ಫಿನಾಲೆ ವಾರ ತಲುಪಿದ್ದಾರೆ. ಆ ಮೂಲಕ ಅವರು ಸಂಗೀತಾ ಶೃಂಗೇರಿ (Sangeetha Sringeri) ಮತ್ತು ತುಕಾಲಿ ಸಂತೋಷ್​ ಜೊತೆ ಪೈಪೋಟಿ ನೀಡುತ್ತಿದ್ದಾರೆ. ವರ್ತೂರು ಸಂತೋಷ್​ ಅವರು ಫಿನಾಲೆ ವಾರಕ್ಕೆ ಎಂಟ್ರಿ ನೀಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಫಿನಾಲೆ ವಾರಕ್ಕೆ ಬರುವ ಇನ್ನಿಬ್ಬರು ಸ್ಪರ್ಧಿಗಳು ಯಾರು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಜನವರಿ 27 ಮತ್ತು 28ರಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 10’ ಫಿನಾಲೆ (Bigg Boss Finale) ನಡೆಯಲಿದೆ.

‘ಬಿಗ್​ ಬಾಸ್​ ಫಿನಾಲೆ ವಾರಕ್ಕೆ ತಲುಪುವ ಮೂರನೇ ಸ್ಪರ್ಧಿ ವರ್ತೂರು ಸಂತೋಷ್​’ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದಾಗ ಎಲ್ಲರಿಗೂ ಅಚ್ಚರಿ ಆಯಿತು. ಈ ವೇಳೆ ತುಕಾಲಿ ಸಂತೋಷ್​ ಅವರು ಹೆಚ್ಚು ಖುಷಿಪಟ್ಟರು. ಬಿಗ್​ ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ನಡುವೆ ಉತ್ತಮ ಸ್ನೇಹ ಇದೆ. ಫಿನಾಲೆ ವೇದಿಕೆಯಲ್ಲಿ ಸುದೀಪ್​ ಹಿಡಿಯುವ ಆ ಎರಡು ಕೈಗಳು ತಮ್ಮಿಬ್ಬರದ್ದೇ ಆಗಿರಬೇಕು ಎಂದು ತುಕಾಲಿ ಆಸೆಪಟ್ಟಿದ್ದಾರೆ.

ಕಳೆದ ವಾರ ತುಕಾಲಿ ಸಂತೋಷ್​ ಅಥವಾ ವರ್ತೂರು ಸಂತೋಷ್​ ಅವರಲ್ಲಿ ಒಬ್ಬರು ಬಿಗ್​ ಬಾಸ್ ಮನೆಯಿಂದ ಔಟ್​ ಆಗಲಿದ್ದಾರೆ ಎಂದು ಸುದೀಪ್​ ತಿಳಿಸಿದ್ದರು. ಆಗ ಅವರಿಬ್ಬರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ ಆ ವಾರ ಯಾರೂ ಎಲಿಮಿನೇಟ್​ ಆಗಲ್ಲ ಎಂದು ನಂತರ ತಿಳಿಸಲಾಯಿತು. ಬಳಿಕ ಅವರಿಬ್ಬರು ನಿಟ್ಟುಸಿರು ಬಿಟ್ಟಿದ್ದರು. ಈಗ ಫಿನಾಲೆ ವಾರವನ್ನು ತಲುಪುವ ಅವಕಾಶ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: ‘ನನ್ನಿಂದ ತನಿಷಾನ ದೂರ ಮಾಡಿದ ಪಾಪಿ ಇವನು’: ಕಾರ್ತಿಕ್​ ಕಡೆ ಕೈ ತೋರಿಸಿದ ವರ್ತೂರು

ಅನೇಕ ಸವಾಲುಗಳನ್ನು ಎದುರಿಸಿ ವರ್ತೂರು ಸಂತೋಷ್​ ಅವರು ಫಿನಾಲೆ ವಾರಕ್ಕೆ ಬಂದಿದ್ದಾರೆ. ಬಿಗ್ ಬಾಸ್​ ಶೋ ಆರಂಭ ಆದ ಕೆಲವೇ ದಿನಗಳಲ್ಲಿ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿತ್ತು. ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಅವರನ್ನು ಅರೆಸ್ಟ್​ ಮಾಡಿ, ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿತ್ತು. ನಂತರ ಜಾಮೀನು ಪಡೆದು ಅವರು ವಾಪಸ್​ ಬಂದರು. ಮರಳಿ ಬಿಗ್​ ಬಾಸ್​ ಮನೆಗೆ ಬಂದರೂ ಕೂಡ ಅವರಿಗೆ ಅದೇ ಚಿಂತೆ ಕಾಡುತ್ತಿತ್ತು. ತಾವಾಗಿಯೇ ಆಟವನ್ನು ಅಂತ್ಯ ಮಾಡುವುದಾಗಿ ಅವರು ಕಣ್ಣೀರು ಹಾಕಿದ್ದರು. ಆದರೆ ಅದಕ್ಕೆ ಸುದೀಪ್​ ಅವರ ಅವಕಾಶ ನೀಡಿರಲಿಲ್ಲ. ತಾಯಿ ಬಂದು ಸಮಾಧಾನ ಮಾಡಿದ ಬಳಿಕ ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಮುಂದುವರಿಯಲು ನಿರ್ಧರಿಸಿದರು. ಈಗ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:52 am, Sun, 21 January 24