Vinay Gowda: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆದ ವಿನಯ್​ ಗೌಡ; ಯಾರಿಗೆಲ್ಲ ಕಾದಿದೆ ಸಂಕಷ್ಟ?

Bigg Boss Kannada: ವಿನಯ್​ ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ಹಲವರ ಜೊತೆ ಕಿರಿಕ್​ ಮಾಡಿಕೊಂಡಿದ್ದಾರೆ. ಬಹುತೇಕರೊಂದಿಗೆ ಅವರು ಜಗಳ ಮಾಡಿಕೊಂಡು ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶ ಸಿಕ್ಕಿದೆ. ಇದರಿಂದಾಗಿ ದೊಡ್ಮನೆಯಲ್ಲಿ ಅವರಿಗೆ ಒಂದಷ್ಟು ಅಧಿಕಾರ ಸಿಕ್ಕಂತಾಗಿದ್ದು, ಬೇರೆಯವರ ಮೇಲೆ ಇದು ಪರಿಣಾಮ ಬೀರಬಹುದು.

Vinay Gowda: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆದ ವಿನಯ್​ ಗೌಡ; ಯಾರಿಗೆಲ್ಲ ಕಾದಿದೆ ಸಂಕಷ್ಟ?
ವಿನಯ್​ ಗೌಡ

Updated on: Nov 03, 2023 | 1:09 PM

ಕಿರುತೆರೆ ನಟ ವಿನಯ್​ ಗೌಡ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ರಫ್​ ಆ್ಯಂಡ್​ ಟಫ್​ ಸ್ವಭಾವದಿಂದ ಅವರು ಗುರುತಿಸಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಾಗ ಅವರ ನಿಜವಾದ ವ್ಯಕ್ತಿತ್ವ ಹೇಗೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಬಿಗ್​ ಬಾಸ್​ (BBK 10) ಮನೆಯೊಳಗೆ ಅವರ ಅಸಲಿ ಸ್ವಭಾವ ಬಹಿರಂಗ ಆಗಿದೆ. ಎಲ್ಲರ ಮೇಲೂ ಅವರು ಕೂಗಾಡುತ್ತಾರೆ. ಜೋರು ಧ್ವನಿಯಲ್ಲಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ವಿನಯ್​ ಗೌಡ (Vinay Gowda) ಅವರಿಗೆ ಮಾತಿನ ಮೇಲೆ ಹಿಡಿತ ಇಲ್ಲ ಎಂಬ ಆರೋಪ ಕೂಡ ಇದೆ. ಈ ಎಲ್ಲ ಕಾರಣಕ್ಕಾಗಿ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲ ವಿರೋಧದ ನಡುವೆಯೂ ಅವರು ಕ್ಯಾಪ್ಟನ್​ ಆಗಿದ್ದಾರೆ. ಹಾಗಾಗಿ ಇನ್ನುಳಿದ ಸ್ಪರ್ಧಿಗಳ ಪೈಕಿ ಕೆಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿನಯ್​ ಅವರ ಜೊತೆ ಸಂಗೀತಾ ಶೃಂಗೇರಿ ಈಗಾಗಲೇ ಕಿರಿಕ್​ ಮಾಡಿಕೊಂಡಿದ್ದಾರೆ. ಮೊದಲಿನಿಂದಲೂ ಅವರಿಬ್ಬರ ನಡುವೆ ಜಗಳ ಆಗುತ್ತಲೇ ಇದೆ. ಟಾಸ್ಕ್ ವಿಚಾರದಲ್ಲಿ ಅವರಿಬ್ಬರು ಏಕವಚನದಲ್ಲಿ ಬೈಯ್ದುಕೊಂಡಿದ್ದಾರೆ. ಹಾಗಾಗಿ ಸಂಗೀತಾ ಶೃಂಗೇರಿ ಅವರನ್ನು ವಿನಯ್​ ಟಾರ್ಗೆಟ್​ ಮಾಡಬಹುದು. ಅಲ್ಲದೇ, ಇತ್ತೀಚೆಗಿನ ಹಳ್ಳಿ ಟಾಸ್ಕ್​ ವೇಳೆ ನಟಿ ತನಿಷಾ ಕುಪ್ಪಂಡ ಕೂಡ ವಿನಯ್​ ಜೊತೆ ಜಗಳ ಮಾಡಿದ್ದಾರೆ. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ಆಗಿದೆ. ಆದ್ದರಿಂದ ತನಿಶಾ ಕುಪ್ಪಂಡ ವಿಚಾರದಲ್ಲಿ ವಿನಯ್​ ಅವರು ಕಟ್ಟುನಿಟ್ಟಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ.

ಡ್ರೋನ್​ ಪ್ರತಾಪ್​ ಅವರನ್ನು ವಿನಯ್​ ಗೌಡ ಅವರು ಈಗಾಗಲೇ ಟಾರ್ಗೆಟ್​ ಮಾಡಿದ್ದಾರೆ. ಪದೇ ಪದೇ ಪ್ರತಾಪ್​ ಅವರನ್ನು ವಿನಯ್​ ಹೀಯಾಳಿಸಿದ್ದಾರೆ. ಇತ್ತೀಚೆಗೆ ನಾಮಿನೇಷನ್​ ಪಾಸ್​ ಪಡೆದುಕೊಂಡಿದ್ದ ಪ್ರತಾಪ್​ ಅವರು ಬಹುತೇಕ ಮಹಿಳಾ ಸದಸ್ಯರನ್ನೇ ಸೇವ್​ ಮಾಡಿದರು. ಇದು ವಿನಯ್ ಅವರಿಗೆ ಹಿಡಿಸಲಿಲ್ಲ. ಹೀಗೆಯೇ ಆಗುತ್ತದೆ ಎಂದು ಅವರು ಮೊದಲೇ ಊಹಿಸಿದ್ದರು. ಪ್ರತಾಪ್​ ಅವರ ಬುದ್ಧಿಯನ್ನು ವಿನಯ್​ ಟೀಕಿಸುತ್ತಲೇ ಬಂದಿದ್ದಾರೆ. ಹಾಗಾಗಿ ಅವರ ಕ್ಯಾಪ್ಟೆನ್ಸಿಯಲ್ಲಿ ಪ್ರತಾಪ್​ಗೆ ಕಷ್ಟ ಆಗಬಹುದು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ

ಮೊದಲೇ ಹೇಳಿದಂತೆ ಸಂಗೀತಾ ಶೃಂಗೇರಿ ಮತ್ತು ವಿನಯ್​ ಗೌಡ ನಡುವೆ ವೈರತ್ವ ಮೂಡಿದೆ. ಕಾರ್ತಿಕ್​ ಮಹೇಶ್​ ಅವರು ಸಂಗೀತಾ ಜೊತೆ ಚೆನ್ನಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ಅವರು ಸಂಗೀತಾಗೆ ಬೆಂಬಲ ನೀಡುತ್ತಿದ್ದಾರೆ. ಈ ಕಾರಣದಿಂದಲೇ ಕಾರ್ತಿಕ್​ ಅವರನ್ನು ಕಂಡರೆ ವಿನಯ್​ಗೆ ಅಸಮಾಧಾನ ಇದೆ. ಅಲ್ಲದೇ ತಮ್ಮ ಎದುರಿಗೆ ಇರುವ ಟಫ್​ ಸ್ಪರ್ಧಿ ಎಂದು ಕಾರ್ತಿಕ್​ರನ್ನು ಅವರು ಪರಿಗಣಿಸುತ್ತಾರೆ. ಆದ್ದರಿಂದ ಕಾರ್ತಿಕ್​ ಅವರಿಗೂ ಈ ವಾರದ ಚಟುವಟಿಕೆಗಳು ಸ್ಪಲ್ಪ ಟಫ್​ ಆಗಬಹುದು. ಮೊದಲು ತಪ್ಪು ಮಾಡಿ, ಮನಬಂದಂತೆ ಮಾತನಾಡಿ, ನಂತರ ಕ್ಷಮೆ ಕೇಳುವುದನ್ನು ವಿನಯ್​ ರೂಢಿಸಿಕೊಂಡಿದ್ದಾರೆ. ಈಗ ಅವರ ಕೈಗೆ ಕ್ಯಾಪ್ಟೆನ್ಸಿ ಸಿಕ್ಕಿರುವುದರಿಂದ ಅವರ ಈ ವರ್ತನೆ ಇನ್ನಷ್ಟು ಹೆಚ್ಚಾದರೂ ಅಚ್ಚರಿ ಏನಿಲ್ಲ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us