ಹೃದ್ರೋಗ ತಜ್ಞ ಮಂಜುನಾಥ್ ದೇವೇಗೌಡರ ಅಳಿಯ ಆಗಿದ್ದು ಹೇಗೆ? ದೇವೇಗೌಡರು ಅಳಿಯನಿಗೆ ಕೊಟ್ಟ ಉಡುಗೊರೆ ಏನು?

|

Updated on: Apr 08, 2023 | 11:10 PM

Weekend With Ramesh: ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್, ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಆಗಿದ್ದು ಹೇಗೆ? ದೇವೇಗೌಡರು ಅಳಿಯನಿಗೆ ಕೊಟ್ಟ ಉಡುಗೊರೆ ಏನು?

ಹೃದ್ರೋಗ ತಜ್ಞ ಮಂಜುನಾಥ್ ದೇವೇಗೌಡರ ಅಳಿಯ ಆಗಿದ್ದು ಹೇಗೆ? ದೇವೇಗೌಡರು ಅಳಿಯನಿಗೆ ಕೊಟ್ಟ ಉಡುಗೊರೆ ಏನು?
ದೇವೇಗೌಡ-ಸಿಎನ್ ಮಂಜುನಾಥ್
Follow us on

ವೀಕೆಂಡ್ ವಿತ್ ರಮೇಶ್​ಗೆ (Weekend With Ramesh) ಈ ವಾರ ಅತಿಥಿಯಾಗಿ ಬಂದಿದ್ದ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ (Dr CN Manjunath) ಅವರು ಸಾಧಕರ ಕುರ್ಚಿಗೆ ಸಾರ್ಥಕತೆ ತಂದರು. ಸಾವಿರಾರು ಜೀವಗಳ ಉಳಿಸಿದ ವೈದ್ಯ ಮಂಜುನಾಥ್ ಅವರು ಕರ್ನಾಟಕದ ಹೆಮ್ಮೆಯ ರಾಜಕಾರಣಿ ದೇವೇಗೌಡರ ಅಳಿಯ ಸಹ ಹೌದು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರ ಜೀವನದ ಹಲವು ಮಜಲುಗಳು ತೆರೆದುಕೊಂಡವು, ಅದರಲ್ಲಿ ಅವರ ವಿವಾಹವೂ ಒಂದು. ಮಂಜುನಾಥ್ ಅವರು ದೇವೇಗೌಡರ (Deve Gowda) ಅಳಿಯರಾಗಿದ್ದು ಹೇಗೆ? ದೇವೇಗೌಡರು ಅಳಿಯನಿಗೆ ಕೊಟ್ಟ ಉಡುಗೊರೆ ಏನು? ತಿಳಿಯಲು ಮುಂದೆ ಓದಿ…

ದೇವೇಗೌಡರ ಊರು ಹಾಗೂ ವೈದ್ಯ ಮಂಜುನಾಥ್ ಅವರ ಊರು ಹತ್ತಿರವೇ. ದೇವೇಗೌಡರ ಕುಟುಂಬದ ಬಗ್ಗೆ ಮಂಜುನಾಥ ಅವರ ಕುಟುಂಬಕ್ಕೆ ಅಪಾರ ಗೌರವ. ಮಂಜುನಾಥ್ ಅವರು ಮೈಸೂರಿನಲ್ಲಿ ಎಂಎಸ್ ಮಾಡುವಾಗಲೇ ಅವರ ಮದುವೆಯನ್ನು ದೇವೇಗೌಡರ ಪುತ್ರಿ ಅನುಸೂಯ ಅವರೊಟ್ಟಿಗೆ ವಿವಾಹ ಮಾಡುವ ಬಗ್ಗೆ ಚರ್ಚೆಯಾಗಿ, ಸ್ವತಃ ಮಂಜುನಾಥ್ ಅವರು ದೇವೇಗೌಡರನ್ನು ಕಂಡು ಅವರ ಪುತ್ರಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಹೆಣ್ಣುಮಗುವಿನ ತಂದೆ ದೇವೇಗೌಡರು, ಮಂಜುನಾಥ್ ಅವರನ್ನು ಮೊದಲು ಅನುಮಾನದಿಂದಲೇ ಕಾಣುತ್ತಾರೆ. ”ನಾನು ವಿಧಾನಸಭೆ ಸದಸ್ಯನೂ ಅಲ್ಲ. ನನ್ನ ಬಳಿ ಎಲ್​ಐಸಿಯ 75000 ಹಣ ಬಿಟ್ಟರೆ ಬೇರೇನೂ ಇಲ್ಲ. ನನ್ನ ಬಳಿ ಹಣ ಇದೆಯೆಂದೋ ಅಥವಾ ರಾಜಕೀಯ ಕುಟುಂಬವೆಂದೋ ಮದುವೆಯಾಗಲು ಇಚ್ಚಿಸಿದ್ದರೆ ಆ ಭ್ರಮೆ ಬಿಟ್ಟು ಬಿಡಿ” ಎಂದರಂತೆ. ಅಲ್ಲದೆ ತಮ್ಮದೇ ಕಾರಿನಲ್ಲಿ ಮಂಜುನಾಥ ಅವರನ್ನು ಕಬ್ಬನ್ ಪಾರ್ಕ್​ಗೆ ಕರೆದೊಯ್ದು ಒಂದು ಗಂಟೆ ಅವರೊಡನೆ ಮಾತನಾಡಿದರಂತೆ. ಆದರೆ ಮಂಜುನಾಥ್ ಪಟ್ಟು ಬಿಡದೆ ಅನುಸೂಯರನ್ನು ಮದುವೆಯಾಗುವುದಾಗಿ ದೇವೇಗೌಡರನ್ನು ಒಪ್ಪಿಸಿದ್ದರು.

ಅದಾದ ಬಳಿಕ ಸರಳವಾಗಿ ಒಕ್ಕಲಿಗರ ಸಮುದಾಯ ಭವನದಲ್ಲಿ ಅನುಸೂಯ ಹಾಗೂ ಮಂಜುನಾಥ್ ಅವರ ವಿವಾಹವಾಯಿತು. ದೇವೇಗೌಡರಿಂದ ಏನೊಂದು ಉಡುಗೊರೆಯನ್ನೂ ಮಂಜುನಾಥ್ ಅವರು ಸ್ವೀಕರಿಸಲಿಲ್ಲ. ದೇವೇಗೌಡರು ಸೂಟ್ ಒಂದನ್ನು ಮಂಜುನಾಥ್ ಅವರಿಗಾಗಿ ಹೊಲಿಸಿದ್ದರಂತೆ ಅದನ್ನೂ ಸಹ ನಿರಾಕರಿಸಿದ್ದರಂತೆ ಮಂಜುನಾಥ್. ಆದರೆ ದೇವೇಗೌಡರು ಮಂಜುನಾಥ್ ಅವರಿಗೆ ಒಂದು ಉಂಗುರ ನೀಡಿದರಂತೆ. ಅದನ್ನು ಮಂಜುನಾಥ್ ಅವರು ಸದಾ ಧರಿಸಿರುತ್ತಾರೆ. ಆ ಒಂದು ಉಂಗುರದ ಹೊರತಾಗಿ ಇನ್ನಾವ ಚಿನ್ನದ ಆಭರಣವನ್ನು ಮಂಜುನಾಥ್ ಧರಿಸುವುದಿಲ್ಲ. ‘ಅದು ನನ್ನ ಅತ್ತೆ-ಮಾವ ಆಶೀರ್ವಾದ ಮಾಡಿ ಕೊಟ್ಟಿರುವ ಉಂಗುರ’ ಎಂಬುದು ಮಂಜುನಾಥ್ ಅವರ ವಿನಯಪೂರ್ಣ ಮಾತು.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್​ಗೆ ಬರ್ತಾರಾ ಡಾ ಬ್ರೋ? ರಮೇಶ್ ಅರವಿಂದ್ ಹೇಳಿದ್ದು ಹೀಗೆ…

ಮಂಜುನಾಥ್ ಅವರು ಹಣಕ್ಕಾಗಿಯೋ ಅಥವಾ ರಾಜಕೀಯ ಮಹಾತ್ವಾಕಾಂಕ್ಷೆಗೊ ಮಗಳನ್ನು ಮದುವೆಯಾಗಲು ಬಯಸಿದ್ದಾರೆ ಎಂಬ ಅನುಮಾನ ದೇವೇಗೌಡರಿಗೆ ಬರಲು ಕಾರಣ ಏನೆಂಬುದನ್ನು ಅನುಸೂಯ ಅವರು ತಿಳಿಸಿದರು. ಮಂಜುನಾಥ್ ಅವರು ನೋಡಲು ಬರುವ ಮುನ್ನ ಎಂಎಸ್​ಸಿ ಅಗ್ರಿಕಲ್ಚರ್ ಮಾಡಿದ ವ್ಯಕ್ತಿಯೊಬ್ಬ ಅನುಸೂಯ ಅವರನ್ನು ನೋಡಿ ಹೋಗಿದ್ದರಂತೆ. ಆದರೆ ಅದಾದ ಕೆಲವೇ ದಿನಕ್ಕೆ ಅನುಸೂಯ ಅವರ ಹೆಸರಲ್ಲಿ ಎಷ್ಟು ಎಫ್​ಡಿ ಇಟ್ಟಿದ್ದೀರಿ ಎಂದು ಕೇಳಿದ್ದನಂತೆ, ಹಣ ಇಟ್ಟಿಲ್ಲವೆಂದಾಗ ಮದುವೆ ಆಗುವುದಿಲ್ಲವೆಂದಿದ್ದನಂತೆ. ಅದೇ ಕಾರಣಕ್ಕೆ ಆರಂಭದಲ್ಲಿ ಮಂಜುನಾಥ್ ಅವರನ್ನು ಅನುಮಾನಿಸಲು ಕಾರಣ. ಆದರೆ ದೇವೇಗೌಡರ ಪತ್ನಿ ಚೆನ್ನಮ್ಮನವರಿಗೆ ಅನುಸೂಯ ಅವರನ್ನು ಮಂಜುನಾಥ್ ಅವರಿಗೇ ಕೊಟ್ಟು ವಿವಾಹ ಮಾಡಬೇಕು ಎಂಬ ಆಸೆ ಹೆಚ್ಚಿತಂತೆ. ವೀಕೆಂಡ್ ವಿತ್ ರಮೇಶ್​ನಲ್ಲಿ ಮಾತನಾಡಿದ ಚೆನ್ನಮ್ಮನವರು, ನನ್ನ ಅಳಿಯ ಮಹಾನ್ ಬುದ್ಧಿವಂತ, ಮಹಾನ್ ಸಮಾಜ ಸೇವಕ ಎಂದು ಹೊಗಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ