ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?

|

Updated on: Jan 12, 2024 | 11:45 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಅಂತ್ಯವಾಗಲು ಬಂದಿದೆ. ಈ ಸೀಸನ್​ನ ಕೊನೆಯ ಉತ್ತಮ ಹಾಗೂ ಕೊನೆಯ ಕಳಪೆ ಇಂದು ನಿರ್ಧಾರವಾಯ್ತು.

ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?
Follow us on

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಅಂತ್ಯವಾಗುತ್ತಿದೆ. ಈ ಸೀಸನ್​ನ ಒಬ್ಬ ಫೈನಲಿಸ್ಟ್ ಈಗಾಗಲೇ ಸಿಕ್ಕಿದ್ದಾರೆ. ಅದುವೇ ಸಂಗೀತಾ ಶೃಂಗೇರಿ. ಸೀಸನ್​ನ ಮೊದಲಿನಿಂದಲೂ ಅದ್ಭುತವಾಗಿ ಆಡಿದ, ತಮ್ಮ ಗಟ್ಟಿತನದಿಂದ ಮನೆಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಎದುರಿಸಿದ ಸಂಗೀತಾ ಶೃಂಗೇರಿ ಫಿನಾಲೆಗೆ ತಲುಪಿದ್ದಾರೆ. ಇನ್ನೊಬ್ಬ ಫೈನಲಿಸ್ಟ್ ಯಾರು ಹಾಗೂ ಅಂತಿಮವಾಗಿ ಗೆಲ್ಲುವುದು ಯಾರು ಎಂಬುದಷ್ಟೆ ಗೊತ್ತಾಗಬೇಕಿದೆ. ಅದಕ್ಕೆ ಹೆಚ್ಚೇನು ಸಮಯ ಉಳಿದಿಲ್ಲ. ಈ ನಡುವೆ ಮನೆಯಲ್ಲಿ ಕೊನೆ ಉತ್ತಮ ಹಾಗೂ ಕಳಪೆ ಪ್ರಕ್ರಿಯೆಯೂ ನಡೆದಿದೆ.

ಈ ಸೀಸನ್​ನ ಕೊನೆಯ ಉತ್ತಮ ದೊರಕಿದ್ದು ಡ್ರೋನ್ ಪ್ರತಾಪ್​ಗೆ. ಈ ವಾರವೆಲ್ಲ ಎಲ್ಲ ಟಾಸ್ಕ್​ಗಳಲ್ಲಿಯೂ ಅದ್ಭುತವಾಗಿ ಆಡಿ ಎಲ್ಲರಿಗಿಂತಲೂ ಅತಿ ಹೆಚ್ಚು ಅಂಕ ಗಳಿಸಿದ ಡ್ರೋನ್ ಪ್ರತಾಪ್​ಗೆ ಮನೆಯ ಹಲವು ಸ್ಪರ್ಧಿಗಳು ಉತ್ತಮ ಎಂದು ಮತ ಚಲಾಯಿಸಿದರು. ಫಿನಾಲೆ ಟಿಕೆಟ್ ಕಳೆದುಕೊಂಡ ದುಃಖದಲ್ಲಿಯೇ ಪ್ರತಾಪ್, ಮನೆಯ ಕೊನೆಯ ಉತ್ತಮ ಎನಿಸಿಕೊಂಡರು. ಬಿಗ್​ಬಾಸ್ ಕನ್ನಡ ಸೀಸನ್ 10ರ ಕಟ್ಟ ಕಡೆಯ ಕಳಪೆ ಪ್ರಾಪ್ತಿಯಾಗಿದ್ದು ತುಕಾಲಿ ಸಂತುಗೆ. ಎಲ್ಲರೂ ತುಕಾಲಿಗೆ ಕಳಪೆ ಪಟ್ಟ ನೀಡಲಿಲ್ಲವಾದರೂ ಹೆಚ್ಚಿನ ಸ್ಪರ್ಧಿಗಳು ತುಕಾಲಿಗೆ ಕಳಪೆ ನೀಡಿದ್ದರಿಂದಾಗಿ ತುಕಾಲಿಯನ್ನು ಕಳಪೆ ಎಂದು ತೀರ್ಮಾನಿಸಿ ಜೈಲಿಗೆ ಕಳಿಸಲಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ

ಸೀಸನ್​ನ ಕೊನೆಯ ಉತ್ತಮ-ಕಳಪೆಯಲ್ಲಿ ವಿಶೇಷವೂ ಇದೆ. ಸೀಸನ್ ಆರಂಭವಾದ ಮೊದಲ ವಾರದಲ್ಲಿ ಇದೇ ತುಕಾಲಿ ಸಂತು, ಈಗ ಉತ್ತಮ ಆಗಿರುವ ಡ್ರೋನ್ ಪ್ರತಾಪ್ ಅನ್ನು ಬಹುವಾಗಿ ವ್ಯಂಗ್ಯ ಮಾಡಿದ್ದರು, ಹೀಗಳೆದಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಪ್ರತಾಪ್, ಮನೆಯಲ್ಲಿ ಒಂಟಿಯಾಗಿಬಿಟ್ಟಿದ್ದರು. ಬಾತ್​ರೂಂಗೆ ಹೋಗಿ ಅಳುತ್ತಿದ್ದರು. ಆ ವಾರದ ಅಂತ್ಯದಲ್ಲಿ ಕಿಚ್ಚ ಸುದೀಪ್, ತುಕಾಲಿಗೆ ಸೂಕ್ತವಾಗಿ ಬುದ್ಧಿ ಹೇಳಿದ್ದರು. ಆದರೆ ಈಗ ತುಕಾಲಿ ಕಳಪೆ ಆಗಿದ್ದು, ಮೊದಲ ವಾರ ತುಕಾಲಿಯಿಂದ ವ್ಯಂಗ್ಯಕ್ಕೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ ಉತ್ತಮ ಎನಿಸಿಕೊಂಡಿದ್ದಾರೆ.

ಕಳಪೆ ಪಡೆದುಕೊಂಡ ತುಕಾಲಿ ಸಂತು, ಇದನ್ನು ನಾನು ಒಪ್ಪುವುದಿಲ್ಲ, ಕೆಲವೇ ನಿಮಿಷಗಳು ನಡೆಯುವ ಟಾಸ್ಕ್​ನ ಆಧಾರದಲ್ಲಿ ಕಳಪೆ ನೀಡುವುದು ಸರಿಯಾದ ಕ್ರಮವಲ್ಲ. ನನಗೆ ಇದು ಒಪ್ಪಿಗೆ ಇಲ್ಲ ಆದರೆ ನಿಯಮದ ಪ್ರಕಾರ ಒಪ್ಪಲೇ ಬೇಕಿದೆ ಎಂಬ ಕಾರಣಕ್ಕೆ ನಾನು ಇದನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದರು. ತುಕಾಲಿ ಪರವಾಗಿ ನಿಂತ ವರ್ತೂರು ಸಂತು, ‘ನಾನು ಇಲ್ಲಿಯೇ ಕೂತಿರುತ್ತೇನೆ. ಜೈಲಿನ ಪಕ್ಕದಲ್ಲಿಯೇ ಇರುತ್ತೀನಿ. ಜೈಲು ಬಹಳ ಒಳ್ಳೆಯ ಸ್ಥಳ, ಇಲ್ಲಿಗೆ ಹೋಗಿ ಹೊರಗೆ ಬಂದವರು ಇತಿಹಾಸ ನಿರ್ಮಿಸುತ್ತಾರೆ. ಹೋಗಿ ಬಾ’ ಎಂದು ಹುರುಪು ತುಂಬಿ ಅವರನ್ನು ಒಳಗೆ ಕಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ